ಮಧುಗಿರಿ : ವ್ಯಕ್ತಿಯೋರ್ವ ತನ್ನ ಕಿರಿಯ ಪತ್ನಿ ಹಾಗೂ ಆಕೆಯ ಪುತ್ರನಿಗೆ ಗಂಭೀರವಾಗಿ ಹಲ್ಲೆ ನಡೆಸಿ, ಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು ರೂ. 1,00,000 ದಂಡ ಹಾಗೂ ಭಾ.ದಂ.ಸಂ ಕಲಂ:326 ಅಡಿಯಲ್ಲಿ 3 ವರ್ಷ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿ ಮಧುಗಿರಿಯ ಗೌರವಾನ್ವಿತ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಈ ಘಟನೆ ಕೊರಟಗೆರೆ ಟೌನ್ ವ್ಯಾಪ್ತಿಯ ಕಾಳಿದಾಸನಗರ ಶ್ರೀನಿವಾಸ ಪದವಿ ಪೂರ್ವ ಕಾಲೇಜು ಬಳಿ ನಡೆದಿತ್ತು. ಆರೋಪಿ ಚಾಂದ್ ಪಾಷ ಹೆಸರಿನಲ್ಲಿ ಕೊರಟಗೆರೆ ಟೌನ್ ಹನುಮಂತಪರ ಸರ್ವೆನಂ 52/2ರಲ್ಲಿ 01.01 ಗುಂಟೆ ನಿವೇಶನ ಇದ್ದು, ಸದರಿ ನಿವೇಶನವನ್ನು ಆರೋಪಿಯು ಮಾರಾಟ ಮಾಡಿ ಬಂದ ಹಣದಲ್ಲಿ ತನ್ನ ಹಿರಿಯ ಹೆಂಡತಿಯ ಮಗಳಾದ ರೇಷ್ಮಾ ರವರಿಗೆ ಒಡವೆಗಳನ್ನು ಮಾಡಿಸಿ ಕೊಡಲು ಮುಂದಾಗಿದ್ದು, ಇದಕ್ಕೆ ಕಿರಿಯ ಪತ್ನಿಯ ಮಗಳಾದ ಜಬೀನ್ ತಾಜ್ ಹಾಗೂ ಮಗ ಮಹಮ್ಮದ್ ಅಲಿ ಅಡ್ಡಿ ಪಡಿಸುತ್ತಿದ್ದಾರೆ ಎಂದು ಹತ್ಯೆಗೆ ಯತ್ನಿಸಿದ್ದ.
ತನ್ನ ಕಿರಿಯ ಹೆಂಡತಿ ಜಬೀನ್ ತಾಜ್ ಗೆ ದೊಣ್ಣೆಯಿಂದ ತಲೆಯ ಎಡಭಾಗಕ್ಕೆ ಹಲ್ಲೆ ನಡೆಸಿದ್ದು, ಇದನ್ನು ತಡೆಯಲು ಬಂದ ಆಕೆಯ ಪುತ್ರ ಮಹಮ್ಮದ್ ಅಲಿಯ ಎಡಹಣೆಗೆ ಕೊಲೆ ಮಾಡುವ ಉದ್ದೇಶದಿಂದ ದೊಣ್ಣೆಯಿಂದ ಹೊಡೆದು ತೀವ್ರ ಸ್ವರೂಪದ ಗಾಯ ಮಾಡಿ, ಎದೆಗೆ ಕಾಲಿನಿಂದ ಒದ್ದು ಹತ್ಯೆಗೆ ಯತ್ನಿಸಿದ್ದನು.
ಪ್ರಕರಣದ ತನಿಖೆ ಕೈಗೊಂಡ ಅಂದಿನ ತನಿಖಾಧಿಕಾರಿಗಳಾದ ಮುತ್ತುರಾಜು ಪಿಎಸ್ ಐ ಮತ್ತು ಎಫ್.ಕೆ.ನದಾಫ್ ಸಿಪಿಐ ರವರು ಭಾರತೀಯ ದಂಡ ಸಂಹಿತ ಕಲಂ: 302, 307 ಅಡಿಯಲ್ಲಿನ ಶಿಕ್ಷಾರ್ಹ ಅಪರಾಧಕ್ಕೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಅಭಿಯೋಜನೆಯ ಪರ ಸಾಕ್ಷಾಧಾರಗಳನ್ನು ಪರಿಶೀಲಿಸಿದ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿ ಚಾಂದ್ ಪಾಷರವರನ್ನು ಸಿದ್ದದೋಷಿ ಎಂದು ಪರಿಗಣಿಸಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಈ ಪ್ರಕರಣದ ವಿಚಾರಣೆ ನಡೆಸಿದ ಮಧುಗಿರಿಯ ಗೌ.4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು ರೂ. 1,00,000 ದಂಡ ಹಾಗೂ ಭಾ.ದಂ.ಸಂ ಕಲಂ:326 ಅಡಿಯಲ್ಲಿ 3 ವರ್ಷ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿ ಆದೇಶಿಸಿದರು.
ದಂಡದ ಹಣದಲ್ಲಿ ಗಾಯಾಳು ಜಾಸಾ–2 ಮಹಮ್ಮದ್ ಅಲಿಗೆ ರೂ. 1,00,000 ಗಳನ್ನು ಪರಿಹಾರವಾಗಿ ನೀಡಲು ಆದೇಶಿಸಿದೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎಂ. ನಿರಂಜನಮೂರ್ತಿ ಇವರು ವಾದ ಮಂಡಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA