ಶಿರಾ: ಈಡಿಗ ಸಮುದಾಯದ ಕುಲಕಸುಬಾದ ಸೇಂದಿ ಮಾರಾಟವನ್ನು ಈ ಸಮುದಾಯದ ಜೀವನಕ್ಕೆ ಮಾರ್ಗೋಪಾಯಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡದೆ ನಿಷೇಧಿಸಿದ್ದು, ಪುನಃ ಈ ಸಮುದಾಯದ ಕುಲಕಸುಬಾದ ಸೇಂದಿ ಮಾರಾಟವನ್ನು ಮುಂದುವರೆಸಲು ಅವಕಾಶ ನೀಡುವಂತೆ ಒತ್ತಾಯಿಸಿ ಕಾನೂನು ಹೋರಾಟ ನಡೆಸುವುದು ಖಚಿತ ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಹೇಳಿದರು.
ಈಡಿಗ ಜನಾಂಗದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಚಿತ್ತಾಪುರ ತಾಲ್ಲೂಕಿನ ಕರಗಲ್ಲು ಗ್ರಾಮದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದಿಂದ ಬೆಂಗಳೂರಿನವರೆಗೆ ಸುಮಾರು 700 ಕಿಮೀ ಪಾದಯಾತ್ರೆಯು ಗುರುವಾರ ಶಿರಾಕ್ಕೆ ಆಗಮಿಸಿತು. ಸಮುದಾಯದ ಮುಖಂಡರು ಹಾಗೂ ಮಾತೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದ ನಂತರ ಅವರು ಈಡಿಗ ಜನಾಂಗದ ಜಾಗೃತಿ ಸಭೆಯಲ್ಲಿ ಮಾತನಾಡಿದರು.
ಶಿರಾದಿಂದ ಪ್ರಾರಂಭವಾದ ಪಾದಯಾತ್ರೆಯಲ್ಲಿ ಸುಮಂಗಲಿಯರು ಪೂರ್ಣಕುಂಭ ಕಲಶಗಳನ್ನು ಹೊತ್ತು ಸಾಗಿದರು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಶಿರಾ ಭಾಗದ ಅನೇಕ ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಗುರುವಾರ ರಾತ್ರಿ ದೊಡ್ಡ ಆಲದಮರದಲ್ಲಿ ತಂಗಿ, ಪಾದಯಾತ್ರೆ ಇಂದು (ಶುಕ್ರವಾರ) ತುಮಕೂರು ತಾಲ್ಲೂಕು ಪ್ರವೇಶಿಸಲಿದೆ.
ಪ್ರಣವಾನಂದ ಸ್ವಾಮೀಜಿ ನಡೆಸುತ್ತಿರುವ ಪಾದಯಾತ್ರೆಯ ಸ್ಥಳಕ್ಕೆ ಜೆಡಿಎಸ್ ರಾಜ್ಯ ಸಮಿತಿ ಸದಸ್ಯ ಆರ್ ಉಗ್ರೇಶ್, ನಾರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಕೆ ಮಂಜುನಾಥ್, ತುಮುಲ್ ನಿರ್ದೇಶಕ ಎಸ್.ಆರ್ ಗೌಡ ಭೇಟಿ ನೀಡಿದರು.
ಪಾದಯಾತ್ರೆ ಸಮಿತಿಯ ಮುಖ್ಯ ಸಂಚಾಲಕ ಲಕ್ಷ್ಮೀನರಸಯ್ಯ, ರಾಷ್ಟ್ರೀಯ ಈಡಿಗ ಮಹಾಮಂಡಳಿ ರಾಜ್ಯ ಕಾರ್ಯದರ್ಶಿ ಹನುಮಂತರಾಜು, ಜಿಲ್ಲಾಧ್ಯಕ್ಷ ಎ.ಸುರೇಶ್, ತಾಲ್ಲೂಕು ಅಧ್ಯಕ್ಷ ಅಜ್ಜೇನಹಳ್ಳಿ ರಮೇಶ್, ಎಪಿಸಿ ರಾಜಣ್ಣ ಚಲಪತಿ, ವೆಂಕಟಶಾಮಯ್ಯ, ಶ್ರೀನಿವಾಸ್, ಚಿಕ್ಕನಾಯಕನಹಳ್ಳಿ ತಾಲ್ಲೂಕು ಉಪಾಧ್ಯಕ್ಷ ವೆಂಕಟೇಶ್, ರೇಣುಕಾಂಬ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಮಲ್ಲಿಕಾರ್ಜುನ್, ಬಾಲರಾಜು, ಬಸವರಾಜು, ಶೇಷಾದ್ರಿ, ಹನುಮಂತಣ್ಣ ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


