ತುಮಕೂರು: ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಚಿತ್ರಕಲಾ ಪದವಿ ಕಾಲೇಜಿನಲ್ಲಿ 73ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ಜರಗಿತು.
ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್ .ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಸಿ.ಸಿ.ಬಾರಕೇರ ಧ್ವಜಾರೋಹಣ ಮಾಡಿದರು.
ಬಳಿಕ ಮಾತನಾಡಿದ ಅವರು, ವಿಶ್ವದಲ್ಲಿ ಭಾರತದ ಸಂವಿಧಾನಕ್ಕೆ ಅಪಾರವಾದ ಗೌರವವಿದೆ. ನಮ್ಮ ಸಂವಿಧಾನದಲ್ಲಿನ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಎಲ್ಲ ಭಾರತೀಯರಿಗೂ ನೀಡಿದ ಶುಭದಿನವಿದು. ಪ್ರತಿಯೊಬ್ಬ ಭಾರತೀಯ ನಾಗರಿಕನೂ ದೇಶದ ಸಂವಿಧಾನಕ್ಕೆ ಬದ್ಧರಾಗಿರಬೇಕು. ದೇಶದ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವ ಮೂಲಕ ದೇಶ ಭಕ್ತಿಯನ್ನು ನಿತ್ಯ ಜೀವನದಲ್ಲಿ ಪಾಲಿಸಿಕೊಂಡು ಬರಬೇಕು ಎಂದು ಕರೆ ನೀಡಿದರು.
ನಮ್ಮ ಕಾಲೇಜಿನಲ್ಲಿ ಕಳೆದ 28 ವರ್ಷಗಳಿಂದ ಉತ್ತಮ ಫಲಿತಾಂಶ ಹಾಗೂ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದೆ. ಇಲ್ಲಿನ ವಿದ್ಯಾರ್ಥಿಗಳು ಕಳೆದ 4 ವರ್ಷಗಳಿಂದ ಚಿತ್ರ ಕಲಾ ಪದವಿ ರ್ಯಾಂಕ್ ಪಡೆಯುತ್ತಿದ್ದಾರೆ. ಆದರೆ, ಈ ಕಾಲೇಜಿಗೆ ಅನೇಕ ಮೂಲಭೂತ ಶೈಕ್ಷಣಿಕ ಸೌಲಭ್ಯಗಳಿಲ್ಲ. ಜೊತೆಗೆ ಯಾವುದೇ ಸಿಬ್ಬಂದಿ ಹುದ್ದೆಗಳ ಮಂಜೂರಾತಿಯೂ ಇಲ್ಲ. ಈವರೆಗೆ ಕಾಲೇಜು ನಿರ್ವಹಣೆಗೂ ಯಾವುದೇ ಅನುದಾನಗಳನ್ನು ಒದಗಿಸಿಲ್ಲ ಇಂತಹ ಸ್ಥಿತಿ, ಕಾಲೇಜಿಗೆ ಶಾಪದಂತೆ ಕಾಡುತ್ತಿದೆ ಎಂದು ಪ್ರಾಂಶುಪಾಲರು ಇದೇ ವೇಳೆ ತೀವ್ರ ಬೇಸರ ವ್ಯಕ್ತಪಡಿಸಿದರು.
ಕಾಲೇಜಿನಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಚಾಚೂ ತಪ್ಪದೇ ನಡೆಸಿಕೊಂಡು ಬರಲಾಗುತ್ತಿದೆ. ಚಿತ್ರಕಲಾ ಪದವಿ ಶಿಕ್ಷಣ ಪಡೆದವರಿಗೆ ಶೇ.85ಕ್ಕೂ ಹೆಚ್ಚು ಉದ್ಯೋಗಾವಕಾಶಗಳಿವೆ. ಇದೊಂದು ಕೌಶಲ್ಯಾಧಾರಿತ ಶಿಕ್ಷಣವಾಗಿದೆ. ಚಿತ್ರಕಲಾ, ಪದವಿಯ ಸರ್ಕಾರಿ ಉದ್ಯೋಗ ಪಡೆಯಲು ಹಾಗೂ ಸ್ವಂತ ಉದ್ಯೋಗ ಕೈಗೊಳ್ಳುವ ವೃತ್ತಿ ಶಿಕ್ಷಣವನ್ನು ಈ ಪದವಿ ಶಿಕ್ಷಣವು ಒಳಗೊಂಡಿದೆ ಎಂದು ಅವರು ವಿವರಿಸಿದರು.
ಬಡವರ ಮಕ್ಕಳು ಕಲಿಯುವ ಈ ಸರ್ಕಾರಿ ಕಾಲೇಜಿನ ನರಕ ಯಾತನೆ ಮಾತ್ರ ಯಾವ ಜನಪ್ರತಿನಿಧಿಗಳಿಗಾಗಲಿ ಜಿಲ್ಲಾಡಳಿತಕ್ಕಾಗಲಿ, ಇಲಾಖಾ ಅಧಿಕಾರಿಗಳಿಗಾಗಲಿ ಕೇಳಿಸದಂತಾಗಿರುವುದು ಇಂದಿನ ಶಿಕ್ಷಣ ವ್ಯವಸ್ಥೆಗೆ ಈ ಕಾಲೇಜು ನಿದರ್ಶನವಾಗಿದೆ. ಈ ಕಾಲೇಜಿನ ಬಗ್ಗೆ ನಿರ್ಲಕ್ಷ್ಯ ಧೋರಣೆ ಸಲ್ಲದು ಎಂದು ಅವರು ಇದೇ ವೇಳೆ ತೀವ್ರ ಬೇಸರ ವ್ಯಕ್ತಪಡಿಸಿದರು.
ವರದಿ: ಯತೀಶ್ ಕುಮಾರ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy