ಕೊರಟಗೆರೆ: ಕರ್ನಾಟಕದ ಕನ್ನಡಿಗರಿಗೆ ನವಂಬರ್-1 ಹೆಮ್ಮೆಯ ದಿನವಾಗಿದೆ. ಕರ್ನಾಟಕದ ಪ್ರತಿ ಮನೆಯಲ್ಲಿ ಇಂದು ಹಬ್ಬದ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಣೆ ಮಾಡಿದ್ದಾರೆ. ರಾಜ್ಯ ಸರಕಾರದ ಕೋಟಿಕಂಠ ಗಾಯನ ಎನ್ನುವ ವಿಶಿಷ್ಟ ಕಾರ್ಯಕ್ರಮವು ಕನ್ನಡಿಗರ ಗಮನ ಸೆಳೆದಿದೆ ಎಂದು ಕೊರಟಗೆರೆ ತಹಶೀಲ್ದಾರ್ ನಾಹೀದಾ ಜಮ್ ಜಮ್ ಹೇಳಿದರು.
ಕೊರಟಗೆರೆ ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಕೊರಟಗೆರೆ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ 67ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯವು ಹತ್ತಾರು ವಿಸ್ಮಯ ಪ್ರಕೃತಿಯನ್ನು ಒಳಗೊಂಡಿದೆ. ನಮ್ಮ ನಾಡು ಶ್ರೀಗಂಧದ ಬೀಡು. ಹಚ್ಚಹಸುರಿನ ಸುಂದರ ಬೆಟ್ಟಗುಡ್ಡಗಳ ಗೂಡು, ಪವಿತ್ರ ಕಾವೇರಿ, ತುಂಗಾಭದ್ರೆ ನದಿಗಳು ಹರಿಯುವ, ಸಾಧುಸಂತರು, ದಾಸರು, ಶಿವಶರಣರು, ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಎಂಬ ಹೆಸರೇ ಒಂದು ಧೀಮಂತ ಶಕ್ತಿ ಈ ನಾಡಿಗೆ ಎಂದು ಹೇಳಿದರು.
ಕೊರಟಗೆರೆ ಪಪಂ ಅಧ್ಯಕ್ಷೆ ಕಾವ್ಯ ರಮೇಶ್ ಮಾತನಾಡಿ, ಆಲೂರು ವೆಂಕಟರಾವ್ 1905ರಲ್ಲಿ ಕರ್ನಾಟಕ ಏಕೀಕರಣ ಚಳುವಳಿಯೊಂದಿಗೆ ರಾಜ್ಯವನ್ನು ಏಕೀಕರಿಸುವ ಕನಸು ಕಂಡ ಮೊದಲ ವ್ಯಕ್ತಿ. 1950ರಲ್ಲಿ ಭಾರತ ದೇಶವು ಗಣರಾಜ್ಯವಾದ ನಂತರ ನಿರ್ದೀಷ್ಟ ಪ್ರದೇಶದಲ್ಲಿ ಮಾತನಾಡುವ ಭಾಷೆಯ ಆಧಾರದ ಮೇಲೆ ದೇಶದಲ್ಲಿ ವಿವಿಧ ಪ್ರಾಂತ್ಯಗಳ ರಚನೆಯಾಗಿದೆ. ಈ ತರ್ಕಕ್ಕೆ ಅನುಗುಣವಾಗಿ 1973ರ ನ.1ರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಕರ್ನಾಟಕ ಎಂದು ಬದಲಾವಣೆ ಮಾಡಿದ್ದಾರೆ ಎಂದು ತಿಳಿಸಿದರು.
ವಿವಿಧ ಕ್ಷೇತ್ರದ 16 ಸಾಧಕರಿಗೆ ಸನ್ಮಾನ:
ಕೃಷಿ ಕ್ಷೇತ್ರದಿಂದ ಬರಕ ಗ್ರಾಮದ ರೈತ ದೊಡ್ಡಯ್ಯ, ಚಿಕ್ಕನಹಳ್ಳಿಯ ಶಿವಣ್ಣ, ಮಾದ್ಯಮ ಕ್ಷೇತ್ರದಿಂದ ಸಿದ್ದರಾಜು.ಕೆ, ನಾಗೇಂದ್ರ.ಟಿ.ಸಿ, ಸರಕಾರಿ ನೌಕರ ಕ್ಷೇತ್ರದಿಂದ ಬುಕ್ಕಾಪಟ್ಟಣ ಕಾಂತರಾಜು, ಕನ್ನಡಪರ ಹೋರಾಟ ಕ್ಷೇತ್ರದಿಂದ ಪ್ರಸನ್ನಕುಮಾರ್, ಖಲೀಂವುಲ್ಲಾ, ಕ್ರೀಡಾ ಕ್ಷೇತ್ರದಿಂದ ವಿಜಯಲಕ್ಷ್ಮೀ, ರಾಮಚಂದ್ರಶರ್ಮ, ಸಾಹಿತ್ಯ ಕ್ಷೇತ್ರದಿಂದ ಮಧುಸೂಧನ, ತಿಮ್ಮರಾಜು, ಸಮಾಜಸೇವೆಯಿಂದ ರಮೇಶ್, ರಂಗಭೂಮಿ ವೆಂಕಟಪ್ಪ, ಮಾವತ್ತೂರು ಜಯಶ್ರೀ, ರವಿಕುಮಾರ್, ನರೇಂದ್ರರವರನ್ನು ಕೊರಟಗೆರೆ ಆಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
56 ಅಡಿಯ ಕನ್ನಡ ಧ್ವಜಸ್ತಂಭ ಲೋಕಾರ್ಪಣೆ:
ಕರ್ನಾಟಕ ರಣಧೀರರ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ಶೆಟ್ಟಿ), ಕನ್ನಡ ಪ್ರತಿಷ್ಠಾನ(ರಿ) ಮತ್ತು ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಕೊರಟಗೆರೆ ಪಟ್ಟಣದ ಸರಕಾರಿ ಬಸ್ ನಿಲ್ದಾಣದ ಮುಂಭಾಗ ನಿರ್ಮಾಣ ಮಾಡಿರುವ 56ಅಡಿ ಎತ್ತರದ ಕನ್ನಡ ಧ್ವಜಸ್ತಂಭವನ್ನು ಪಪಂ ಅಧ್ಯಕ್ಷೆ ಕಾವ್ಯ ರಮೇಶ್, ಕರ್ನಾಟಕ ರಣಧೀರರ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ದೇವರಾಜು ಕೆ.ಎನ್., ಕರವೇ ಅಧ್ಯಕ್ಷ ಕೆ.ಎನ್.ನಟರಾಜ್, ಮಂಜು ಸ್ವಾಮಿ ಎಂ.ಎನ್., ಹರೀಶ್.ಬಿ.ಸಿ, ಡಾ.ಡಿ.ವೆಂಕಟೇಶ್ ಲೋಕಾರ್ಪಣೆ ಮಾಡಿ 7 ಅಡಿ ಅಗಲ 13ಅಡಿ ಉದ್ದದ ಕನ್ನಡ ಬಾವುಟವನ್ನು ಆಕಾಶದ ಎತ್ತರಕ್ಕೆ ಆರಿಸುವ ಮೂಲಕ ನೂರಾರು ಕನ್ನಡಪರ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
ಪ್ರಕೃತಿಯ ಮಡಿಲಲ್ಲಿ ಕನ್ನಡ ರಾಜ್ಯೋತ್ಸವ:
ಕೊರಟಗೆರೆ ಪಟ್ಟಣದ ಗಂಗಾಧರೇಶ್ವರ ಸ್ವಾಮಿಯ ಬೆಟ್ಟದ ಪ್ರಕೃತಿಯ ಮಡಿಲಿನಲ್ಲಿ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್, ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಮಹಾಲಿಂಗಪ್ಪ ಮತ್ತು ಪಪಂ ಸದಸ್ಯರ ನೇತೃತ್ವದಲ್ಲಿ ನೂರಾರು ಜನ ಕನ್ನಡಪರ ಕಾರ್ಯಕರ್ತರು ಹಾಗೂ ಜೆಡಿಎಸ್ ಮುಖಂಡರು ಜೊತೆಗೂಡಿ ಧ್ವಜಸ್ತಂಭ ಪ್ರತಿಷ್ಟಾಪನೆ ಮಾಡುವುದರ ಜೊತೆಯಲ್ಲಿ ಕನ್ನಡ ಬಾವುಟವನ್ನು ಹಾರಿಸುವ ಮೂಲಕ ಸಂಭ್ರಮಿಸಿದ್ದಾರೆ.
ಕಾರ್ಯಕ್ರಮದಲ್ಲಿ ಪ.ಪಂ. ಉಪಾಧ್ಯಕ್ಷೆ ಭಾರತಿ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎನ್.ನಟರಾಜ್, ಸದಸ್ಯರಾದ ಬಲರಾಮಯ್ಯ, ಹುಸ್ನಾಫಾರಿಯಾ, ತಾಪಂ ಇಓ ಡಾ.ಡಿ.ದೊಡ್ಡಸಿದ್ದಯ್ಯ, ಬಿಇಓ ಸುಧಾಕರ್, ಪಪಂ ಮುಖ್ಯಾಧಿಕಾರಿ ಭಾಗ್ಯಮ್ಮ, ಸಿಡಿಪಿಓ ಅಂಬಿಕಾ, ಅಬಕಾರಿ ಇಲಾಖೆಯ ಶ್ರೀಲತಾ, ಅರಣ್ಯ ಇಲಾಖೆಯ ಸುರೇಶ್, ಸಿಪಿಐ ಸುರೇಶ್.ಕೆ, ಪಿಎಸೈ ಚೇತನ್ ಸೇರಿದಂತೆ ಇತರರು ಇದ್ದರು.
ವರದಿ : ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz