ತುಮಕೂರು: ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ಮಲಗೋನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೋಂದಣಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಹಕಾರಿ ತತ್ವಗಳಿಗೆ ವಿರುದ್ಧವಾಗಿ ಗ್ರಾಮ ಸಭೆ ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದ್ದು, ಅಧಿಕಾರಿಗಳ ಏಕಪಕ್ಷೀಯ ನಿರ್ಧಾರದಿಂದಾಗಿ ಎರಡು ಮೂರು ತಂಡಗಳಾಗಿ ವಿಂಗಡನೆಯಾಗಿರುವ ಸದಸ್ಯರ ನಡುವೆ ಜಟಾಪಟಿ ನಡೆದ ಘಟನೆ ನಡೆದಿದೆ.
ನರಸಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಉಪ ಕೇಂದ್ರ ಮಲಗೋನಹಳ್ಳಿ ಗ್ರಾಮದಲ್ಲಿ ಕಾನೂನು ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ ಇಲ್ಲಿ ಒಂದು ಹಾಲು ಉತ್ಪಾದಕರ ಸಹಕಾರಿ ಸಂಘವನ್ನು ನೋಂದಣಿ ಮಾಡಿಸಲು ಒಂದು ತಂಡ ಪ್ರಯತ್ನಿಸುತ್ತಿದ್ದು, ರಾಜಕೀಯ ಕಾರಣಗಳಿಂದ ಈಗಾಗಲೇ ಎರಡು ಮೂರು ತಂಡಗಳಾಗಿ ವಿಂಗಡನೆಯಾಗಿರುವ ಗ್ರಾಮಸ್ಥರ ನಡುವೆ ಇದು ಅಶಾಂತಿ ಸೃಷ್ಟಿಗೆ ಕಾರಣವಾಗಿದೆ.
ಕಾನೂನು ಬಾಹಿರವಾಗಿ ಹಾಲು ಉತ್ಪಾದಕರ ಸಹಕಾರಿ ಸಂಘದ ನೋಂದಣಿ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ವಿಚಾರ ತಿಳಿದು ಗ್ರಾಮಸ್ಥರು ಸಂಬಂಧಪಟ್ಟ ಕೆಎಂಎಫ್ ತುಮುಲ್ ಅಧಿಕಾರಿಗಳಿಗೆ ಹಾಗೂ ಸಹಕಾರಿ ಸಂಘಗಳ ನೋಂದಣಿ ಅಧಿಕಾರಿಗಳಿಗೆ ಈ ವಿಚಾರವಾಗಿ ಹಲವು ಬಾರಿ, ದೂರು, ಕಾನೂನು ತಿಳಿವಳಿಕೆ ನೋಟಿಸ್ ನೀಡುವ ಮೂಲಕ ದೂರು ಸಲ್ಲಿಸಿರುತ್ತಾರೆ. ಈ ಗ್ರಾಮದಲ್ಲಿ ಈಗ ಎರಡು ಮೂರು ಪಂಗಡಗಳ ನಡುವೆ ಭೀನ್ನಾಭಿಪ್ರಾಯಗಳು ವೈಯಕ್ತಿಕ ದ್ವೇಷಗಳು ಇರುವ ಕಾರಣ ಸದ್ಯದ ಪರಿಸ್ಥಿತಿಯಲ್ಲಿ ಡೈರಿ ನೋಂದಣಿಗೆ ಅವಕಾಶ ಕೊಡಬಾರದು. ಗ್ರಾಮದಲ್ಲಿ ಶಾಂತಿ ಮತ್ತು ಸೌಹಾರ್ದ ಸ್ಥಿತಿ ಉಂಟಾದ ನಂತರ ತಿಳಿಯಾದ ನಂತರ, ಸಂಘ ಸ್ಥಾಫನೆಗೆ ಮಾಡುವಂತೆ ಕೋರಿ ಕೊಂಡಿರುತ್ತಾರೆ ಹಾಗೂ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಹಾಲಿನ ಉಪ ಕೇಂದ್ರವನ್ನು ನಡೆಸಿಕೊಂಡು ಹೋಗುವಂತೆ ಕೋರಿದ್ದಾರೆ.
ನರಸಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಉಪ ಕೇಂದ್ರ ಇರುವ ಕಾರಣ ರೈತರಿಗೆ ಯಾವುದೇ ಸಮಸ್ಯೆ ಇಲ್ಲ, ಒಕ್ಕೂಟದಿಂದ ದೊರೆಯಬಹುದಾದ ಸೌಲಭ್ಯಗಳಾದ ಪ್ರೋತ್ಸಾಹ ಧನ, ಬೋನಸ್, ರೈತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಹಾಸ್ಟೇಲ್ ಸೌಲಭ್ಯ, ರಾಸುಗಳಿಗೆ ಚಿಕಿತ್ಸೆ, ವಿಮಾ ಸೌಲಭ್ಯ ಎಲ್ಲವೂ ಸಮರ್ಪಕವಾಗಿ ದೊರೆಯುತ್ತಿದೆ. ಹೀಗಿದ್ದರೂ ಕೂಡ ಕೂಡ ಗ್ರಾಮದ ಕೆಲವೇ ಕೆಲವು ವ್ಯಕ್ತಿಗಳು ತಮ್ಮ ತಮ್ಮ ನಡುವಿನ ರಾಜಕೀಯ ವೈಷಮ್ಯಕ್ಕಾಗಿ, ವೈಯಕ್ತಿಕ ಪ್ರತಿಷ್ಠೆಗಳಿಗಾಗಿ ಗ್ರಾಮದಲ್ಲಿ ಡೈರಿ ಸ್ಥಾಪನೆಯ ವಿಚಾರ ಮುಂದಿಟ್ಟುಕೊಂಡು ರಾಜಕೀಯವಾಗಿ ಇತ್ಯಾದಿಯಾಗಿ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟು ಮಾಡಿದ್ದಾರೆ ಎನ್ನುವ ಆಕ್ರೋಶ ಕೇಳಿ ಬಂದಿದೆ. ಅಲ್ಲದೇ ಈ ಡೈರಿ ಸ್ಥಾಪನೆಯ ವಿಚಾರದಲ್ಲಿ ಅಧಿಕಾರಿಗಳ ಹೆಸರಿನಲ್ಲಿ ಅಮಾಯಕರಿಂದ ಹಣವನ್ನೂ ವಸೂಲಿ ಮಾಡುತ್ತಿರುವ ಗಾಳಿ ಸುದ್ದಿ ಹರಿದಾಡುತ್ತಿದೆ.
ಈ ಎಲ್ಲ ವಿಚಾರವನ್ನು ಕೂಡ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸುಮಾರು ಬಾರಿ ಲಿಖಿತವಾಗಿ ಮತ್ತು ಮೌಖಿಕವಾಗಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ ಅಧಿಕಾರಿಗಳು ನಿಯಮ ಬಾಹಿರವಾಗಿ ಅಥವಾ ಯಾವುದೋ ಒತ್ತಡ ಹಾಗೂ ಆಮಿಷಗಳಿಂದಾಗಿ ಸಹಕಾರಿ ತತ್ವವನ್ನು ಗಾಳಿಗೆ ತೂರಿ, ಸಹಕಾರಿ ಅಧಿನಿಯಮ ನಿಬಂಧನೆಗಳಿಗೆ ವಿರುದ್ಧವಾಗಿ ಯಾವುದೇ ವ್ಯಾಪಕ ಪ್ರಚಾರವಿಲ್ಲದೇ, ಏಕ ಪಕ್ಷೀಯವಾಗಿ ಗ್ರಾಮ ಸಭೆ ನಡೆಸಲು ಗ್ರಾಮಕ್ಕೆ ಬಂದು ಪೊಲೀಸರ ರಕ್ಷಣೆಯೊಂದಿಗೆ ದಿನಾಂಕ 22—11—2023ರಂದು ಒಂದು ಬಾರಿ ಅಪೂರ್ಣ ಗ್ರಾಮ ಸಭೆ ನಡೆಸಲು ವಿಫಲ ಯತ್ನ ನಡೆಸಿದ್ದಾರೆ. ಈ ಬಗ್ಗೆ ಮತ್ತೆ ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದು ಲೀಗಲ್ ನೋಟಿಸ್ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಲಾಗಿದೆ. ಆದರೆ ಪತ್ರಗಳಿಗಾಗಲಿ, ಲೀಗಲ್ ನೋಟಿಸ್ ಗಾಗಲಿ ಅಧಿಕಾರಿಗಳು ಪ್ರತಿಕ್ರಿಯೆ ನೀಡಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಅವರಿಗೆ ಈಗಿರುವ ಉಪ ಕೇಂದ್ರದ ವಿಚಾರವನ್ನು ಮರೆಮಾಚಿ, ನಮ್ಮ ಗ್ರಾಮದಲ್ಲಿ ಡೈರಿ ಇಲ್ಲ ಮಾಡಿಸಿಕೊಡಿ ಎಂದು ಸುಳ್ಳು ಹೇಳಿ, ತುಮುಲ್ ನ ಮೇಲಾಧಿಕಾರಿಗಳಿಗೆ ಕರೆ ಮಾಡಿಸಿದ್ದು, ಸಚಿವರು ಡೈರಿ ಸ್ಥಾಪನೆ ಮಾಡುವಂತೆ ತುಮುಲ್ ನ ಮೇಲಾಧಿಕಾರಿಗಳಿಗೆ ಕರೆ ಮಾಡಿಸಿ ಮಾಡಿಕೊಡುವಂತೆ ಹೇಳಿದ್ದರು. ಹಾಲಿನ ಡೈರಿ ನೋಂದಣಿ ಮಾಡಿಸಬೇಕು ಎಂದು ವಾದಿಸುತ್ತಿರುವ ತಂಡ, ಸಚಿವರ ಮಾತುಗಳ ಈ ವಿಡಿಯೋ ತುಣುಕನ್ನು ಇಟ್ಟುಕೊಂಡು, ಒಕ್ಕೂಟದ ಅಧಿಕಾರಿಗಳನ್ನು ಬೆದರಿಸಿ ಮತ್ತೊಮ್ಮೆ ಗ್ರಾಮಸಭೆ ನಡೆಸಿ ನೋಂದಣಿ ಮಾಡಿಸಿ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಎಲ್ಲದರ ನಡುವೆ ಗ್ರಾಮಸ್ಥರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಒಕ್ಕೂಟದ ಹಾಗೂ ಸಹಕಾರಿ ಸಂಘಗಳ ನೋಂದಣಿ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ನಲ್ಲಿ ದಾವೆ ಸಲ್ಲಿಸಿದ್ದು, ಈ ವಿಚಾರವನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ, ಹೈಕೋರ್ಟ್ ನ ದಾವೆಯನ್ನೂ ಲೆಕ್ಕಿಸದೇ, ರಾಜಕಾರಣಿಗಳ ಒತ್ತಡ ಇದೆ ಎಂದು ಹೇಳಿಕೊಂಡು, ದಿನಾಂಕ 14-02-24ರಂದು ತರಾತುರಿಯಲ್ಲಿ ಗ್ರಾಮಕ್ಕೆ ಬಂದು ಕಾನೂನು ಬಾಹಿರವಾಗಿ ಗ್ರಾಮಸಭೆ ನಡೆಸಲು ಮುಂದಾಗಿದ್ದು, ಈ ವಿಚಾರ ತಿಳಿದ ಇನ್ನುಳಿದ ಗ್ರಾಮಸ್ಥರು ಅಲ್ಲಿಗೆ ಹೋಗಿ ಅಧಿಕಾರಿಗಳೊಂದಿಗೆ ಮಾತನಾಡಲು ಪ್ರಯತ್ನಿಸಿದಾಗ, ಗ್ರಾಮದಲ್ಲಿ ಗಂಭೀರ ಸ್ವರೂಪದ ಶಾಂತಿ ಸುವ್ಯವಸ್ಥೆ ಹಾಳಾಗಿದೆ.
ಗ್ರಾಮದಲ್ಲಿ ತೀವ್ರ ಉದ್ವಿಗ್ನ ಪರಿಸ್ಥಿತಿ ಇತ್ತು. ಎರಡು ಬಣಗಳ ನಡುವೆ ತೀವ್ರ ಸ್ವರೂಪದ ಗಲಾಟೆ ನಿಯಂತ್ರಿಸಲಾಗದೇ, ಕೈಮೀರುವ ಪರಿಸ್ಥಿತಿಯಲ್ಲಿ ಸ್ಥಳಕ್ಕೆ ಬಂದ ಕೋಲಾಲ ಪೊಲೀಸರು ಗಲಾಟೆ ನಿಯಂತ್ರಿಸಲು ಹರಸಾಹಸ ಪಡುವಂತಾಯಿತು. ಕೊನೆ ಸಭೆ ರದ್ದಾಗಿದೆ ಎಂದು ಹೇಳಿದ ಅಧಿಕಾರಿಗಳು ಗ್ರಾಮದ ಒಂದು ಗುಂಪು ಎಲ್ಲರೂ ಅಲ್ಲಿಂದ ಹೋದ ನಂತರ ಏಕ ಪಕ್ಷೀಯವಾಗಿ ಮತ್ತೆ ನೆಪ ಮಾತ್ರಕ್ಕೆ ಸಭೆ ನಡೆಸುವ ನಾಟಕವಾಡಿ, ದಾಖಲೆಗಾಗಿ ಫೋಟೋಗಳನ್ನು ತೆಗೆದುಕೊಂಡು, ನಿಯಮ ಬಾಹಿರವಾಗಿ ಗ್ರಾಮಸಭೆ ಮಾಡಿಕೊಂಡು ಹೋಗಿದ್ದಾರೆ. ಅಧಿಕಾರಿಗಳ ಈ ನಡೆ ಹತ್ತು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇದರಿಂದ ಗ್ರಾಮದಲ್ಲಿನ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿ, ಶಾಂತಿ ಸುವ್ಯವಸ್ಥೆ ಹಾಳಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸದ್ಯ ಈ ವಿಚಾರವಾಗಿ ಕರ್ತವ್ಯ ಲೋಪ, ಅಧಿಕಾರ ದುರುಪಯೋಗದ ವಿರುದ್ಧ ಹಾಗೂ ನಿಯಮ ಬಾಹಿರ ನಡೆಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಆದರೂ, ಗೃಹ ಸಚಿವರ ಹೆಸರನ್ನು ದುರುಪಯೋಗ ಪಡಿಸಿಕೊಂಡು, ಅವರ ಹೆಸರಿಗೆ ಕಳಂಕ ತರುವ ಹುನ್ನಾರದಿಂದ ನೋಂದಣಿ ಪ್ರಕ್ರಿಯೆಯನ್ನು ನಿಯಮ ಬಾಹಿರವಾಗಿ ನಡೆಸಲು ಮುಂದಾಗಿರೋದು ದೌರ್ಭಾಗ್ಯವೇ ಸರಿ. ಇದೀಗ ರಾಜಕೀಯ ಒತ್ತಡ, ಮೇಲಾಧಿಕಾರಿಗಳ ಒತ್ತಡದಿಂದಾಗಿ ಕಾನೂನು ಬಾಹಿರವಾಗಿ ನಡೆದುಕೊಂಡ ತಾಲೂಕು ಕೆಎಂಎಫ್ ಅಧಿಕಾರಿಗಳ ತಲೆದಂಡ ಆಗುವ ಲಕ್ಷಣ ಕಾಣುತ್ತಿದೆ.
ಗ್ರಾಮದ ಸಂಪೂರ್ಣ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮದಲ್ಲಿನ ಉದ್ವಿಗ್ನ ಪರಿಸ್ಥಿತಿ ತಿಳಿಯಾದ ನಂತರ ಗ್ರಾಮಸ್ಥರೆಲ್ಲರೂ ಅಧಿಕಾರಿಗಳಿಗೆ ಸಹಕಾರಿ ಸಂಘದ ನೋಂದಣಿಗೆ ಮನವಿ ಕೊಡುವವರೆಗೂ ಸದ್ಯ ಯಥಾ ಸ್ಥಿತಿ ಕಾಪಾಡಿಕೊಳ್ಳಬೇಕು, ಗ್ರಾಮದಲ್ಲಿ ಶಾಂತಿ ಮೂಡಿ ನಂತರ ಬೇರೆ ಪ್ರಕ್ರಿಯೆ ನಡೆಸಲಿ, ಕೆಲವೇ ವ್ಯಕ್ತಿಗಳ ಸ್ವಪ್ರತಿಷ್ಠೆಗಾಗಿ ಗ್ರಾಮದ ಶ್ರೇಯೋಭಿವೃದ್ಧಿ ಹಾಳು ಮಾಡುವುದು ಬೇಡ ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.