ತುಮಕೂರು :ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ತಂದೆ-ತಾಯಿ ಹಾಗೂ ಗುರು-ಹಿರಿಯರನ್ನು ಗೌರವಿಸುವ ಪರಿಪಾಠ ಬೆಳೆಸಿಕೊಳ್ಳಬೇಕೆಂದು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಪದ್ಮಶ್ರೀ ಮಂಜಮ್ಮ ಜೋಗತಿ ಕರೆ ನೀಡಿದರು
ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ಜಾನಪದ ವಿಚಾರಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನವು ಅತ್ಯಂತ ಅಮೂಲ್ಯವಾದದ್ದು ಉತ್ತಮ ಸಂಸ್ಕಾರಯುತ ಬದುಕನ್ನು ವಿದ್ಯಾರ್ಥಿದೆಸೆಯಲ್ಲಿ ಅಳವಡಿಸಿಕೊಳ್ಳಬೇಕು. ಗುರು ಹಿರಿಯರು ಮತ್ತು ತಂದೆ-ತಾಯಿ ಗಳಲ್ಲಿ ಅತ್ಯಂತ ಶ್ರದ್ಧೆಯನ್ನು ಹೊಂದಿದವರಾಗಿ ವಿದ್ಯಾಭ್ಯಾಸ ಮಾಡಿದಾಗ ಜೀವನದಲ್ಲಿ ಉತ್ತಮ ಸ್ಥಿತಿಯನ್ನು ತಲುಪಲು ಸಹಕಾರಿಯಾಗುತ್ತದೆ ಎಂದರು.
ಹರ ಮುನಿದರೆ ಗುರು ಕಾಯುವನು ಆದರೆ ಗುರು ಮುನಿದರೆ ಹರ ಕಾಯುವನೇ? ಎಂಬ ಪ್ರಶ್ನೆಯನ್ನು ದಾಸ ಶ್ರೇಷ್ಠರು ಹಾಗೂ ಯತಿವರೇಣ್ಯರೇ ಕೇಳಿರುವಾಗ ಸಾಮಾನ್ಯ ಜನರಾದ ನಾವು ಗುರುಗಳನ್ನು ಗೌರವಿಸದಿದ್ದರೆ, ಬದುಕಿನಲ್ಲಿ ಉನ್ನತಿ ಕಾಣಲು ಸಾಧ್ಯವಿಲ್ಲ. ಇಂದಿನ ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳ ಮುಂದೆ ಹಲವಾರು ಆಕರ್ಷಣೆಗಳಿದ್ದು ಅವುಗಳು ಅವರ ವ್ಯಕ್ತಿತ್ವವನ್ನು ರಚಿಸಬಹುದು ಅಥವಾ ನಿರ್ಣಾಮ ಮಾಡಬಹುದು, ಬಹಳ ಎಚ್ಛರಿಕೆಯಿಂದ ಆಯ್ಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ ಎಂದರು.
ಮೊಬೈಲ್ ಮುಂದೆ ಕಳೆಯುವಷ್ಟು ಸಮಯವನ್ನು ವಿದ್ಯಾರ್ಥಿಗಳು ಪುಸ್ತಕದೊಂದಿಗೆ ಕಳೆದರೆ ಅವರ ಜೀವನ ಸಂಪದ್ಭರಿತವಾಗುತ್ತದೆ. ಆದರೆ ಇಂದಿನ ದಿನಮಾನದಲ್ಲಿ ಯುವಕ ಯುವತಿಯರು ಸಂಸ್ಕೃತಿಯನ್ನು ಮರೆತು ನಡೆಯುತ್ತಿರುವು ಅತ್ಯಂತ ಕಳವಳದ ವಿಷಯವಾಗಿದೆ. ತಮ್ಮ ಜೀವನದಲ್ಲೂ ಸಹ ಗುರು ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದು, ಗುರುಗಳ ವಿರುದ್ಧ ನಡೆದಾಗ ಏನೆಲ್ಲಾ ಕಷ್ಟ ಕಾರ್ಪಣ್ಯಗಳನ್ನು ಎದುರಿಸಬೇಕಾಗುತ್ತದೆ ಎಂಬುದು ತಮಗೆ ಖುದ್ದು ಅರಿವಾಗಿದೆ. ಅದನ್ನು ತಮ್ಮ ಆತ್ಮಚರಿತ್ರೆಯ ಗುರುವುಗೆ ಕಪಾಳ ಮೋಕ್ಷ ಎಂಬ ಅಧ್ಯಾಯದಲ್ಲಿ ವಿಸ್ತೃತವಾಗಿ ಬರೆಯಲಾಗಿದೆ ಎಂದು ತಿಳಿಸಿದರು. ಗುರುಗಳು ಹಾಗೂ ತಂದೆ ತಾಯಿಗಳ ಆಶೋತ್ತರ ಹಾಗೂ ಸೂಚನೆಗಳ ಮೇರೆಗೆ ಜೀವನ ನಡಿಸಿ ಬದುಕಿನಲ್ಲಿ ಸಾಧಕರಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಿಚಾರ ಸಂಕಿರಣದಲ್ಲಿ ಸರ್ವೋದಯ ಶಿಕ್ಷಣ ಸಂಸ್ಥೆಯ ಹಾಗೂ ಸಮರ್ಥ್ ಫೌಂಡೇಷನ್ ನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಿದ್ದಲಿಂಗಪ್ಪ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟಾರ್ ಶ್ರೀಮತಿ ನಮ್ರತಾ, ಡಾ.ಡಿ.ಎನ್. ಯೋಗೀಶ್ವರಪ್ಪ, ಡಾ.ಕಾ.ವೆಂ.ಶ್ರೀನಿವಾಸಮೂರ್ತಿ, ಡಾ.ಚಿಕ್ಕಣ್ಣ ಎಣ್ಣೆಕಟ್ಟೆ, ಜಿಲ್ಲಾ ಕಸಾಪ ಸಾಂಸ್ಕೃತಿಕ ಉಪಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಕೆಂಕೆರೆ, ಜೋಗಿಲ ಸಿದ್ಧರಾಜು, ಶಂಕರ್ ಭಾರತೀಪುರ ಮುಂತಾದವರು ಉಪಸ್ಥಿತರಿದ್ದರು.
ವರದಿ: ಎ.ಎನ್. ಪೀರ್ , ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB