ತುಮಕೂರು: ಬಾಲಕಿ ಮೇಲೆ ದಾಳಿ ಮಾಡಿ ಹೊತ್ತೊಯಲು ಯತ್ನಿಸಿದ ಚಿರತೆಯಿಂದ ತಂದೆಯೇ ಮಗಳನ್ನು ಕಾಪಾಡಿದ ಘಟನೆ ತುಮಕೂರು ತಾಲೂಕಿನ ಚಿಕ್ಕಬೆಳ್ಳಾವಿ ಗ್ರಾಮದಲ್ಲಿ ನಡೆದಿದೆ.
7 ವರ್ಷ ವಯಸ್ಸಿನ ಲೇಖನ ಚಿರತೆ ದಾಳಿಗೆ ಒಳಗಾದವಳು. ಚಿರತೆ ಬಾಲಕಿಯನ್ನು ಹೊತ್ತೊಯಲು ಯತ್ನಿಸುತ್ತಿದ್ದ ವೇಳೆ ತಂದೆ ಚಿರತೆಯಿಂದ ಬಾಲಕಿಯನ್ನು ರಕ್ಷಿಸಿದ್ದಾರೆ.
ರಾಕೇಶ್, ಹರ್ಷಿತ ದಂಪತಿಯ ಮಗು ಲೇಖನ ಮನೆ ಮುಂದೆ ಆಟವಾಡುತ್ತಿದ್ದಾಗ ದಾಳಿ ನಡೆಸಿದೆ. ಮಂಗಳವಾರ ಸಂಜೆ ಘಟನೆ ನಡೆದಿದ್ದು ಚಿರತೆಯು ಏಕಾಏಕಿ ಮಗುವಿನ ಮೇಲೆ ದಾಳಿ ಮಾಡಿದೆ ಈ ವೇಳೆ ಸ್ಥಳದಲ್ಲಿಯೇ ಇದ್ದ ತಂದೆ ರಾಕೇಶ್ ಜೋರಾಗಿ ಕೂಗಿ ದೊಣ್ಣೆಯಿಂದ ಚಿರತೆಯನ್ನು ಬೆದರಿಸಿದ್ದಾರೆ. ಆಗ ಚಿರತೆಯು ಮಗುವನ್ನು ಬಿಟ್ಟು ಅಲ್ಲಿಂದ ಪರಾರಿಯಾಗಿದೆ.
ಮಗುವಿನ ಕಾಲಿಗೆ ಚಿರತೆ ಪರಚಿತ ಗಾಯಗಳಾಗಿದ್ದು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಸಂಬಂಧ ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.