ವಿಶೇಷ ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ಕೊರಟಗೆರೆ: ಸಾರ್ವಜನಿಕ ದೊಡ್ಡ ಆಸ್ಪತ್ರೆಯ ಕನಸು, ಹೈಟೇಕ್ ಸರಕಾರಿ ಬಸ್ ಡಿಪೋ, ಗ್ರಾಮೀಣ ಭಾಗಕ್ಕೆ ಸಾರಿಗೆ ಸಂಪರ್ಕ.. ನಿರುದ್ಯೋಗ ನಿವಾರಣೆಗೆ ಫ್ಯಾಕ್ಟರಿಗಳ ನಿರ್ಮಾಣ.. ಬೈರಗೊಂಡ್ಲು ಬಫರ್ ಡ್ಯಾಂ ನಿರ್ಮಾಣದ ನೀರಾವರಿ ಯೋಜನೆ.. ಪ್ರವಾಸಿ ತಾಣಗಳ ಅಭಿವೃದ್ದಿಗೆ ಆಧ್ಯತೆ.. ಹೈಟೇಕ್ ಗ್ರಂಥಾಲಯ ಸ್ಥಾಪನೆಯ ಕನಸು ಇನ್ನೂ ಕೊರಟಗೆರೆ ಕ್ಷೇತ್ರದಲ್ಲಿ ನನಸಾಗಿಯೇ ಉಳಿದಿದೆ..
ಸುವರ್ಣಮುಖಿ, ಜಯಮಂಗಳಿ ಮತ್ತು ಗರುಡಾಚಲ ಎಂಬ 3ನದಿಗಳು ಹಾದುಹೋಗಲಿದೆ. ಸಸ್ಯಸಂಜೀವಿನಿ ಕ್ಷೇತ್ರ ಸಿದ್ದರಬೆಟ್ಟ, ಏಳುಸುತ್ತಿನ ಕೋಟೆ ಚನ್ನರಾಯನ ದುರ್ಗ ಮತ್ತು ಗೊರವನಹಳ್ಳಿ ಮಹಾಲಕ್ಷ್ಮೀ ಸನ್ನಿಧಾನ ಇರುವಂತಹ ವಿಶೇಷವಾದ ಪ್ರಕೃತಿ ಮತ್ತು ಪ್ರವಾಸಿ ತಾಣ ನಮ್ಮ ಕೊರಟಗೆರೆ ಕ್ಷೇತ್ರ. ರಾಜಕೀಯ ಕೈಮೇಲಾಟಕ್ಕೆ ಸಿಮೀತವಾದ ಕೊರಟಗೆರೆ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ವಿಫಲತೆಯಾಗಿ ಯುವಕರು ಉದ್ಯೋಗಕ್ಕಾಗಿ ಹೊರರಾಜ್ಯಕ್ಕೆ ತೆರಳುವ ದುಸ್ಥಿತಿ ಬಂದಿದೆ.
ಉದ್ಯೋಗ ಇಲ್ಲದೇ ಹೊರರಾಜ್ಯಕ್ಕೆ ವಲಸೆ:
ಬಜ್ಜನಹಳ್ಳಿ ಸಮೀಪದ ಕಣ್ವಾ ಗಾರ್ಮೆಂಟ್ಸ್ ಗೆ 2020ರಲ್ಲಿ ಬೀಗಬಿದ್ದ ಪರಿಣಾಮ 4 ಸಾವಿರ ಉದ್ಯೋಗಕ್ಕೆ ಕತ್ತರಿಬಿದ್ದಿದೆ. ಕೊರಟಗೆರೆ ಕ್ಷೇತ್ರದಿಂದ 12 ಸಾವಿರಕ್ಕೂ ಅಧಿಕ ಯುವಜನತೆ ಉದ್ಯೋಗ ಅರಸಿ ಬೆಂಗಳೂರು ಮತ್ತು ಮುಂಬಯಿಗೆ ವಲಸೆ ತೆರಳಿದ್ದಾರೆ. ಚುನಾವಣೆ ಬಂದಾಗ ಮಾತ್ರ ನೇನಪಾಗುವ ಯುವಜನತೆಗೆ ಉದ್ಯೋಗ ಕಲ್ಪಿಸುವ ಭರವಸೆಯು ಚುನಾಯಿತ ಆದ ನಂತರವು ನಾಯಕರಿಗೆ ನೆನಪಾದರೇ ಕೊರಟಗೆರೆ ಕ್ಷೇತ್ರದಲ್ಲಿ ಫ್ಯಾಕ್ಟರಿಗಳು ತಾನಾಗಿಯೇ ತಲೆಎತ್ತಲಿವೆ.
