ತುಮಕೂರು: ಜಿಲ್ಲೆಯ ವಿವಿಧ ಬ್ಯಾಂಕ್ ಗಳ ನಿಷ್ಕ್ರಿಯ ಖಾತೆಗಳಲ್ಲಿರುವ 110.45 ಕೋಟಿ ಹಣವನ್ನು ವಾರಸುದಾರರಿಗೆ ತಲುಪಿಸಲು ಮೂರು ತಿಂಗಳ ಕಾಲ ‘ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನವನ್ನು ಆರ್ ಬಿಐ ಹಮ್ಮಿಕೊಂಡಿದೆ.
ನಗರದ ಶುಕ್ರವಾರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಬ್ಯಾಂಕ್ ವ್ಯವಸ್ಥಾಪಕ ಚೈತನ್ಯ ಕಂಚಿಬೈಲು ಈ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 26 ಬ್ಯಾಂಕ್ ಗಳ 373 ಶಾಖೆಗಳಲ್ಲಿ 4,11,477 ಖಾತೆಗಳು ನಿಷ್ಕ್ರಿಯಗೊಂಡಿವೆ. ಈ ಖಾತೆಗಳಲ್ಲಿ ಒಟ್ಟು 110.45 ಕೋಟಿ ಹಣ ಇದೆ. ಸಂಬಂಧಿಸಿದವರು ಅಗತ್ಯ ದಾಖಲೆ ಸಲ್ಲಿಸಿ ಖಾತೆ ಸಕ್ರಿಯಗೊಳಿಸಬಹುದು. 10 ವರ್ಷಗಳಿಂದ ಖಾತೆ ನಿಷ್ಕ್ರಿಯಗೊಂಡಿದ್ದರೆ ಅದು ಆರ್ ಬಿಐಗೆ ವರ್ಗಾವಣೆ ಆಗಿರುತ್ತದೆ. ಅಂತಹ ಖಾತೆಯನ್ನೂ ಸಕ್ರಿಯಗೊಳಿಸಲಾಗುವುದು ಎಂದರು.
ಮೃತಪಟ್ಟ ಗ್ರಾಹಕರ ಸಂಬಂಧಿಕರು ಅಗತ್ಯ ದಾಖಲೆ ನೀಡಿ ಖಾತೆಯಲ್ಲಿರುವ ಹಣ ಪಡೆಯಬಹುದು. ನಿಷ್ಕ್ರಿಯಗೊಂಡಿರುವ ಬ್ಯಾಂಕ್ ಖಾತೆ ಸಕ್ರಿಯಗೊಳಿಸುವ ಪ್ರಕ್ರಿಯೆ ಡಿಸೆಂಬರ್ ವರೆಗೆ ನಡೆಯಲಿದೆ ಎಂದು ಹೇಳಿದರು.
ಆರ್ ಬಿಐ ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರಭಾಕರನ್, ‘ಜನರಿಗೆ ಜಾಗೃತಿ ಮೂಡಿಸಿ ಖಾತೆ ಸಕ್ರಿಯಗೊಳಿಸಬೇಕು ಎಂದರು.
ಎಲ್ ಐಸಿ ಅಧಿಕಾರಿ ಅನಿತಾಶ್ರೀ, ಜಿಲ್ಲೆಯಲ್ಲಿ ನಿಷ್ಕ್ರಿಯ ವಿಮಾ ಖಾತೆಗಳಲ್ಲಿ 120 ಕೋಟಿ ಹೆಚ್ಚು ಮೊತ್ತವಿದ್ದು, ಅದನ್ನು ಪಡೆದುಕೊಳ್ಳಬಹುದು’ ಎಂದು ಮಾಹಿತಿ ನೀಡಿದರು.
ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ನರಸಿಂಹಮೂರ್ತಿ, ವಿವಿಧ ಬ್ಯಾಂಕ್ ಅಧಿಕಾರಿಗಳಾದ ಟಿ.ಕೆ.ಸುರೇಂದ್ರ, ದೊರೆರಾಜ್, ಗಂಗೇಶ್ ಗುಂಜನ್, ಮೋಹನ್ ಸಾಯಿ ಗಣೇಶ್, ಸುಬ್ರಮಣ್ಯಂ ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


