ತುಮಕೂರು: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ವೈಫಲ್ಯವನ್ನು ಕೇಂದ್ರ ಸರ್ಕಾರ ಹೊರಬೇಕಾಗಿದೆ. ಪರೀಕ್ಷೆಯ ಪಾವಿತ್ರ್ಯತೆ ಕಾಪಾಡುವಲ್ಲಿ ಕೇಂದ್ರ ವಿಫಲವಾಗಿದೆ ಹಲವಾರು ಕನಸಕ್ತ ಪೋಷಕರು ಮತ್ತು ಮಕ್ಕಳ ಶ್ರಮವನ್ನು ಹಾಳು ಮಾಡಿದ್ದು ನೀಟ್ ಪರೀಕ್ಷೆ ನಡೆಸುವ ಕೇಂದ್ರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು 9 ವರ್ಷಗಳಲ್ಲಿ ನಾಲ್ಕು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆ ಅಂತಹ ಸಮಸ್ಯೆಗಳನ್ನು ಭವಿಷ್ಯ ರೂಪಿಸುವ ವಿದ್ಯಾರ್ಥಿಗಳ ಜೀವನಕ್ಕೆ ಅಡ್ಡ ತಂದು ಇನ್ನಿಲ್ಲದ ಆತಂಕವನ್ನು ಸೃಷ್ಟಿ ಮಾಡಿರುವ ಪ್ರಶ್ನೆ ಪತ್ರಿಕೆ ಸೋರಿಕೆಯ ಅವಾಂತರದ ವಿರುದ್ಧ ಪೋಷಕರು ನ್ಯಾಯಕ್ಕಾಗಿ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಆಂದೋಲನವನ್ನು ಹಮ್ಮಿ ಕೊಳ್ಳಲಿದ್ದಾರೆ ಎಂದು ರಾಜ್ಯ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳಿಧರ ಹಾಲಪ್ಪ ತಿಳಿಸಿದರು.
ನೀಟ್ ಪರೀಕ್ಷೆಯ ಅವಾಂತರದ ವಿರುದ್ಧ ಹಾಗೂ ಮುಂಬರುವ ಪರೀಕ್ಷೆಗಳನ್ನು ಮುಂದೂಡುವಂತೆ ಒತ್ತಾಯಿಸಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಾ. ಬಾಲ ಗುರುಮೂರ್ತಿ ಅವರಿಗೆ ಮನವಿ ಸಲ್ಲಿಸಿ ನಂತರ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪೋಷಕರು ತಾಯಂದಿರು ಸುಮಾರು ವರ್ಷಗಳ ಕಾಲ ಹೊಟ್ಟೆ ಬಟ್ಟೆಕಟ್ಟಿ ಮಕ್ಕಳನ್ನು ಪರೀಕ್ಷೆಗೆ ತಯಾರಿ ಮಾಡಿದ್ದಾರೆ. ಆದರೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಈಗಾಗಲೇ ಹಲವು ಬಾರಿ ಈ ರೀತಿಯ ಸೋರಿಕೆಯ ಅವಾಂತರಗಳನ್ನು ಸೃಷ್ಟಿಸಿ ಮಕ್ಕಳ ಭವಿಷ್ಯಕ್ಕೆ ಅಂಧಕಾರವನ್ನು ತಂದೊಡ್ಡಿದೆ ಎಂದು ಅವರು ಆರೋಪಿಸಿದರು.
ಅನೇಕ ರಾಜ್ಯಗಳು ಕಳೆದ ಮೂರು ವರ್ಷಗಳಿಂದ ರಾಜ್ಯ ಸರ್ಕಾರಗಳ ಅಧೀನದಲ್ಲಿ ಸ್ವಾ ಪರೀಕ್ಷಾ ನಿಯಂತ್ರಣವನ್ನು ಹೊಂದಿದ್ದು ರಾಜ್ಯ ಸರ್ಕಾರಗಳಿಗೆ ಅನುಮತಿ ನೀಡಬೇಕೆಂದು ಒತ್ತಾಯಿಸುತ್ತಿವೆ. ಈಗಾಗಲೇ ಯಶಸ್ವಿ ಪರೀಕ್ಷೆಯನ್ನು ನಡೆಸುತ್ತಿದ್ದ ರಾಜ್ಯಗಳಿಗೆ ಪರೀಕ್ಷೆ ನಡೆಸುವ ಅಧಿಕಾರವನ್ನು ನೀಡಬೇಕು. ಕೇಂದ್ರ ಸರ್ಕಾರದ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಈ ಪರೀಕ್ಷಾ ಕೇಂದ್ರಕ್ಕೆ ಮುಖ್ಯಸ್ಥರಾಗಿದ್ದು, ಈವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ, ಬದಲಿಗೆ ಪರೀಕ್ಷಾ ಪ್ರಾಧಿಕಾರದ ಟೆಸ್ಟಿಂಗ್ ಏಜೆನ್ಸಿ ಯವರು ಇಲ್ಲ ಸಲ್ಲದ ಉಡಾಫೆ ಉತ್ತರಗಳನ್ನು ನೀಡುತ್ತಿದ್ದು, ಇದು ಮಕ್ಕಳ ಭವಿಷ್ಯಕ್ಕೆ ಮಾರಕವಾಗಿ ಪರಿಣಮಿಸಿದೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ಭಯೋತ್ಪಾದಕರ ಕುಕೃತ್ಯವಿದೆ ಎಂಬ ಜನರ ಮನಸು ಬದಲಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಗುಡುಗಿದರು.
ದೇಶಾದ್ಯಂತ ಸುಮಾರು 2.3 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ರಾಜ್ಯದಲ್ಲಿ 1.45 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದಾರೆ ಕರ್ನಾಟಕದಲ್ಲಿ 10,569 ವೈದ್ಯಕೀಯ ಸೀಟುಗಳು ಲಭ್ಯವಿದ್ದು ಇವುಗಳನ್ನು ವಿದ್ಯಾರ್ಥಿಗಳು ಸರಿಯಾಗಿ ಬಳಸಿಕೊಳ್ಳಲು ಆಗದೆ ವಿಫಲ ರಾಗುತ್ತಿದ್ದು ಕೇಂದ್ರ ಸರ್ಕಾರ ಕೂಡಲೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ವಿರುದ್ಧ ತನಿಖೆ ಕೈಗೊಂಡು ಸಂಬಂಧಪಟ್ಟ ಜನಪ್ರತಿನಿಧಿಗಳು ಜವಾಬ್ದಾರಿ ಹೊತ್ತು ಪ್ರತಿಕ್ರಿಯೆಯನ್ನು ನೀಡಬೇಕಿದೆ ಈಗಾಗಲೇ ರಾಜ್ಯಾದ್ಯಂತ ಪೋಷಕರು ಕೇಂದ್ರ ಶಿಕ್ಷಣ ಮಂತ್ರಿ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಒತ್ತಡವನ್ನು ತರಬೇಕಿದೆ.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಾ.ಬಾಲಮೂರ್ತಿ ಮಾತನಾಡಿ, ಪ್ರಶ್ನೆ ಪತ್ರಿಕೆ ಸೋರಿಕೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಸರ್ಕಾರದಿಂದ ನಮಗೆ ಯಾವುದೇ ರೀತಿಯ ಆದೇಶಗಳು ಬಂದಿರುವುದಿಲ್ಲ ಇಡೀ ದೇಶದಲ್ಲಿ ಈ ಸಮಸ್ಯೆಯ ಬಗ್ಗೆ ಚರ್ಚೆ ನಡೆಯುತ್ತಿದ್ದು ಸದ್ಯಕ್ಕೆ ಯಾವುದೇ ಪರೀಕ್ಷೆಗಳು ನಡೆಯುವ ಕುರಿತ ಮಾಹಿತಿಯನ್ನು ಸರ್ಕಾರ ದೃಢಪಡಿಸಿಲ್ಲ ಹೀಗಾಗಿ ಪೋಷಕರು ನೀಡಿರುವ ಈ ಮನವಿಯನ್ನು ಸಂಬಂಧಪಟ್ಟ ಮೇಲಧಿಕಾರಿಗಳಿಗೆ ವರ್ಗಾವಣೆ ಮಾಡುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಶಿವಾಜಿ, ದಿಯಾ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಇಮ್ಮಾನ್ಯುಯೆಲ್ ಜಯಕುಮಾರ್, ಸಿಮೆಂಟ್ ಮುಂಜುನಾಥ್, ಯೂತ್ ಕಾಂಗ್ರೆಸ್ ಮತ್ತು ಎನ್ ಎಸ್ ಯುಐನ ಮಹಮ್ಮದ್ ದಸ್ತಗೀರ್, ಶಾಹಿದ್, ಜಮೀರ್ ಮುಬಾರಕ್, ಮಹಮ್ಮದ್ ಕೈಫ್ ಸೇರಿದಂತೆ ಪೋಷಕರು ಹಾಗೂ ವಿವಿಧ ಸಂಘ ಸಂಸ್ಥೆಯ ಮುಖಂಡರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


