ತುಮಕೂರು: ಜಿಲ್ಲೆಯಲ್ಲಿ ಇತ್ತೀಚೆಗೆ ಪೂರ್ಣಗೊಂಡ ಮನೆ ಗಣತಿ ಕಾರ್ಯದ ವೇಳೆ ಭಾರಿ ಪ್ರಮಾಣದಲ್ಲಿ ಜನರ ವಲಸೆ ಹೋಗಿರುವುದು ಬೆಳಕಿಗೆ ಬಂದಿದೆ. ಜನಗಣತಿಯ ಭಾಗವಾಗಿ ನಡೆದ ಈ ಪ್ರಕ್ರಿಯೆಯಲ್ಲಿ ಜಿಲ್ಲೆಯಾದ್ಯಂತ ಒಟ್ಟು 1,514 ಮನೆಗಳಿಗೆ ಬೀಗ ಹಾಕಿರುವುದು ಕಂಡುಬಂದಿದೆ.
ಏಪ್ರಿಲ್ 16ರಿಂದ ಮೇ 15ರ ವರೆಗೆ ಜಿಲ್ಲೆಯಲ್ಲಿ ಮನೆ ಗಣತಿ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 8,97,038 ಮನೆಗಳ ಗಣತಿ ಮಾಡುವ ಗುರಿಯನ್ನು ಹೊಂದಲಾಗಿತ್ತು. ಆದರೆ, ಗಣತಿ ಸಮಯದಲ್ಲಿ ಅನೇಕ ಕುಟುಂಬಗಳು ಮನೆಗೆ ಬೀಗ ಹಾಕಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ಜಿಲ್ಲೆಯ ಪಾವಗಡ, ಶಿರಾದ ಗಡಿ ಭಾಗಗಳು, ಚಿಕ್ಕನಾಯಕನಹಳ್ಳಿ ಹಾಗೂ ತುಮಕೂರು ನಗರ ಪ್ರದೇಶಗಳಲ್ಲಿ ಅತಿ ಹೆಚ್ಚು ಮನೆಗಳಿಗೆ ಬೀಗ ಹಾಕಲಾಗಿದೆ. ವಿಶೇಷವಾಗಿ ಪಾವಗಡ ಮತ್ತು ಶಿರಾ ಭಾಗದ ಜನರು ಉದ್ಯೋಗ ಹಾಗೂ ಜೀವನೋಪಾಯ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗಿರುವುದರಿಂದ ಇಲ್ಲಿನ ಮನೆಗಳು ಖಾಲಿ ಬಿದ್ದಿವೆ ಎಂದು ವರದಿಯಾಗಿದೆ.
ಜಿಲ್ಲೆಯಲ್ಲಿ ಒಟ್ಟು 5,253 ಗಣತಿ ಬ್ಲಾಕ್ಗಳನ್ನು (ಹೌಸ್ ಲಿಸ್ಟಿಂಗ್ ಬ್ಲಾಕ್) ಗುರುತಿಸಲಾಗಿದ್ದು, ಪ್ರತಿ ಬ್ಲಾಕ್ನಲ್ಲಿ 150 ರಿಂದ 200 ಮನೆಗಳನ್ನು ಸೇರಿಸಲಾಗಿತ್ತು. ಈ ಬೃಹತ್ ಕಾರ್ಯಕ್ಕಾಗಿ 45 ಮೇಲ್ವಿಚಾರಕರು ಹಾಗೂ 4,415 ಗಣತಿದಾರರನ್ನು ನಿಯೋಜಿಸಲಾಗಿತ್ತು.
ಆರಂಭದಲ್ಲಿ ನಗರ ಭಾಗದಲ್ಲಿ ಗಣತಿ ಕಾರ್ಯ ಮಂದಗತಿಯಲ್ಲಿ ಸಾಗಿದರೂ, ನಂತರದ ದಿನಗಳಲ್ಲಿ ವೇಗ ಪಡೆದುಕೊಂಡಿತು. ಗ್ರಾಮೀಣ ಭಾಗಗಳಲ್ಲಿ ಮೊದಲಿನಿಂದಲೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು.
ಮಧುಗಿರಿ ಮತ್ತು ಪಾವಗಡ ನಗರ ಪ್ರದೇಶಗಳಲ್ಲಿ ಮೇ 8ರ ವರೆಗೂ ಗಣತಿ ಕಾರ್ಯ ಅತ್ಯಂತ ನೀರಸವಾಗಿತ್ತು. ಆದರೆ, ಕೊನೆಯ ಒಂದು ವಾರದಲ್ಲಿ ಬಿರುಸಿನ ಕೆಲಸ ನಡೆಸಿ ಸುಮಾರು ಅರ್ಧದಷ್ಟು ಮನೆಗಳ ಗಣತಿಯನ್ನು ಪೂರ್ಣಗೊಳಿಸಲಾಯಿತು.
ಗಣತಿ ಕಾರ್ಯದ ಆರಂಭದಲ್ಲಿ ಗಣತಿದಾರರು ತಾಂತ್ರಿಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ‘ಹೌಸ್ ಲಿಸ್ಟಿಂಗ್ ಆಪರೇಟಿಂಗ್ ಆ್ಯಪ್’ (HLO) ಇನ್ಸ್ಟಾಲ್ ಆಗದ ಕಾರಣ ಗಣತಿದಾರರು ಪರದಾಡಿದರು. ವಿಶೇಷವಾಗಿ ಆಂಡ್ರಾಯ್ಡ್ 10ಕ್ಕಿಂತ ಕಡಿಮೆ ಆವೃತ್ತಿಯ (ವರ್ಷನ್) ಮೊಬೈಲ್ ಹೊಂದಿದ್ದ ಸಿಬ್ಬಂದಿಗೆ ಆ್ಯಪ್ ಬೆಂಬಲಿಸದೆ ತೊಂದರೆಯಾಯಿತು. ಆದಾಗ್ಯೂ, ನಂತರದ ದಿನಗಳಲ್ಲಿ ಸಿಬ್ಬಂದಿ ಆ್ಯಪ್ಗೆ ಒಗ್ಗಿಕೊಂಡು ನಿಗದಿತ ಅವಧಿಯೊಳಗೆ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.
ಮನೆ ಗಣತಿ ಪ್ರಕ್ರಿಯೆ ಯಶಸ್ವಿಯಾಗಿ ಮುಗಿದಿದ್ದರೂ, ಗಣತಿಯ ಮೇಲ್ವಿಚಾರಕರಿಗೆ (Supervisors) ಇದುವರೆಗೂ ಇಲಾಖೆಯಿಂದ ಅಧಿಕೃತ ಗುರುತಿನ ಚೀಟಿಗಳನ್ನು ವಿತರಿಸಲಾಗಿಲ್ಲ. ಗಣತಿದಾರರಿಗೆ ಗುರುತಿನ ಚೀಟಿ ಸಿಕ್ಕಿದ್ದರೂ, ಮೇಲ್ವಿಚಾರಕರು ಮಾತ್ರ ವಂಚಿತರಾಗಿದ್ದಾರೆ. ಗಣತಿ ಆರಂಭವಾದ ವಾರದ ನಂತರ ಅವರಿಗೆ ಅಗತ್ಯ ಪರಿಕರಗಳನ್ನು ನೀಡಲಾಗಿತ್ತು. ಮುಂದಿನ ದಿನಗಳಲ್ಲಿಯೂ ಇವರನ್ನೇ ಪ್ರಮುಖ ಗಣತಿ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತದೆಯಾದ್ದರಿಂದ, ಅದಕ್ಕೂ ಮುನ್ನವೇ ಇಲಾಖೆ ಗುರುತಿನ ಚೀಟಿ ಹಾಗೂ ಅಗತ್ಯ ಪರಿಕರಗಳನ್ನು ಒದಗಿಸಬೇಕಿದೆ ಎಂದು ಸಿಬ್ಬಂದಿ ಒತ್ತಾಯಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