ಬೈರಗೊಂಡ್ಲು ಬಫರ್ ಡ್ಯಾಂ ಕನಸು:
ಬಯಲುಸೀಮೆ ಪ್ರದೇಶವಾದ ಕೊರಟಗೆರೆ ಕ್ಷೇತ್ರದ ರೈತರ ನೀರಾವರಿ ಕನಸಿನ ಕೂಸಾದ ಎತ್ತಿನಹೊಳೆ ಯೋಜನೆಯ ಬೈರಗೊಂಡ್ಲು ಬಫರ್ ಡ್ಯಾಂ ನಿರ್ಮಾಣಕ್ಕೆ ಗ್ರಹಣವೇ ಹಿಡಿದಿದೆ. ಬಫರ್ ಡ್ಯಾಂ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರ ಆಗಲಿದೆ ಎಂಬ ಮಾತುಗಳು ಕೇಳಿಬಂದಿವೆ. ಎತ್ತಿನಹೊಳೆ ಕಾಮಗಾರಿ ಪ್ರಾರಂಭವಾಗಿ 10 ವರ್ಷ ಕಳೆದ್ರು ಕೊರಟಗೆರೆ ರೈತರ ಜಮೀನು ಇನ್ನೂ ಭೂಸ್ವಾಧೀನ ಆಗಿಲ್ಲ. ಕೊರಟಗೆರೆ ಕ್ಷೇತ್ರದ ಕೆರೆಗಳಿಗೆ ಹರಿಯುವ ನೀರಿನ ಸಂಪರ್ಕದ ಕಾಮಗಾರಿಯೇ ಇನ್ನೂ ಗೌಪ್ಯವಾಗಿವೆ.
ಬಸ್ ಡಿಪೋ ಇಲ್ಲದೇ ಸಂಚಾರವೇ ನರಕ:
40 ವರ್ಷದಿಂದ ಹೈಟೇಕ್ ಸರಕಾರಿ ಬಸ್ ನಿಲ್ದಾಣ ಮತ್ತು ಡಿಪೋ ಕನಸು ಇನ್ನೂ ನನಸಾಗಿಲ್ಲ. ಪ್ರತಿನಿತ್ಯ ನೂರಾರು ಜನ ಉದ್ಯೋಗ ಅರಸಿ ಬೆಂಗಳೂರು ಮತ್ತು ತುಮಕೂರು ನಗರಕ್ಕೆ ಸಂಚರಿಸಲು ಸಮರ್ಪಕ ಸರಕಾರಿ ಬಸ್ ವ್ಯವಸ್ಥೆಯೇ ಇಲ್ಲ. ಕೊರಟಗೆರೆ ಕ್ಷೇತ್ರದ ಯಾವುದೇ ಹಳ್ಳಿಗಳಿಗೆ ಸಾರಿಗೆ ಸೇವೆಯು ಲಭ್ಯವಿಲ್ಲದೇ ಪ್ರತಿನಿತ್ಯ ರೈತಾಪಿವರ್ಗ ಮತ್ತು ವಿದ್ಯಾರ್ಥಿಗಳಿಗೆ ಆಟೋ ಅಥವಾ ದ್ವೀಚಕ್ರ ವಾಹನವನ್ನೇ ಅವಲಂಬನೆ ಮಾಡಬೇಕಾದ ಅನಿವಾರ್ಯತೆ ಇದೆ.
ಶಾಲೆಗಳ ಅಭಿವೃದ್ದಿಗೆ ಅನುದಾನ ಅಗತ್ಯ:
115 ಸರಕಾರಿ–ಕಾಲೇಜು ಕಟ್ಟಡಗಳು ಶಿಥಿಲ ಮತ್ತು 105 ಅಂಗನವಾಡಿ ಕೇಂದ್ರಗಳಿಗೆ ಜಾಗ ಮತ್ತು ಕಟ್ಟಡಗಳ ಅವಶ್ಯಕತೆ ಇದೆ. ಬಡ ಕುಟುಂಬಗಳ ಮಕ್ಕಳು ವ್ಯಾಸಂಗ ಮಾಡುವ ಸರಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳ ಅಭಿವೃದ್ದಿ ಕಳೆದ 40 ವರ್ಷದಿಂದ ಇಲ್ಲದಾಗಿದೆ. ಸಾವಿರಾರು ಮಕ್ಕಳಿಗೆ ಕುಳಿತುಕೊಳ್ಳಲು ಜಾಗವಿಲ್ಲದೇ ಮರದ ನೆರಳು ಮತ್ತು ಶಾಲೆಯ ಆವರಣದಲ್ಲಿ ವ್ಯಾಸಂಗ ಮಾಡ್ತಿದ್ದಾರೆ. ಸರಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳ ಅಭಿವೃದ್ದಿಗೆ ವಿಶೇಷ ಅನುದಾನದ ಅವಶ್ಯಕತೆ ಇದೆ.
ರೈತರಿಗೆ ನೀರಾವರಿ ಯೋಜನೆ, ಗ್ರಾಮೀಣಕ್ಕೆ ಶಿಕ್ಷಣದ ಶಕ್ತಿ, ಯುವಕರಿಗೆ ಉದ್ಯೋಗ ಸೃಷ್ಟಿ, ಹಳ್ಳಿಗಳಿಗೆ ಸಾರಿಗೆ ಸಂಪರ್ಕ, ಹೈಟೇಕ್ ಆಸ್ಪತ್ರೆಯ ಕನಸು ನನಸಾದರೇ ನಿಜವಾಗ್ಲೂ ಕೊರಟಗೆರೆ ಕ್ಷೇತ್ರವು ಗಣನೀಯವಾಗಿ ಅಭಿವೃದ್ದಿಯ ಪಥದತ್ತಾ ಸಾಗಲಿದೆ. 2023ಕ್ಕೆ ರಚನೆಯಾಗುವ ರಾಜ್ಯ ಸರಕಾರ ಮತ್ತು ಕೊರಟಗೆರೆ ಕ್ಷೇತ್ರದಿಂದ ಗೆಲ್ಲುವ ಜನನಾಯಕ ಜನರ ಬೇಡಿಕೆಯನ್ನೇ ಈಡೇರಿಸುವ ಪ್ರಯತ್ನ ಮಾಡಲೇಬೇಕಿದೆ.
ಕೊರಟಗೆರೆ ಕ್ಷೇತ್ರದ ಜನರ ಬೇಡಿಕೆ:
*ಎತ್ತಿನಹೊಳೆಯ ಬೈರಗೊಂಡ್ಲು ಬಫರ್ ಡ್ಯಾಂ ನಿರ್ಮಾಣದ ಕನಸು
*ಜಯಮಂಗಲಿ ಮತ್ತು ಗರುಡಾಚಲ ನದಿಗಳಿಗೆ ಚೇಕ್ ಡ್ಯಾಂ ನಿರ್ಮಾಣ
*ಸಾವಿರಾರು ಜನ ರೈತರಿಗೆ ಸಾಗುವಳಿ ಚೀಟಿಯ ವಿತರಣೆಗೆ ಆಗ್ರಹ
*ಸಿದ್ದರಬೆಟ್ಟ–ಗೊರವನಹಳ್ಳಿ ಪ್ರವಾಸಿ ತಾಣಗಳ ಅಭಿವೃದ್ದಿಯ ಬೇಡಿಕೆ
*ಕೊರಟಗೆರೆ ಪಟ್ಟಣದಲ್ಲಿ 100ಹಾಸಿಗೆಯ ಹೈಟೇಕ್ ಆಸ್ಪತ್ರೆಯ ಕನಸು
*ಪ್ಯಾಕ್ಟರಿಗಳನ್ನು ನಿರ್ಮಿಸಿ ಉದ್ಯೋಗ ಸೃಷ್ಟಿಸಲು ಯುವಕರ ಒತ್ತಾಯ
*ಕೊರಟಗೆರೆ ಪಟ್ಟಣದಲ್ಲಿ ಹೈಟೇಕ್ ಸರಕಾರಿ ಬಸ್ ಡಿಪೋ ನಿರ್ಮಾಣ
*ಸುಗಮ ಸಂಚಾರಕ್ಕಾಗಿ ಗ್ರಾಮೀಣ ಭಾಗಕ್ಕೆ ಸರಕಾರಿ ಬಸ್ಸುಗಳ ಸಂಚಾರ
*125ಸರಕಾರಿ ಶಾಲೆ ಮತ್ತು 105ಅಂಗಡಿವಾಡಿ ಕೇಂದ್ರಗಳಿಗೆ ಕಟ್ಟಡದ ಬೇಡಿಕೆ
* 154ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಅಗತ್ಯ ಕ್ರಮ
* ಕೊರಟಗೆರೆ ಪಟ್ಟಣ ಮತ್ತು ಗ್ರಾಪಂಗೊಂದು ಡಿಜಿಟಲ್ ಗ್ರಂಥಾಲಯ
* ಕೊರಟಗೆರೆ ವಿಧಾನಸಭಾ ಕ್ಷೇತ್ರದ ಟೋಲ್ ದಿಗ್ಬಂಧನ ತೆರವು ಅಗತ್ಯ
* ತುಮಕೂರು-ರಾಯದುರ್ಗ ರೈಲ್ವೆ ಕಾಮಗಾರಿಯ ಪೂರ್ಣಕ್ಕೆ ಆಗ್ರಹ
ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಆಗಮಿಸುವ ಸಾವಿರಾರು ವಿದ್ಯಾರ್ಥಿಗಳಿಗೆ ಬಸ್ಸಿನ ಸೌಲಭ್ಯವಿಲ್ಲ. ರಾಜಕೀಯ ನಾಯಕರು 5ವರ್ಷಕ್ಕೊಮ್ಮೆ ಮಾತ್ರ ಬರ್ತಾರೇ ಬಸ್ ಬರುತ್ತೇ ಅಂತಾರೇ. ತುಮಕೂರು ಮತ್ತು ಕೊರಟಗೆರೆಗೆ ಪ್ರತಿನಿತ್ಯ ಪ್ರಯಾಣಿಸಲು ಆಗದೇ ಸಾಕಷ್ಟು ಜನರ ಶಿಕ್ಷಣವೇ ಮೊಟಕುಗೊಂಡಿದೆ. ಸರಕಾರ ಕೇವಲ ಪಟ್ಟಣಕ್ಕೆ ಸೀಮಿತವಾಗದೇ ಗ್ರಾಮೀಣ ಭಾಗದ ಜನರ ನೋವು ಆಲಿಸಬೇಕಿದೆ.
— ವೈಷ್ಣವಿ.ಬಿ.ಆರ್. ವಿದ್ಯಾರ್ಥಿ. ಪುರವಾರ
ಉದ್ಯೋಗ ಸೃಷ್ಟಿಯು ಕೇವಲ ರಾಜಕೀಯ ಪಕ್ಷಗಳ ಚುನಾವಣೆ ಪ್ರಚಾರಕ್ಕೆ ಮಾತ್ರ ಸೀಮಿತ ಅಷ್ಟೆ. ಕೊರಟಗೆರೆ ಕ್ಷೇತ್ರದಲ್ಲಿ 20ಸಾವಿರಕ್ಕೂ ಅಧಿಕ ಉದ್ಯೋಗವಿಲ್ಲದ ಯುವಕರಿದ್ದಾರೆ. ಯುವಕರನ್ನ ರಾಜಕೀಯ ಪಕ್ಷಗಳ ಚುನಾವಣೆಗೆ ಮಾತ್ರ ಬಳಕೆ ಮಾಡ್ತಾರೇ. ಬಜ್ಜನಹಳ್ಳಿ ಬಳಿ ಸ್ಥಾಪನೆಯಾಗಿದ್ದ ಗಾರ್ಮೆಂಟ್ಸ್ ಸಹ ಮುಚ್ಚಿರುವ ಪರಿಣಾಮ 4ಸಾವಿರ ಉದ್ಯೋಗ ಇಲ್ಲದಾಗಿದೆ. ಪ್ರತಿನಿತ್ಯ ಬೆಂಗಳೂರು ಮತ್ತು ತುಮಕೂರಿಗೆ ಉದ್ಯೋಗ ಅರಸಿ ಪ್ರಯಾಣಿಸಲು ಸಮರ್ಪಕ ಸಾರಿಗೆ ವ್ಯವಸ್ಥೆಯು ಇಲ್ಲದಾಗಿದೆ.
— ಮಂಜುನಾಥ. ಸ್ಥಳೀಯ ಯುವಕ. ಕಾಶಪುರ
ಬೈರಗೊಂಡ್ಲು ಬಫರ್ಡ್ಯಾಂ ನಿರ್ಮಾಣದ ಕನಸು ಕನಸಾಗಿಯೇ ಉಳಿದಿದೆ. ಅಂತರ್ಜಲ ಅಭಿವೃದ್ದಿಗೆ 3ನದಿಗಳಿಗೆ ಅಡ್ಡಲಾಗಿ ಇನ್ನಷ್ಟು ಚೇಕ್ಡ್ಯಾಂ ನಿರ್ಮಿಸಬೇಕಿದೆ. 175ಕ್ಕೂ ಅಧಿಕ ಕೆರೆಗಳ ಪುನಶ್ಚೇತನ ಮತ್ತು ಅಭಿವೃದ್ದಿ ಆಗಬೇಕಿದೆ. ಕೃಷಿ ಮಾರುಕಟ್ಟೆ ಮತ್ತು ರಾಗಿಖರೀದಿ ಕೇಂದ್ರದ ಅವಶ್ಯಕತೆ ಇದೆ. ರೈತರು ಬೆಳೆಯುವ ಬೆಳೆಗಳಿಗೆ ಬೆಂಬಲ ಬೆಲೆಯ ಭರವಸೆ ನೀಡದೇ ಸರಕಾರ ಕಾರ್ಯರೂಪಕ್ಕೆ ತರಬೇಕಿದೆ.
— ಸಿದ್ದರಾಜು. ಅಧ್ಯಕ್ಷ. ರೈತಸಂಘ. ಕೊರಟಗೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy