ಸರಗೂರು: ತಾಲೂಕಿನ ಬೇಲದಕುಪ್ಪೆ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಕಡೆಕಾರ್ತಿಕ ಮಾಸದ ಜಾತ್ರಾ ಮಹೋತ್ಸವ ಅಂಗವಾಗಿ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು.
ಹುಲಿ ದಾಳಿಯಿಂದ ಭಯಭೀತರಾಗಿದ್ದ ಸರಗೂರು ತಾಲೂಕು ಸೇರಿದಂತೆ ಇತರೆ ತಾಲೂಕಿನ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಮಾನವ–ಕಾಡುಪ್ರಾಣಿಗಳಿಗೆ ಕಿಂಚಿಂತ್ತೂ ತೊಂದರೆಯಾಗದಂತೆ ಅರಣ್ಯ ಇಲಾಖೆ, ಮುಜರಾಯಿ ಇಲಾಖೆಯು ಮುನ್ನೆಚ್ಚರಿಕೆ ಕ್ರಮ ವಹಿಸಿದ್ದು, ವಿಶೇಷವಾಗಿತ್ತು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಅರಣ್ಯ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ಹುಲಿ ಹಾವಳಿಯೂ ಜೋರಾಗಿದ್ದರಿಂದ ಅರಣ್ಯ ಇಲಾಖೆ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸಿಕೊಂಡು ಪೊಲೀಸರ ಸಮ್ಮುಖದಲ್ಲಿ ಬೇಲದಕುಪ್ಪೆ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಹದೇಶ್ವರಸ್ವಾಮಿಯ ಕೊಂಡೋತ್ಸವ ಆಚರಿಸಿದರು. ಇದರ ಅಂಗವಾಗಿ ದೇವಸ್ಥಾನವನ್ನ ವಿವಿಧ ಬಣ್ಣಗಳಿಂದ ಬಳಿದು, ಸಿಂಗರಿಸಿದ್ದರು. ದೇವಸ್ಥಾನವನ್ನು ಮಧುವಣಗಿತ್ತಿಯಂತೆ ಅಲಂಕೃತಗೊಳಿಸಿದ್ದರು. ಇದಲ್ಲದೆ ಕಾಡಿನೊಳಗಿನ ರಸ್ತೆಯಲ್ಲಿ ಧೂಳು ಎಳದಂತೆ ನೀರು ಹಾಕಲಾಗಿತ್ತು.
ಶ್ರೀಕ್ಷೇತ್ರ ಬೇಲದಕುಪ್ಪೆ ಶ್ರೀ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೂ ಭಾನುವಾರ ನಡೆದವು. ಸೋಮವಾರ ದೇವರಿಗೆ ದೇವಸ್ಥಾನದ ಸಮೀಪದಲ್ಲಿರುವ ಕೆರೆಯಿಂದ ವಿವಿಧ ಪೂಜೆಗಳನ್ನು ಸಲ್ಲಿಸಿ, ಹಾಲು ಹರವಿ ಸೇವೆ ತೆಗೆದುಕೊಂಡು ದೇವರನ್ನು ದೇವಾಲಯದವರೆಗೂ ಉದ್ಭವಸ್ಥಾನಕ್ಕೆ ಕರೆದೊಯ್ಯಲಾಯಿತು. ವೀರಗಾಸೆ ಕುಣಿತ, ಸರಳ ವಾದ್ಯಗೋಷ್ಠಿ ಮೊಳಗಲಿವೆ. ನಂತರ ಮಧ್ಯಾಹ್ನ 12ಕ್ಕೆ ಕೊಂಡೋತ್ಸವ ಜರುಗಿತು. ಇದರೊಂದಿಗೆ ಎಣ್ಣೆಮಜ್ಜನ ಮತ್ತು ಪ್ರಸಾದ ವಿನಿಯೋಗ ನಡೆಯಿತು.
ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ:
ಜಾತ್ರಾ ಮಹೋತ್ಸವ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸರಗೂರು ಪೊಲೀಸ್ ವೃತ್ತ ನಿರೀಕ್ಷಕ ಪ್ರಸನ್ನಕುಮಾರ್, ಉಪ ನಿರೀಕ್ಷಕ ಕಿರಣ್ ನೇತೃತ್ವದಲ್ಲಿ ಭದ್ರತೆಗಾಗಿ 300 ಕ್ಕೂ ಹೆಚ್ಚು ಪೊಲೀಸರನ್ನು ನೇಮಿಸಿಕೊಳ್ಳಲಾಗಿತ್ತು. ಭಕ್ತರ ಪ್ರಯಾಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧೆಡೆಯಿಂದ 150ಕ್ಕೂ ಹೆಚ್ಚು ಸಾರಿಗೆ ಬಸ್ ಸೌಲಭ್ಯ ಒದಗಿಸಲಾಗಿತ್ತು. ನ.18ಕ್ಕೆ ರುದ್ರಾಕ್ಷಿ ಮಂಟಪ, ಹುಲಿವಾಹನ, ನಂದಿಧ್ವಜದೊಂದಿಗೆ ರಥೋತ್ಸವ ಇರಲಿದೆ.
ಬಸ್ ತಂಗುದಾಣ:
ಅರಣ್ಯದೊಳಗೆ ದೇವಸ್ಥಾನವಿರುವ ಕಾರಣ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಚೈನ್ ಗೇಟ್ ಬಳಿ 8 ಎಕರೆಗೂ ಮೀರಿದ ಜಮೀನಿನನ್ನು ಸಮತಟ್ಟು ಮಾಡಲಿದ್ದು, ಸ್ಕೂಟರ್, ಬೈಕ್, ತ್ರಿ ಚಕ್ರ ವಾಹನ, ಕಾರು ಸೇರಿದಂತೆ ಖಾಸಗಿ ವಾಹನಗಳಿಗೆ ತಂಗುದಾಣ ನಿರ್ಮಿಸಲಾಗಿತ್ತು. ಅನಾರೋಗ್ಯಕ್ಕೆ ತುತ್ತಾದವರಿಗೆ ತಾತ್ಕಾಲಿವಾಗಿ ಆರೋಗ್ಯ ಸೇವಾ ಕೇಂದ್ರ ತೆರೆದಿದ್ದರು. ಶುದ್ಧ ಕುಡಿಯುವ ನೀರು ಒದಗಿಸಿಕೊಡಲಾಗುತ್ತಿತ್ತು.
ಬ್ಯಾರಿಕೇಡ್:
ಜಾತ್ರಾ ಮಾಳದಲ್ಲಿ ಜಾತ್ರೆಯನ್ನು ಕಣ್ತುಂಬಿಕೊಂಡು ಬಳಿಕ ಯುವಕರು, ಯುವತಿಯರು ಕಾಡಿನೊಳಗೆ ಹೋಗಬಹುದು ಎಂಬ ಉದ್ದೇಶದಿಂದ ದೇವಸ್ಥಾನದ ಸುತ್ತಲೂ ಪೊಲೀಸ್ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿತ್ತು. ಚನ್ನಗುಂಡಿ ಗ್ರಾಮಸ್ಥರು ಭಕ್ತರಿಗೆ ಅನ್ನ ಸಂತರ್ಪಣೆ ಆಯೋಜಿಸಿದ್ದರು. ಬ್ಯಾರಿಕೇಡ್ ದಾಟಿ ಹೋದವರಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಎಚ್ಚರಿಕೆ ನೀಡುತ್ತಿದ್ದು ಕಂಡು ಬಂತು.
ಶಾಸಕ ಅನಿಲ್ ಚಿಕ್ಕಮಾದು, ನಂಜನಗೂಡು ಶಾಸಕ ದರ್ಶನ್ ಧ್ರುವನರಾಯಣ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಮಹೇಶ್ ದೆಗ್ಗಲಹುಂಡಿ, ಸಿಎಫ್ ಪ್ರಭಾಕರನ್, ಎಸಿಎಫ್ ಡಿ.ಪರಮೇಶ್, ಮುಖಂಡರು ಪಿ. ರವಿ, ಭಾಗ್ಯಲಕ್ಷ್ಮಿ, ಪ್ರಕಾಶ್ , ಶಿವರಾಜು, ಸೌಮ್ಯ ಮಂಜುನಾಥ, ಭಾಗ್ಯ ಕೆಂಪಸಿದ್ದ, ಮಂಜುನಾಥ, ಉಮೇಶ್, ಆರ್ಎಫ್ ಒಗಳಾದ ಅಮೃತೇಶ್, ಕೃಷ್ಣ, ಶಿವಕುಮಾರ್, ನಾರಾಯಣ್, ದೇವಸ್ಥಾನ ಪಾರುಪತ್ತೇದಾರ ರಾಕೇಶ್ ಗೌಡ, ಚಿಕ್ಕದೇವಮ್ಮನ ಬೆಟ್ಟದ ಪಾರುಪತ್ತೇದಾರ ಮಹದೇವಸ್ವಾಮಿ, ಅರ್ಚಕ ಮಹದೇವಸ್ವಾಮಿ, ಚಿಕ್ಕದೇವಮ್ಮನ ಬೆಟ್ಟದ ಅರ್ಚಕರು ಸೇರಿದಂತೆ ಅರಣ್ಯಾಧಿಕಾರಿಗಳು, ಭಕ್ತರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


