ತಿಪಟೂರು: ಹೈದರಾಬಾದ್ ಅಕ್ಷಯ ಪ್ರಾರ್ಥನಾ ಫೌಂಡೇಶನ್ ವತಿಯಿಂದ ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ, ಕಲಾ,ಸಾಹಿತ್ಯ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಕೊಡಮಾಡುವ ರಾಷ್ಟ್ರ ಮಟ್ಟದ ಭಾರತ ಸೇವಾರತ್ನ –2024 ರ ಪ್ರಶಸ್ತಿಗೆ ತಿಪಟೂರಿನ ಕಲ್ಪತರು ವಿದ್ಯಾಸಂಸ್ಥೆಯ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಶ್ರೀನಿವಾಸ ಬಿ. ರವರು ಭಾಜನರಾಗಿದ್ದಾರೆ.
ಶ್ರೀನಿವಾಸ್ ರವರು ಈಗಾಗಲೇ ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಹಲವು ಪದಕಗಳನ್ನು ಪಡೆದಿದ್ದು, 2023 ನೇ ಸಾಲಿನಲ್ಲಿ ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 03 ಚಿನ್ನದ ಪದಕಗಳನ್ನು ಹಾಗೂ 2024ನೇ ಸಾಲಿನಲ್ಲಿ ಥಾಯ್ಲೆಂಡಿನ ಸಖೋನ್ ನಖೊನ್ ನಗರದಲ್ಲಿ ನಡೆದ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ 03 ಚಿನ್ನ, 01 ಬೆಳ್ಳಿ ಹಾಗೂ 01 ಕಂಚಿನ ಪದಕಗಳನ್ನು ಪಡೆದು ನಾಡಿಗೆ ಹಾಗೂ ದೇಶಕ್ಕೆ ಕೀರ್ತಿಯನ್ನು ತಂದಿದ್ದು, ಇವರು ಯುವಜನತೆಗೆ ಸ್ಫೂರ್ತಿಯಾಗಿದ್ದಾರೆ.
ಇವರ ಮಾರ್ಗದರ್ಶನದಲ್ಲಿ ಹಲವು ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪದಕಗಳನ್ನು ಗಳಿಸಿರುತ್ತಾರೆ. ಹೀಗೆ ಶ್ರೀನಿವಾಸ್ ರವರ ಕ್ರೀಡಾಕ್ಷೇತ್ರದಲ್ಲಿನ ಸಾಧನೆ ಹಾಗೂ ಸೇವೆಯನ್ನು ಗುರುತಿಸಿ ಹೈದರಬಾದ್ ಅಕ್ಷಯ ಪ್ರಾರ್ಥನಾ ಫೌಂಡೇಶನ್ ವತಿಯಿಂದ ದಿನಾಂಕ 29—12–2024 ರಂದು ಬೆಂಗಳೂರಿನ ಗಾಂಧಿ ಭವನದ ಬಾಪು ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀ ಶ್ರೀನಿವಾಸ್ ರವರಿಗೆ ರಾಷ್ಟ್ರ ಮಟ್ಟದ ಭಾರತ ಸೇವಾರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸಮಾರಂಭದಲ್ಲಿ ಅಕ್ಷಯ ಪ್ರಾರ್ಥನಾ ಫೌಂಡೇಶನ್ ನ ಮುಖ್ಯಸ್ಥೆ ಶ್ರೀಮತಿ ರಮಾದೇವಿ ಮತ್ತು ಪ.ಪಂ.ವಾಲ್ಮೀಕಿ ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಮೋಹನ್ ಕಿಶೋರ್ ರವರು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ವರದಿ: ನಂದೀಶ್ ನಾಯ್ಕ ಪಿ,
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx