ತುಮಕೂರು: ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಗೆ ಹೆರಿಗೆ ಮಾಡಿಸಲು 3 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞೆಯಾದ ಡಾ.ಸಿ.ಎನ್.ಮಹಾಲಕ್ಷ್ಮಮ್ಮ ಎಂಬವರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರಿಗೆ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಇಲ್ಲಿನ 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಯಾಸ್ಮೀನ ಪರವೀನ ಲಾಡಖಾನ ಅವರು ತೀರ್ಪು ಪ್ರಕಟಿಸಿದರು.
ನಗರದ ಕೋತಿತೋಪು ನಿವಾಸಿ ಮುಕುಂದ ಎಂಬವರು ನಾದಿನಿ ಸವಿತಾ ಎಂಬವರನ್ನು 2021 ಫೆಬ್ರವರಿ 2ರಂದು ಹೆರಿಗೆ ನೋವಿನ ಕಾರಣ ತುಮಕೂರಿನ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಇವರಿಗೆ ಹೆರಿಗೆ ಮಾಡಿಸಲು ಡಾ.ಸಿ.ಎನ್.ಮಹಾಲಕ್ಷ್ಮಮ್ಮ 3 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ನಾದಿನಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಅನಿವಾರ್ಯವಾಗಿ 2 ಸಾವಿರ ರೂ. ಲಂಚ ನೀಡಲು ಒಪ್ಪಿ ರಾತ್ರಿ 9.30 ಗಂಟೆಗೆ ‘ಡಿ’ ಗ್ರೂಪ್ ನೌಕರ ಬರಕತ್ ಅಲಿ ಎಂಬಾತನಿಗೆ 2 ಸಾವಿರ ಕೊಡಿಸಿ, ನಂತರ ಬರಕತ್ ಅಲಿ ಮೂಲಕ ಲಂಚದ ಹಣವನ್ನು ಆರೋಪಿ ವೈದ್ಯೆ ಪಡೆದುಕೊಂಡಿದ್ದರು. ಈ ಕುರಿತು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಫೆ.4ರಂದು ಮುಕುಂದ ಜಿ.ಟಿ. ಅವರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದ ಮೇರೆಗೆ ಪ್ರಕರಣ ದಾಖಲಾಗಿತ್ತು. ಡಿಎಸ್ ಪಿ ಮಲ್ಲಿಕಾರ್ಜುನ ಚುಕ್ಕಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಟ್ರ್ಯಾಪ್ ಪ್ರಕರಣವನ್ನು ನ್ಯಾಯಾಲಯದ ವಿಶೇಷ ಪ್ರಕರಣ ಸಂಖ್ಯೆ:492/2024ರಲ್ಲಿ ವಿಚಾರಣೆ ನಡೆಸಿ ಆರೋಪಿ ವೈದ್ಯೆ ದೋಷಿ ಎಂದು ಸೆ.19, 2025ರಂದು ಘೋಷಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಐದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಇಪ್ಪತ್ತು ಸಾವಿರ ರೂ. ದಂಡ ಹಾಗೂ ದಂಡ ಕಟ್ಟಲು ವಿಫಲರಾದಲ್ಲಿ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ.
ಲೋಕಾಯುಕ್ತ ಸಂಸ್ಥೆಯ ಪರವಾಗಿ ಎನ್.ಬಸವರಾಜು, ವಿಶೇಷ ಸಾರ್ವಜನಿಕ ಅಭಿಯೋಜಕರು ವಾದ ಮಂಡಿಸಿದ್ದರು. ಡಾ.ಸಿ.ಎನ್.ಮಹಾಲಕ್ಷ್ಮಮ್ಮ ನಿವೃತ್ತಿಯಾಗಿದ್ದು ಇದೀಗ ಶಿಕ್ಷೆ ಪ್ರಕಟವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC