ಅದು ಒಂದೇ ಕುಟುಂಬ, ಒಂದೇ ಬುಡಕಟ್ಟು,ಒಂದೇ ಮನೆ ದೇವರಿಗೆ ಪೂಜೆ ಮಾಡೋ ಕುಟುಂಬವದು,ಒಟ್ಟು 20 ಕುಟುಂಬ ಇರುವವರಿಗೆ ಅದೊಂದು ಶಾಪ ಕಾಡುತ್ತಿದೆ,ಪ್ರತಿ ನಾಲ್ಕೈದು ವರ್ಷಕ್ಕೊಮ್ಮೆ ಅವರ ಮನೆತನದಲ್ಲಿ ಸಾವುವಾಗುತ್ತಿದೆ. ಅದು ಕೂಡ ಕೇವಲ ಅರ್ಧ ಕಿಲೋಮೀಟರ್ ದೂರದ ಅಂತರದಲ್ಲಿ, ಇಷ್ಟಕ್ಕೂ ಏನದು ಯಾಕೆ ಅಂತೀರಾ ,ಈ ವರದಿ ನೋಡಿ..
ಹೌದು..ನಾವು ಇವತ್ತು ಹೇಳಲು ಹೋರಟಿರೋ ಸ್ಟೋರಿ ನಿಜಕ್ಕೂ ನಂಬಲಾರದ, ಊಹೆಗೂ ನಿಲುಕದ ಸಂಗತಿ, ಈ ಸಂಗತಿಗಳನ್ನು ಕೇಳಿದ್ರೇ ನೀವು ಬೆಚ್ಚಿಬೀಳೋದು ಗ್ಯಾರಂಟಿ.
ಇದು ಕಲ್ಪತರು ನಾಡು ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ತೊಗರಿಘಟ್ಟ ಗ್ರಾಮ. ಗ್ರಾಮದಲ್ಲಿ ದೊಡ್ಡ ದೊಡ್ಡ ಕುಟುಂಬಗಳು ವಿದ್ಯಾವಂತರು ಇರೋದು ಸಹಜ, ಹೀಗಿರುವಾಗ ಆ ಒಂದು ಮನೆತನದಲ್ಲಿ ಪ್ರತಿ ನಾಲ್ಕು ಅಥವಾ ಐದು ವರ್ಷಕ್ಕೆ ಒಂದು ಅನಾಹುತ ನಡೆದುಹೋಗುತ್ತಿದೆ. ಅಂದುಕೊಳ್ಳದಿದ್ದ ರೂಪದಲ್ಲಿ ಸಾವು ಎದುರಾಗುತ್ತಿದೆ.
ಈ ಗ್ರಾಮದ ಧರ್ಮಣ್ಣ ಎನ್ನೋವವರ ಕುಟುಂಬ, ದೊಡ್ಡ ಕುಟುಂಬ. ಒಟ್ಟು20 ಕುಟುಂಬ ಅಣ್ಣ ತಮ್ಮಂದಿರು ಇದ್ದಾರೆ. ಈ ಮೊದಲು ಎಲ್ಲಾರೂ ಒಂದಾಗೇಯೇ ಇದ್ದರು. ಆದ್ರೆ ಕಾಲ ಕಳೆದಂತೆ ಅಣ್ಣ ತಮ್ಮಂದಿರು ದೂರವಾಗುತ್ತಾ, ತಮ್ಮ ಕುಟುಂಬಗಳನ್ನು ಮಾಡಿಕೊಂಡು ಜೀವನ ಮಾಡುತ್ತಾ ಬಂದಿದ್ದಾರೆ. ಈ ಕುಟುಂಬದಲ್ಲಿ ಪ್ರತಿ ನಾಲ್ಕೈದು ವರ್ಷಕ್ಕೆ ಒಂದು ಸಾವಾಗುತ್ತಿದೆ. ಇದ್ರಿಂದ ಇಡೀ ಕುಟುಂಬ ಜೊತೆಗೆ ಗ್ರಾಮವೇ ಶಾಕ್ ಆಗಿದೆ.
ಇಷ್ಟಕ್ಕೂ ಯಾಕೆ ಈ ಕುಟುಂಬದವರು ಸಾಯುತ್ತಿದ್ದಾರೆ ಎಂದು ಪ್ರಶ್ನಿಸಿದ್ರೆ, ಈ ಕುಟುಂಬಕ್ಕೆ ಒಂದು ಶಾಪ ಇದೆಯಂತೆ ಅದು ಮುನಿಯಪ್ಪ ಶಾಪನೋ ಅಥವಾ ನಾಗರ ಶಾಪವೋ ಗೊತ್ತಿಲ್ಲ, ಈ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದರೂ ಉತ್ತರ ಸಿಗಲಿಲ್ಲ. ಆದರೆ, ಒಂದೇ ಮನೆತನದ ಐವರು ಹಾವು ಕಚ್ಚಿ ಸಾವನ್ನಪ್ಪಿದ ಘಟನೆ ನಡೆದಿದೆ. ಪ್ರತಿ ನಾಲ್ಕೈದು ವರ್ಷಕ್ಕೊಮ್ಮೆ ಹಾವು ಕಚ್ಚಿ ಸಾಯುತ್ತಿದ್ದು, ಇದ್ರಿಂದ ಧರ್ಮಣ್ಣ ಕುಟುಂಬ ಬೆಚ್ಚಿಬಿದ್ದಿದ್ದಾರೆ.
ಕಳೆದ ಬುಧವಾರ ರಾತ್ರಿ ಗ್ರಾಮದ ಗೋವಿಂದರಾಜು ಹೊಲಕ್ಕೆ ನೀರು ಕಟ್ಟಲು ಹೋಗಿದ್ದಾರೆ.ಈ ವೇಳೆ ಕಾದು ನಿಂತಿದ್ದ ಹಾವು ಕಾಲಿಗೆ ಕಚ್ಚಿದೆ, ಕೂಡಲೇ ಆಸ್ಪತ್ರೆ ಗೆ ಸಾಗಿಸಿದರೂ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇನ್ನೂ ಕಳೆದ 20-25 ವರ್ಷಗಳಲ್ಲಿ ಧರ್ಮಣ್ಣ ಕುಟುಂಬದ ಹನುಮಂತಪ್ಪ, ಧರ್ಮಣ್ಣ, ವೆಂಕಟೇಶ್, ಶ್ರೀನಿವಾಸ್ ಹಾಗೂ ಮೊನ್ನೆ ಗೋವಿಂದರಾಜು ಒಂದೇ ಜಾಗದಲ್ಲಿ ಹಾವಿಗೆ ಬಲಿಯಾಗಿದ್ದಾರೆ. ಅದು ಕೂಡ ಕೇವಲ ಅರ್ಧ ಕಿಲೋ ಮೀಟರ್ ಅಂತರದಲ್ಲಿ ಎಲ್ಲರೂ ಹಾವಿನ ಕಡಿತಕ್ಕೊಳಗಾಗಿದ್ದಾರೆ.
ಹೊಲದ ಬಳಿ ಮುನಿಯಪ್ಪ ಗುಡಿಯಿದ್ದು, ಈ ಮೊದಲು 20 ಕುಟುಂಬ ಸೇರಿ ಪೂಜಿಸಿ ಅಡುಗೆ ಮಾಡಿ ಮುನಿಯಪ್ಪ ಪೂಜೆ ಮಾಡುತ್ತಿದರಂತೆ. ಆದರೆ ಕಾಲಕಳೆದಂತೆ ಮನೆಗೆ ಸೊಸೆಯಂದಿರು ಬಂದಂತೆ ಕುಟುಂಬಗಳು ದೂರವಾಗಿದ್ದರೆನ್ನಲಾಗಿದೆ . ಇದೀಗ ನಾಲ್ಕೈದು ಕುಟುಂಬಗಳು ಸೇರಿ ಪೂಜೆ ಮಾಡುತ್ತಿದ್ದಾರಂತೆ. ಇದು ಕೂಡ ಹಾವಿನ ದ್ವೇಷಕ್ಕೆ ಕಾರಣ ಇರಬಹುದು ಎನ್ನುತ್ತಿದ್ದಾರೆ. ಈ ಹಿಂದೆ ತಮ್ಮ ಹೊಲದ ಬಳಿ ರಸ್ತೆ ಬದಿಯಲ್ಲಿ ಇದ್ದ ಅರಳಿಮರವನ್ನ ಧರ್ಮಣ್ಣ ಕಡಿದು ಹಾಕಿಸಿದ್ದರಂತೆ, ಅದರ ಶಾಪದಿಂದ ಹೀಗೆ ಆಗುತ್ತಿರಬಹುದು ಅಂತ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ಶಾಸ್ತ್ರ ಕೇಳಿದ್ರೆ ಎಲ್ಲಾರೂ ಒಂದಾಗಿ ಸೇರಿ ಮುನಿಯಪ್ಪ ಪೂಜೆ ಮಾಡಿದ್ರೆ ಸಮಸ್ಯೆ ಬಗೆಹರಿಯಬಹುದು ಅಂತಾ ಹೇಳಿದ್ದಾರಂತೆ. ಸದ್ಯ ಮನೆತನದಲ್ಲಿ ಬರೀ ಗಂಡಸರೇ ಬಲಿಯಾಗಿದ್ದು, ಆತಂಕಕ್ಕೀಡು ಮಾಡಿದೆ. ಇನ್ನೂ ಒಟ್ಟು ಇದೇ ಕುಟುಂಬದ 11 ಜನರಿಗೆ ಹಾವು ಕಚ್ಚಿದ್ದು, ಆರು ಜನರು ಉಳಿದಿದ್ದಾರೆ. ಐದು ಮಂದಿ ಸಾವನ್ನಪ್ಪಿದ್ದಾರೆ.
ಇದು ನಿಜಕ್ಕೂ ನಂಬಲಾರದ ಸಂಗತಿ. ಹಾವಿನ ದ್ವೇಷವೋ ದೇವರ ಶಾಪವೋ ಅಥವಾ ಆಕಸ್ಮಿಕ ಸಾವೋ ಒಟ್ಟು ಬಾಳಿ ಬದುಕಬೇಕಿದ್ದ ಪುರುಷರು ಮಾತ್ರ ಬಲಿಯಾಗುತ್ತಿರುವುದು ದುರಂತವಾಗಿದೆ.
ವರದಿ: ಮಂಜು ಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz