- ವಿಶೇಷ ವರದಿ : ಚಂದ್ರಶೇಖರ ಮದ್ಲಾಪೂರ
ಮಾನವಿ: ತಾಲೂಕಿನ ನೀರಮಾನವಿ ಗ್ರಾಮದ ಅಶ್ವಥಾಮ ( ಪೂಜಾ ) ತಂದೆ ಮಾರೆಪ್ಪ ಇವರು ತೃತೀಯ ಲಿಂಗ ಮೀಸಲಾತಿಯನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ರಾಜ್ಯ ಶಿಕ್ಷಣ ಮಾರ್ಚ್ ತಿಂಗಳಲ್ಲಿ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಅಧಿಕೃತ ತೃತೀಯ ಲಿಂಗ ಮೀಸಲಾತಿಯಲ್ಲಿ ಪರೀಕ್ಷೆ ಬರೆದು ಸಮಾಜ ವಿಜ್ಞಾನ ವಿಷಯದ ಶಿಕ್ಷಕರಾಗಿ ಆಯ್ಕೆಯಾಗಿದ್ದು, ನೀರಮಾನವಿ ಗ್ರಾಮದ ಜನರು ಹರ್ಷ ವ್ಯಕ್ತಪಡಿಸಿದರು.
ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನೀರಮಾನವಿ ಗ್ರಾಮದಲ್ಲಿ ಜನಿಸಿದ ಇವರು, 1 ರಿಂದ 10ನೇ ತರಗತಿಯವರೆಗೆ ನೀರಮಾನವಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದರು. ನಂತರ ಮಾನವಿ ಪಟ್ಟಣದಲ್ಲಿ ಪದವಿ ಪೂರ್ವ, ಪದವಿಯನ್ನು ಪೂರ್ಣಗೊಳಿಸಿದ ಇವರು, ರಾಯಚೂರಿನ ಸರ್ವೋದಯ ಕಾಲೇಜಿನಲ್ಲಿ ಬಿ ಇ ಎಡ್ ಪೂರ್ಣಗೊಳಿಸಿ ಇಂದು ತೃತೀಯ ಲಿಂಗಿಯ ಮೀಸಲಾತಿಯಲ್ಲಿ ರಾಜ್ಯದ ಮೂರು ಜನರಲ್ಲಿ ಇವರೊಬ್ಬರಾಗಿ ಆಯ್ಕೆಯಾಗಿ ತಮ್ಮ ಜೀವನದ ಗುರಿಯನ್ನು ತಲುಪಿ ಎಲ್ಲರಲ್ಲೂ ಅಚ್ಚರಿಯುಟ್ಟು ಮಾಡಿದ್ದಾರೆ.
ಈ ಬಗ್ಗೆ ಅವರ ಜೊತೆಗೆ ನಡೆಸಿದ ಚಿಕ್ಕ ಸಂದರ್ಶನದಲ್ಲಿ ಮಾತನಾಡಿದ ಅವರು, ನಾನು ಹುಟ್ಟಿನಿಂದ ಗಂಡಸಿನ ದೇಹವಿದ್ದರೂ ಹೆಣ್ಣಿನ ಮನೋಭಾವದೊಂದಿಗೆ ಬೆಳೆದವ. ಪ್ರಾಥಮಿಕ ಶಿಕ್ಷಣದಿಂದ M.A bed ವಿದ್ಯಾಭ್ಯಾಸ ಮುಗಿಯುವವರೆಗೂ ನಮ್ಮೂರಿನ ಸರ್ಕಾರಿ ಶಾಲೆ ಹಾಗೂ ಮಾನವಿ ರಾಯಚೂರು ಸಿಂಧನೂರಿನಲ್ಲಿಯೇ ಓದಿದ್ದು. ನಂತರ ಹೆಣ್ಣಿನ ಭಾವನೆಯನ್ನು ಹೊಂದಿರುವ ನಾನು ಎಲ್ಲರಂತೆಯೇ ಕುಟುಂಬದ ವಿರೋಧವನ್ನು ಎದುರಿಸಿ, ಕನಿಷ್ಠ 7 ವರ್ಷಗಳ ಕಾಲ ಅಜ್ಞಾತ ದಿನಗಳನ್ನು ಅನುಭವಿಸಿದೆ. ನಂತರ ನಮ್ಮ ಕುಟುಂಬದವರು ಪ್ರೀತಿ ವಿಶ್ವಾಸ ನಂಬಿಕೆಯೊಂದಿಗೆ ಮನೆಗೆ ಆಗಮಿಸಿದ ನಾನು ಶಿಕ್ಷಣವನ್ನು ಮುಂದುವರೆಸಿದೆ ಎಂದರು.
ಇಂದಿನ ಸುಪ್ರೀಂ ಕೋರ್ಟ್ ಆದೇಶದಂತೆ ನಮ್ಮ ಸಮುದಾಯಕ್ಕೆ ಶೇಕಡಾ 1% ರಷ್ಟು ನೀಡಿದ ಮೀಸಲಾತಿಯನ್ನು ಸದ್ಬಳಕೆ ಮಾಡಿಕೊಳ್ಳಲೇಬೇಕು ಎನ್ನುವ ದೃಢ ಮನಸ್ಸಿನಿಂದ ಪ್ರಾಥಮಿಕ ಶಾಲೆ ಶಿಕ್ಷಕರ ಪರೀಕ್ಷೆಗಾಗಿ ಹಗಲಿರುಳು ಓದುವುದಕ್ಕೆ ಆರಂಭ ಮಾಡಿ, ಇಂದು ಅದೇ ಮೀಸಲಾತಿಯಲ್ಲಿ 6-8ನೇ ತರಗತಿಯ ಶಿಕ್ಷಕಿಯಾಗಿ ಆಯ್ಕೆಯಾಗಿದ್ದು ತುಂಬಾ ಸಂತೋಷದ ವಿಷಯವಾಗಿದೆ. ಇದಕ್ಕೆ ಸಹಕಾರ ಮಾಡಿದ ಕುಟುಂಬದವರಿಗೆ, ನಮ್ಮ ಮಂಗಳಮುಖಿ ಸಮುದಾಯದವರಿಗೆ, ನನಗೆ ಶಿಕ್ಷಣ ನೀಡಿದ ಶಿಕ್ಷಕರಿಗೆ, ನಮ್ಮೂರಿನ ಜನರಿಗೆ ಬಹಳ ಪ್ರಮುಖವಾಗಿ ನನ್ನ ಏಳಿಗೆಯನ್ನು ಕಂಡು ಪ್ರೋತ್ಸಾಹ ನೀಡಿ ಬೆಂಬಲಿಸುತ್ತಿರುವ ರಾಜ್ಯದ ಎಲ್ಲ ಹಿರಿಯರಿಗೆ, ಬಹಳ ಪ್ರಮುಖವಾಗಿ ನನ್ನ ಸಾಧನೆಯನ್ನು ಗುರುತಿಸಿ ಮೊಟ್ಟಮೊದಲ ಮೊದಲ ಬಾರಿಗೆ ಪತ್ರಿಕೆಯಲ್ಲಿ ಪ್ರಕಟಿಸಿದ ನನ್ನ ಸ್ನೇಹಿತ ಹಾಗೂ ಆತ್ಮೀಯ ಅಣ್ಣನಾದ ಚಂದ್ರಶೇಖರ ಮದ್ಲಾಪೂರ ಇವರಿಗೆ ಹೃದಯ ಪೂರ್ವಕವಾದ ಧನ್ಯವಾದಗಳು ನಿಮ್ಮ ಪ್ರೋತ್ಸಾಹ ಸದಾಕಾಲವೂ ಇದ್ದಲ್ಲಿ ಶಿಕ್ಷಕ ವೃತ್ತಿಯಲ್ಲಿ ಮುಂದುವರೆದು ಮಾದರಿಯಾಗುವ ಗುರಿಯನ್ನು ಹೊಂದಿದ್ದು ಇನ್ನೂ ಉನ್ನತ ಹುದ್ದೆಗಾಗಿ ಪ್ರಯತ್ನ ಮಾಡುತ್ತೇನೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz