ಜಲಮಂಡಳಿ ಹಾಗೂ ಬಿಬಿಎಂಪಿ ಸೇರಿದಂತೆ ವಿವಿಧ ಸರಕಾರಿ ಇಲಾಖೆಗಳಿಂದ ಬಾಕಿ ಇರುವ ಸುಮಾರು 236 ಕೋಟಿ ರೂ. ಪಾವತಿಸುವಂತೆ ಬೆಸ್ಕಾಂ ನೋಟಿಸ್ ಜಾರಿ ಮಾಡಿದ್ದು, ಬಿಲ್ ಪಾವತಿಸದೇ ಇದ್ದರೆ ವಿದ್ಯುತ್ ಪೂರೈಕೆ ಕಡಿತ ಮಾಡುವುದಾಗಿ ಎಚ್ಚರಿಸಿದೆ.
ಬೆಸ್ಕಾಂನ ಇಂದಿರಾನಗರ, ಕೋರಮಂಗಲ, ಶಿವಾಜಿನಗರ, ಮಲ್ಲೇಶ್ವರಂ ಮತ್ತು ವೈಟ್ ಫೀಲ್ಡ್ ವಿಭಾಗಗಳಿಗೆ (ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿ) ಬಿಡ್ಲ್ಯೂಎಸ್ಎಸ್ಬಿ ಮತ್ತು ಬಿಬಿಎಂಪಿ ನೀರು ಸರಬರಾಜು ವಿಭಾಗ ಸೇರಿ ಮತ್ತಿತರ ಸರ್ಕಾರಿ ಕಚೇರಿಗಳು 236 ಕೋಟಿ ರೂ.ಗಳಿಗೂ ಅಧಿಕ ವಿದ್ಯುತ್ ಶುಲ್ಕ ಬಾಕಿ ಇರಿಸಿಕೊಂಡಿದೆ.
ಬೆಸ್ಕಾಂನ 5 ವಿಭಾಗಗಳೂ ಬಿಡ್ಲ್ಯೂಎಸ್ಎಸ್ಬಿ ಮತ್ತು ಬಿಬಿಎಂಪಿಗೆ ಬಿಲ್ ಪಾವತಿಸಲು ಕೋರಿ ಪ್ರತ್ಯೇಕ ನೋಟಿಸ್ ಜಾರಿ ಮಾಡಿದ್ದು, ಬಿಲ್ ಪಾವತಿಗೆ ಗಡುವು ನೀಡಿದೆ.
ಬೆಸ್ಕಾಂನ ಶಿವಾಜಿನಗರ ವಿಭಾಗಗಳ ವ್ಯಾಪ್ತಿಗೆ ಬರುವ ಪಿಳ್ಳಣ್ಣ ಗಾರ್ಡ್ನ್, ಬಂಬೂ ಬಜಾರ್, ಕಾಕ್ಸ್ ಟೌನ್, ಬಾಣಸವಾಡಿ ಮತ್ತು ನಾಗವಾರ ಉಪ ವಿಭಾಗಗಳಿಗೆ ಬಿಡ್ಲ್ಯೂಎಸ್ಎಸ್ಬಿ ಮತ್ತು ಬಿಬಿಎಂಪಿ ನೀರು ಸರಬರಾಜು ವಿಭಾಗ ಕ್ರಮವಾಗಿ 27.54 ಕೋಟಿ ರೂ. ಮತ್ತು 90.20 ಕೋಟಿ ರೂ. ಬಾಕಿ ಇರಿಸಿಕೊಂಡಿದ್ದು, ಬಾಕಿ ಪಾವತಿಸಲು ಸೂಚಿಸಿ ಶಿವಾಜಿನಗರ ಕಾರ್ಯನಿರ್ವಾಹಕ ಇಂಜಿನಿಯರ್ ಎರಡೂ ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ಬೆಸ್ಕಾಂನ ಕೋರಮಂಗಲ ವಿಭಾಗದ ಆಸ್ಟಿನ್ ಟೌನ್, ಕೋರಮಂಗಲ, ಮುರುಗೇಶ್ ಪಾಳ್ಯ, ಮಡಿವಾಳ, ಹೆಚ್.ಎ.ಎಲ್ ಉಪ ವಿಭಾಗಳ ವ್ಯಾಪ್ತಿಗೆ ಒಳಪಡುವ 10 ವಾರ್ಡ್ಗಳಿಂದ ಬಿಡ್ಲ್ಯೂಎಸ್ಎಸ್ಬಿ 23.71 ಕೋಟಿ ರೂ. ವಿದ್ಯುತ್ ಶುಲ್ಕ ಬಾಕಿ ಇರಿಸಿಕೊಂಡಿದ್ದು, 19 ವಾರ್ಡ್ಗಳಿಂದ ಬಿಬಿಎಂಪಿ ಸುಮಾರು 22.20 ಕೋಟಿ ರೂ. ವಿದ್ಯುತ್ ಶುಲ್ಕ ಪಾವತಿಸಬೇಕಾಗಿದೆ.
ಮಲ್ಲೇಶ್ವರಂ ವಿಭಾಗಗಳ ವ್ಯಾಪ್ತಿಗೆ ಒಳಪಡುವ ಉಪ ವಿಭಾಗಗಳಿಗೆ ಬಿಡ್ಲ್ಯೂಎಸ್ಎಸ್ಬಿ ಮತ್ತು ಬಿಬಿಎಂಪಿ ಕ್ರಮವಾಗಿ 13.60 ಕೋಟಿ ರೂ. ಮತ್ತು 16.70 ಕೋಟಿ ರೂ.ಗಳನ್ನು ಬೆಸ್ಕಾಂಗೆ ಪಾವತಿಸಬೇಕಾಗಿದೆ. ಮಲ್ಲೇಶ್ವರಂ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಎರಡೂ ಸಂಸ್ಥೆಗಳಿಗೆ ಬಿಲ್ ಪಾವತಿಸಲು ಕೋರಿ ನೋಟಿಸ್ ನೀಡಿದ್ದಾರೆ.
ಇಂದಿರಾನಗರ ವಿಭಾಗಕ್ಕೆ ಬಿಬಿಎಂಪಿ, ಬಿಡ್ಲ್ಯೂಎಸ್ಎಸ್ಬಿ, ಕಬ್ಬನ್ ಪಾರ್ಕ್, ವಸತಿ ಇಲಾಖೆ ಮ್ಯೂಸಿಯಂ, ತೋಟಗಾರಿಕೆ ಇಲಾಖೆ, ಪೋಸ್ಟ್ ಆಫೀಸ್, ನ್ಯಾಷನಲ್ ಎರೋನಾಟಿಕ್ಸ್ ಲಿಮಿಟೆಡ್, ಎಲ್ಐಸಿ, ಬಿಎಸ್ಎನ್ಎಲ್, ಬಿಡಿಎ, ಬಿಎಂಆರ್ಸಿಎಲ್, ಡಿಆರ್ಡಿಓ, ಹೈಕೋರ್ಟ್ ವಸತಿಗೃಹ, ಮುಂತಾದ ಸರ್ಕಾರಿ ಕಚೇರಿಗಳು ಒಟ್ಟು 36.25 ಕೋಟಿ ರೂ. ವಿದ್ಯುತ್ ಬಿಲ್ ಪಾವತಿಸಬೇಕಾಗಿದೆ ಎಂದು ಇಂದಿರಾನಗರ ಕಾರ್ಯನಿರ್ವಾಹಕ ಇಂಜಿನಿಯರ್ ನೀಡಿರುವ ನೋಟಿಸ್ನಲ್ಲಿ ವಿವರಿಸಲಾಗಿದೆ.
ವೈಟ್ ಫೀಲ್ಡ್ ವಿಭಾಗದ ವ್ಯಾಪ್ತಿಗೆ ಬರುವ ಒಟ್ಟು 7 ವಾರ್ಡ್ಗಳಿಂದ ಬೆಸ್ಕಾಂಗೆ ಬಿಡ್ಲ್ಯೂಎಸ್ಎಸ್ಬಿ ಮತ್ತು ಬಿಬಿಎಂಪಿಯಿಂದ ಒಟ್ಟು 5.81 ಕೋಟಿ ರೂ. ವಿದ್ಯುತ್ ಶುಲ್ಕ ಬಾಕಿ ಇದೆ. ವಿದ್ಯುತ್ ಬಿಲ್ ವಸೂಲಿಗೆ ಕ್ರಮ ಕೈಗೊಳ್ಳಲು ಬೆಸ್ಕಾಂ ಎಂಡಿ ಮಹಾಂತೇಶ್ ಬೀಳಗಿ ಇತ್ತೀಚೆಗೆ ನಡೆದ ಅಧಿಕಾರಿಗಳ ಸಭೆಯಲ್ಲಿ ಕಟ್ಟು ನಿಟ್ಟಿನ ಸೂಚನೆ ನೀಡಿದ್ದರು.\
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


