ತುಮಕೂರು: ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಬೇಕು ಮತ್ತು ಕನಿಷ್ಠ ವೇತನವನ್ನು ರೂ. ೩೬ ಸಾವಿರಕ್ಕೆ ಹೆಚ್ಚಿಸಬೇಕು ಸೇರಿದಂತೆ ಒಟ್ಟು ೬ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಮತ್ತು ವಿವಿಧ ಕಾರ್ಮಿಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ನಗರದ ಸ್ವತಂತ್ರ ಚೌಕದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು.
ಇತ್ತೀಚೆಗೆ (ಮೇ ೨೨) ರಾಜ್ಯ ಸರ್ಕಾರ ಹೊರಡಿಸಿರುವ ಏಕರೂಪದ ಕನಿಷ್ಠ ವೇತನ ಅಧಿಸೂಚನೆಯನ್ನು ಸ್ವಾಗತಿಸಿದ ಸಿಐಟಿಯು, ಅದರಲ್ಲಿರುವ ಹಲವು ನ್ಯೂನ್ಯತೆಗಳನ್ನು ತಕ್ಷಣವೇ ಸರಿಪಡಿಸಬೇಕು ಎಂದು ಒತ್ತಾಯಿಸಿತು.
ಈ ಕುರಿತು ಮಾತನಾಡಿದ ಸಿಐಟಿಯು ರಾಜ್ಯ ಉಪಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾ ಅಧ್ಯಕ್ಷರಾದ ಕಾಂ. ಸೈಯದ್ ಮುಜೀಬ್, “ಸುಪ್ರೀಂ ಕೋರ್ಟ್ನ ‘ರೆಪ್ತಕೋಸ್ ಬ್ರೆಟ್’ ಮಾನದಂಡದಂತೆ ಕನಿಷ್ಠ ವೇತನ ಪರಿಷ್ಕರಿಸಬೇಕೆಂಬ ಹೈಕೋರ್ಟ್ ನಿರ್ದೇಶನದ ಬೆನ್ನಲ್ಲೇ ಈ ಅಧಿಸೂಚನೆ ಬಂದಿದೆಯಾದರೂ, ಇದರಲ್ಲಿ ನಿಗದಿಯಾಗಿರುವ ದರ ವೈಜ್ಞಾನಿಕ ಲೆಕ್ಕಾಚಾರಕ್ಕಿಂತ ತೀರಾ ಕಡಿಮೆಯಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಕಮಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚವನ್ನು ಸರಿದೂಗಿಸಲು ಸರಾಸರಿ ರೂ. ೩೬,೦೦೦ ಕನಿಷ್ಠ ವೇತನ ನಿಗದಿಪಡಿಸುವುದು ಅತ್ಯಗತ್ಯ ಎಂದು ಸರ್ಕಾರವನ್ನು ಒತ್ತಾಯಿಸಿದರು.
ಗ್ರಾಮಪಂಚಾಯಿತಿ ನೌಕರರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ ಎನ್.ಕೆ ಮಾತನಾಡಿ, “ಕರಡು ಅಧಿಸೂಚನೆ ಹೊರಬಿದ್ದ ದಿನಾಂಕ ೧೧—೦೪–೨೦೨೫ ರಿಂದಲೇ ಈ ನಿಯಮವನ್ನು ಪೂರ್ವಾನ್ವಯಗೊಳಿಸಬೇಕಿತ್ತು. ಅದನ್ನು ಬಿಟ್ಟು ಮೇ ೨೨ರಿಂದ ಜಾರಿಗೆ ತಂದಿರುವುದು ಕಾರ್ಮಿಕರಿಗೆ ಮಾಡಿದ ದೊಡ್ಡ ಅನ್ಯಾಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ಜಿಲ್ಲಾ ಖಜಾಂಚಿ ಎ. ಲೋಕೇಶ್ ಮಾತನಾಡಿ, “ಗಾರ್ಮೆಂಟ್ಸ್, ಪ್ಲಾಂಟೇಷನ್, ಬೀಡಿ, ಅಗರಬತ್ತಿ ಹಾಗೂ ಕೈಮಗ್ಗ ಸೇರಿದಂತೆ ಪ್ರಮುಖ ೧೯ ಉದ್ದಿಮೆಗಳನ್ನು ಕನಿಷ್ಠ ವೇತನದ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಇದರಿಂದಾಗಿ ಬಹುಸಂಖ್ಯಾತ ಮಹಿಳಾ ಕಾರ್ಮಿಕರು ಸೌಲಭ್ಯದಿಂದ ವಂಚಿತರಾಗಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ಇದರೊಂದಿಗೆ, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ದಾರ್ ಬಾನು ಅವರು, ಅಂಗನವಾಡಿ, ಬಿಸಿಯೂಟ (ಅಕ್ಷರದಾಸೋಹ) ಹಾಗೂ ಆಶಾ ಕಾರ್ಯಕರ್ತೆಯರಂತಹ ಎಲ್ಲಾ ಸ್ಕಿಂ ನೌಕರರನ್ನು ಅಧಿಕೃತವಾಗಿ ‘ಕಾರ್ಮಿಕರು’ ಎಂದು ಪರಿಗಣಿಸಿ, ಅವರಿಗೂ ಕನಿಷ್ಠ ವೇತನದ ಸೌಲಭ್ಯ ನೀಡಬೇಕು ಎಂದು ಗಟ್ಟಿಯಾಗಿ ಧ್ವನಿ ಎತ್ತಿದರು.
ಬೇಡಿಕೆಗಳು:
- ಪ್ರಸ್ತುತ ಜೀವನ ವೆಚ್ಚಕ್ಕೆ ಅನುಗುಣವಾಗಿ ರೂ. ೩೬,೦೦೦ ಕನಿಷ್ಠ ವೇತನ ನಿಗದಿಪಡಿಸಬೇಕು.
- ಗುತ್ತಿಗೆ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಖಾಯಂಯೇತರ ಕಾರ್ಮಿಕರನ್ನು ಕಾಯಂ ಮಾಡಲು ಪ್ರತ್ಯೇಕ ಶಾಸನ ರೂಪಿಸಬೇಕು.
- ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ಕರ್ನಾಟಕದಲ್ಲಿ ಕಾರ್ಮಿಕರ ಹಿತರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ತಿದ್ದುಪಡಿ ತರಬೇಕು.
- ಹೊರಗಿಡಲಾದ ಗಾರ್ಮೆಂಟ್ಸ್, ಬೀಡಿ, ಪ್ಲಾಂಟೇಷನ್ ಸೇರಿದಂತೆ ೧೯ ಉದ್ದಿಮೆಗಳು ಹಾಗೂ ಸ್ಕಿಂ ನೌಕರರನ್ನು ಕನಿಷ್ಠ ವೇತನ ವ್ಯಾಪ್ತಿಗೆ ತರಬೇಕು.
ಮೆರವಣಿಗೆಯಲ್ಲಿ ತುಮಕೂರು ಮಹಾನಗರ ಪಾಲಿಕೆ ಕಸದ ಆಟೋಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಮಾರುತಿ, ಕೈಗಾರಿಕಾ ಕಾರ್ಮಿಕ ಸುಜಿತ್ ನಾಯಕ ಸೇರಿದಂತೆ ಜಿಲ್ಲೆಯ ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಾದ ರಂಗಧಮಯ್ಯ, ಅನುಸೂಯ, ಅಬ್ದುಲ್ ಮುನ್ನಫ್, ಪುಷ್ಪ, ಶಿವಗಂಗಮ್ಮ, ನಾಗೇಶ್, ಶಂಕ್ರಣ್ಣ, ನಾಗರಾಜು, ಷಣುಖಪ್ಪ, ಮಂಜುನಾಥ್, ಉಮೇಶ್, ರಾಮಕೃಷ್ಣಯ್ಯ ಹಾಗೂ ನೂರಾರು ಕಾರ್ಮಿಕರು ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕಾರ್ಮಿಕರ ಈ ಎಲ್ಲಾ ನ್ಯಾಯಸಮ್ಮತ ಬೇಡಿಕೆಗಳನ್ನು ರಾಜ್ಯ ಸರ್ಕಾರವು ತ್ವರಿತವಾಗಿ ಈಡೇರಿಸಬೇಕೆಂದು ಸಿಐಟಿಯು ಈ ಸಂದರ್ಭದಲ್ಲಿ ಕಟ್ಟುನಿಟ್ಟಿನ ಆಗ್ರಹ ಮಾಡಿದೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


