ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದು ಪರಿಗಣಿಸಲ್ಪಟ್ಟ ಎಂಎಸ್ ಸ್ವಾಮಿನಾಥನ್ ಗುರುವಾರ ಚೆನ್ನೈನಲ್ಲಿ ನಿಧನರಾದರು. ಸ್ವಾಮಿನಾಥನ್ ಅವರು ಎಂಎಸ್ ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ (ಎಂಎಸ್ಎಸ್ಆರ್ಎಫ್) ಸ್ಥಾಪಕರಾಗಿದ್ದರು.
ಸ್ವಾಮಿನಾಥನ್, ಭಾರತ ದೇಶದ ಹಸಿರು ಕ್ರಾಂತಿಯ ಹರಿಕಾರರೆಂದು ಪ್ರಸಿದ್ಧರಾಗಿದ್ದಾರೆ. ಅವರು ಆಗಸ್ಟ್ ೭, ೧೯೨೫ ರಂದು ಜನಿಸಿದ್ದರು. ಸ್ವಾಮಿನಾಥನ್ ಅವರ ತಂದೆ ಮೂಲತಃ ವೈದ್ಯರಾಗಿದ್ದು ಮಹಾತ್ಮ ಗಾಂಧೀಜಿಯವರ ಅನುಯಾಯಿಗಳಾಗಿದ್ದರು. ತಮ್ಮ ಪ್ರಾರಂಭಿಕ ಶಿಕ್ಷಣದ ನಂತರದಲ್ಲಿ ಸ್ವಾಮಿನಾಥನ್ ಅವರು ಕೃಷಿ ಪದವಿಗಾಗಿ ಓದಿದರು.
ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ 11:15 ಕ್ಕೆ ತೆಯ್ನಾಂಪೇಟೆಯ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ಕುಟುಂಬ ಮೂಲಗಳು ಖಚಿತಪಡಿಸಿವೆ. ಅವರಿಗೆ 98 ವರ್ಷ ವಯಸ್ಸಾಗಿತ್ತು.