ಸರಗೂರು: ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಹುಲಿ ದಾಳಿ ಮುಂದುವರಿದಿದ್ದು, ದಾಳಿಗೆ ಮತ್ತೊಬ್ಬ ರೈತ ಬಲಿಯಾಗಿದ್ದು, ತಿಂಗಳ ಅಂತರದಲ್ಲಿ ಮೂರು ಸಾವು ಸಂಭವಿಸಿದೆ.
ತಾಲೂಕಿನ ಹಳೇಹೆಗ್ಗುಡಿಲು ಗ್ರಾಮದ ರೈತ ಚೌಡಪ್ಪ ನಾಯಕ ಆನೆ ದಾಳಿಯಿಂದ ಗಾಯಗೊಂಡು ಚೇತರಿಸಿಕೊಳ್ಳುತ್ತಿದ್ದ ವ್ಯಕ್ತಿ ಹುಲಿ ದಾಳಿಗೆ ಬಲಿಯಾದ ಮೃತ ದುರ್ದೈವಿ.
ಚೌಡಪ್ಪ ನಾಯಕ (39 ವರ್ಷ) ಎಂದಿನಂತೆ ಶುಕ್ರವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ನುಗು ಹಿನ್ನೀರು ಸಮೀಪದ ಕಾಡಂಚಿನ ತಮ್ಮ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಹುಲಿಯೊಂದು ಏಕಾಏಕಿ ದಾಳಿ ನಡೆಸಿದ್ದು, ರೈತ ಚೌಡಪ್ಪನನ್ನ ಬಲಿ ಪಡೆದಿದೆ. ಬಳಿಕ ಮೃತದೇಹವನ್ನು ಪಕ್ಕದ ಹಳ್ಳವೊಂದರಲ್ಲಿ ಇಟ್ಟುಕೊಂಡು ಕುಳಿತಿದೆ. ಉಳುಮೆ ಮಾಡುತ್ತಿದ್ದ ರೈತ ಕಾಣೆಯಾದನ್ನು ಗಮನಿಸಿದ ಅಕ್ಕಪಕ್ಕ ಜಮೀನಿನ ರೈತರು ಬಂದು ನೋಡಲಾಗಿ ದಾಳಿ ಮಾಡಿರುವುದು ತಿಳಿದುಬಂದಿದ್ದು, ಜನರ ಕೂಗಾಟ ಕೇಳುತ್ತಿದ್ದಂತೆಯೇ ಹಳ್ಳದಲ್ಲಿ ಹುಲಿ ಮೃತದೇಹವನ್ನು ಬಿಟ್ಟು ಓಡಿದೆ ಎನ್ನಲಾಗಿದೆ.
ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ: ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದರಲ್ಲದೇ, ಕರ್ತವ್ಯ ನಿರತ ಮಹಿಳಾ ಆರ್ ಎಫ್ ಒ ಅಮೃತಾ ಮೇಲೆ ಮಹಿಳೆಯರು ಹಲ್ಲೆ ಮಾಡಿದ್ದು, ರಾಮಾಂಜನೇಯ ಅವರ ಮೇಲೂ ಸ್ಥಳೀಯರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಕಳೆದ ಮೂರು ನಾಲ್ಕು ದಿನಗಳಿಂದ ಈ ಭಾಗದಲ್ಲಿ ಹುಲಿ ಕಾಣಿಸಿಕೊಳ್ಳುತ್ತಿದ್ದು, ಈ ಸಂಬಂಧ ಸ್ಥಳೀಯರು ಬೋನು ಇರಿಸಿ ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಅರಣ್ಯ ಇಲಾಖೆ ಕ್ರಮಕೈಗೊಳ್ಳದ ಪರಿಣಾಮ ಈ ಅವಘಡ ಸಂಭವಿಸಿದೆ. ಮೃತರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡುವ ಜತೆಗೆ, ಮೃತರಿಗೆ ಮೂವರು ಹೆಣ್ಣು ಮಕ್ಕಳಿದ್ದು, ಮೂವರಿಗೂ ಉದ್ಯೋಗ ನೀಡಬೇಕು. ಅಲ್ಲದೇ ಕೂಡಲೇ ಶಾಸಕ ಅನಿಲ್ ಚಿಕ್ಕಮಾದು ಹಾಗೂ ಸಚಿವ ಈಶ್ವರ್ ಖಂಡ್ರೆ ಅವರು ಕೂಡಲೇ ಸ್ಥಳಕ್ಕೆ ಆಗಮಿಸಿ ಹುಲಿ ದಾಳಿಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಅಲ್ಲದೆ ಸ್ಥಳಕ್ಕೆ ಶಾಸಕರು, ಸಚಿವರು ಬರುವವರೆಗೂ ಮೃತದೇಹ ಎತ್ತಲು ಬಿಡುವುದಿಲ್ಲ ಎಂದು ಪಟ್ಟುಹಿಡಿದರು.
ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಮೃತಪಟ್ಟ ಸ್ಥಳಕ್ಕೆ ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ನಂತರ ಮಾತನಾಡಿ, ತಾಲೂಕಿನಲ್ಲಿ ನಾಲ್ಕು ಬಲಿಯಾಗಿದೆ. ಯಾಕೆ ಜನರ ಜೀವದ ಬಗ್ಗೆ ಆಟವಾಡುತ್ತಿದ್ದಾರೆ. ರೈತರು ಹುಲಿ ಕಾಣಿಸಿಕೊಂಡಿದೆ ಎಂದ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರೂ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲಿಲ್ಲ. ನಿಮ್ಮ ನಿರ್ಲಕ್ಷ್ಯ ಧೋರಣೆದಿಂದ ಈ ಘಟನೆಗಳು ನಡೆದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಂಬಿಂಗ್ ಆರಂಭ: ಇತ್ತೀಚೆಗೆ ಮುಳ್ಳೂರು ಸಮೀಪದ ಬೆಣ್ಣೆಗೆರೆ ಬಳಿ ರೈತನನ್ನು ಬಲಿ ಪಡೆದಿದ್ದ ಹುಲಿ ಸೆರೆಗೆ ಕಾರ್ಯಾಚರಣೆ ನಡೆಯುತ್ತಿದ್ದ ಬೆನ್ನಲ್ಲೇ ಈ ಅವಘಡ ಸಂಭವಿಸಿದ್ದು, ಹಳೆ ಹೆಗ್ಗುಡಿಲಿನಲ್ಲಿ ಸಾಕಾನೆಗಳಾದ ಭೀಮಾ, ಮಹೇಂದ್ರ, ಶ್ರೀಕಂಠ, ಲಕ್ಷ್ಮಣಾ ಸಾಕಾನೆಗಳು ಹಾಗೂ 100ಕ್ಕೂ ಅಧಿಕ ಸಿಬ್ಬಂದಿಗಳ ಮೂಲಕ ಕಾರ್ಯಾಚರಣೆ ಆರಂಭಿಸಿದೆ.
ಸ್ಥಳದಲ್ಲಿ ಡಿಸಿಎಫ್ ಗಳಾದ ಪರಮೇಶ್, ಪ್ರಭಾಕರನ್, ಎಸಿಎಫ್ ಡಿ.ಪರಮೇಶ್, ಆರ್ ಎಫ್ ಒಗಳಾದ ಅಮೃತ, ರಾಮಾಂಜನೇಯ, ತಹಶೀಲ್ದಾರ್ ಮೋಹನ ಕುಮಾರಿ ವೃತ್ತ ನಿರೀಕ್ಷಕ ಗಂಗಾಧರ್, ಪಿಎಸ್ ಐಗಳಾದ ಚಂದ್ರಹಾಸ್ ನಾಯಕ್, ಕಿರಣ್.ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಸೇರಿದಂತೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಜರಿದ್ದರು.
ಸ್ಥಳಕ್ಕೆ ಅನಿಲ್ ಚಿಕ್ಕಮಾದು ಭೇಟಿ:
ಘಟನಾ ಸ್ಥಳಕ್ಕೆ ಶಾಸಕ ಅನಿಲ್ ಚಿಕ್ಕಮಾದು ಭೇಟಿ ನೀಡಿ, ರೈತರೊಂದಿಗೆ ಚರ್ಚಿಸಿದರು. ಈ ವೇಳೆ ರೈತರು ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ಅವುಗಳು ನಾಡಿಗೆ ಬರದಂತೆ ತಡೆಯಲು ಕ್ರಮಕೈಗೊಳ್ಳಬೇಕು. ಈಗ ಮೃತರ ಕುಟುಂಬದ ಪರಿಹಾರ ಧನ ಹೆಚ್ಚಿಸಬೇಕು ಎಂದು ಪಟ್ಟು ಹಿಡಿದರು.
ಬಳಿಕ ಮಾತನಾಡಿದ ಶಾಸಕ ಅನಿಲ್ ಚಿಕ್ಕಮಾದು, ಮೃತರ ಕುಟುಂಬಕ್ಕೆ ಶ್ರೀಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಅಥವಾ ಮೀನುಗಾರಿಕೆ ಇಲಾಖೆಯಿಂದ ಮನೆ ನಿರ್ಮಾಣ ಮಾಡಿಕೊಡುವ ಜತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ವೈಯಕ್ತಿಕ ನೆರವು ನೀಡಲಾಗುವುದು. ಮೃತರ ಪತ್ನಿಗೆ ದೊರೆಯುವ ಮಾಶಾಸನವನ್ನೂ ಹೆಚ್ಚಳ ಮಾಡಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು.
ಮುಂದಿನ ವಾರ ಸಭೆ: ಸರಗೂರಿನ ಕಾಡಂಚಿನ ಭಾಗದಲ್ಲಿ ಪದೇ ಪದೇ ಹುಲಿ ದಾಳಿ ನಡೆಯುತ್ತಿರುವ ಹಿನ್ನೆಲೆ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು 50 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಕಂಬಿ ಬ್ಯಾರೀಕೇಡ್ ನಿರ್ಮಾಣಕ್ಕೆ ನೀಲಿನಕ್ಷೆ ತಯಾರಿಸಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವರ ಬಳಿ ಚರ್ಚಿಸಲಾಗಿದೆ. ಹೆಚ್ಚಿನ ಕ್ರಮಕ್ಕಾಗಿ ಸೋಮವಾರ ಮೈಸೂರಿನಲ್ಲಿ ಮುಖ್ಯ ಮಂತ್ರಿ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಬಳಿಕ ಪಟ್ಟು ಸಡಿಲಿಸಿದ ರೈತರು, ಮೃತದೇಹದ ರವಾನೆಗೆ ಅವಕಾಶ ನೀಡಿದರು. ಬಳಿಕ ಮೃತದೇಹದ ಮರಣೋತ್ತರ ಪರೀಕ್ಷೆಗೆ ಸರಗೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಲಾಯಿತು.
ಮೂರು ಹುಲಿ ಸೆರೆ: ಮೂವರು ಬಲಿ
ತಾಲೂಕಿನ ಹೆಡಿಯಾಲ ಸಮೀಪ ಬಡಗಲಪುರ ಅ.16ರಂದು ರೈತ ಮಹದೇವೇಗೌಡರ ಎಂಬವರ ಮೇಲೆ ಹುಲಿ ದಾಳಿ ನಡೆಸಿತ್ತು. ದಾಳಿಯ ತೀವ್ರತೆಗೆ ಮಹದೇವಗೌಡ ಅವರ ಎರಡು ಕಣ್ಣುಗಳು ಕಿತ್ತುಬಂದಿದ್ದು, ಶಾಶ್ವತ ಕತ್ತಲು ಅವರನ್ನು ಆವರಿಸಿದೆ. ಇಂದಿಗೂ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದು ದಾಳಿ ಮಾಡಿದ ಹೆಣ್ಣು ಹುಲಿಯನ್ನು ಸೆರೆಹಿಡಿಯಲಾಗಿತ್ತು.
ಇದಾದ ಬಳಿಕ ಅ.26ರಂದು ಮುಳ್ಳೂರು ಸಮೀಪ ಬೆಣ್ಣೆಗೆರೆ ಗ್ರಾಮದ ರೈತ ರಾಜಶೇಖರ್ (65) ಎಂಬವರನ್ನು ಹುಲಿ ಬಲಿಪಡೆದಿತ್ತು. ಈ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುವ ವೇಳೆ ಅ.28ರ ರಾತ್ರಿ ಹೆಡಿಯಾಲ ಸಮೀಪದ ಈರೇಗೌಡನಹುಂಡಿ ಗ್ರಾಮದ ಬಳಿ 6 ವರ್ಷದ ಹೆಣ್ಣು ಹುಲಿಯನ್ನು ಅರಣ್ಯ ಇಲಾಖೆ ಸೆರೆಹಿಡಿಯಿತು.
ಈ ಘಟನೆಗಳು ಮಾಸುವ ಮುನ್ನವೇ ಅ.31ರ ಸಂಜೆ ತಾಲೂಕಿನ ಕೂಡಗಿ ಸಮೀಪದ ಕುರ್ಣೇಗಾಲ ಬಳಿ ಹುಲಿ ದಾಳಿಗೆ ರೈತ ದೊಡ್ಡ ನಿಂಗಯ್ಯ ಸಾವನ್ನಪಿದ್ದರು. ಈ ವೇಳೆ ತೀವ್ರವಾಗಿ ಕಾರ್ಯಾಚರಣೆ ನಡೆಸುವ ವೇಳೆ ಸೆ.5ರಂದು ಒಂದೂವರೆ ವರ್ಷದ ಹೆಣ್ಣು ಹುಲಿಯನ್ನು ಸೆರೆಹಿಡಿಯಲಾಗಿಯಿತು. ಇದೀಗಾ ದಾಳಿ ಮುಂದುವರಿದಿದ್ದು, ಚೌಡಪ್ಪ ನಾಯಕ ಬಲಿಯಾಗಿದ್ದಾರೆ.
ವಿಶೇಷ ತನಿಖಾ ತಂಡ ರಚನೆಗೆ ಆಗ್ರಹ:
ಸರಣಿ ಹುಲಿ ದಾಳಿಗಳಿಂದ ಕಂಗೆಟ್ಟಿರುವ ಜನತೆ ಅಪಾಯಕಾರಿಯಾಗಿರುವ ಹುಲಿ ಉಪಟಳಕ್ಕೆ ಅಕ್ರಮ ರೆಸಾರ್ಟ್ ಹಾಗೂ ಸಫಾರಿ ಕಾರಣ ಎಂದು ರೈತರು ದೂರಿದರು. ಮುಂದಿನ ಆದೇಶದವರೆಗೆ ಬಂಡೀಪುರ ಹಾಗೂ ನಾಗರಹೊಳೆಯ ಸಫಾರಿ ಬಂದ್ ಮಾಡಲಾಗಿದ್ದು, ವಿಶೇಷ ತನಿಖಾ ತಂಡ ರಚಿಸುವ ಕೂಗು ಹೆಚ್ಚಾಗಿದೆ ಎಂದರು.
ಶಾಸಕ ಅನಿಲ್ ಚಿಕ್ಕಮಾದು ರೈತರು ಹಾಗೂ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ಮೃತಪಟ್ಟ ಸ್ಥಳದಲ್ಲೇ ಸಭೆಯಲ್ಲಿ ನಂತರ ಗ್ರಾಮಸ್ಥರು ಶಾಸಕರ ಮುಂದೆ ಗ್ರಾಮದ ಮುಖಂಡ ಬೈರನಾಯಕ ಮಾತನಾಡಿ, ನಮ್ಮ ಗ್ರಾಮಗಳು ಕಾಡಂಚಿನ ಭಾಗದಲ್ಲಿ ಇರುವ ರೈತರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುತ್ತಿದ್ದೇವೆ . ಕಾಡು ಪ್ರಾಣಿಗಳಿಂದ ಬೆಳೆ ನಾಶವಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸರಿಯಾಗಿ ಪರಿಹಾರವನ್ನು ನೀಡುತ್ತಿಲ್ಲ. ಈ ಭಾಗದ ಜನರು ಕಾಡು ಪ್ರಾಣಿಗಳಿಂದ ಭಯದಿಂದ ಬದುಕು ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಹುಲಿ ದಾಳಿಗೆ ಬಲಿಯಾದ ವ್ಯಕ್ತಿಗೆ ಮೂರು ಹೆಣ್ಣು ಮಕ್ಕಳ ಇದ್ದಾರೆ. ಮನೆಗೆ ಆಧಾರಸ್ತಂಭವಾಗಿ ಇದ್ದ ವ್ಯಕ್ತಿ ಇವಾಗ ಇಲ್ಲ. ಅವರಿಗೆ ಸರ್ಕಾರ ಮಟ್ಟದಲ್ಲಿ ಮನೆ ಮತ್ತು ಮಕ್ಕಳ ವಿದ್ಯಾಭ್ಯಾಸ ಹಾಗೂ ಸೌಲಭ್ಯಗಳನ್ನು ನೀಡಬೇಕು. ಅದರ ಜೊತೆಯಲ್ಲಿ ಹುಲಿ ಭಯದಿಂದ ಯಾರು ಜಮೀನಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ ಆದ್ದರಿಂದ ಆಹಾರ ಕಿಟ್ ವಿತರಣೆ ನೀಡಬೇಕು ಎಂದು ಆಗ್ರಹಿಸಿದರು.
ಇದು ನಾಲ್ಕನೇ ಬಾರಿಗೆ ಆದಂತಹ ದುರಂತವಾಗಿದ್ದು, ಬಹಳ ನೋವಿನ ಸಂಗತಿ, ಸಚಿವರ ಜೊತೆಗೂಡಿ ಶಾಶ್ವತ ಪರಿಹಾರ ಮಾಡುವಂತೆ ಸರ್ಕಾರಕ್ಕೆ ಒತ್ತಡ ಮಾಡಲಾಗಿದೆ, ಆದಷ್ಟು ಬೇಗ ಹುಲಿ ಸೆರೆ ಹಿಡಿಯುವಂತೆ, ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದರು ಹಾಗೂ ರೈತರಿಗೆ ಧೈರ್ಯ ಹೇಳಿದರು ಮತ್ತು ಅರಣ್ಯಾಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಮೈಮೂಲ್ ಅಧ್ಯಕ್ಷ ಹೀರೇಗೌಡ , ಪಪಂ ಸದಸ್ಯ ಶ್ರೀನಿವಾಸ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ, ನರಸೀಪುರ ರವಿ, ಭಾಗ್ಯ ಲಕ್ಮೀ ನಿಂಗರಾಜು, ಡಿಸಿಸಿ ಸದಸ್ಯ ಪರಶಿವಮೂರ್ತಿ, ಸುನೀಲ್ ಬೋಸ್ ಅಭಿಮಾನಿಗಳ ಬಳಗದ ತಾಲೂಕು ಅಧ್ಯಕ್ಷ ದೇವಲಾಪುರ ಸಿದ್ದರಾಜು, ಹೆಚ್.ಡಿ.ಕೋಟೆ ವಿಧಾನಸಭಾ ಯೂತ್ ಅದ್ಯಕ್ಷ ಕಂದೇಗಾಲ ಶಿವರಾಜ್, ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಮಸಹಳ್ಳಿ ನವೀನ್, ಅಜರುದ್ದೀನ್, ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ಮಂಜುನಾಥ, ಮುಖಂಡರು ಶಂಭುಲಿಂಗನಾಯಕ, ನಾಗರಾಜು, ನವೀನ್, ಸೋಮಣ್ಣ, ಶಿವರಾಜು, ಶಂಕರ್ ಶಶಿ ಪಾಟೀಲ್, ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ರಾಜಣ್ಣ, ಸಣ್ಣಸ್ವಾಮಿ, ಗೋವಿಂದರಾಜು, ಆಭಿ ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


