ತುಮಕೂರು: ಕುವೆಂಪು ಕುರಿತಂತೆ ಪಠ್ಯದಲ್ಲಿ ಹೆಚ್ಚಿನ ವಿಚಾರ ಸೇರಿಸಿದ್ದು ಬಿಜೆಪಿ. ಕುವೆಂಪು ಅವರ ಎರಡು ಕವನವನ್ನ ನಾಡಗೀತೆ ಮಾಡಿದ್ದು ಬಿಜೆಪಿ. ಹಾಗಾಗಿ ನಾವು ಕುವೆಂಪುಗೆ ಅಪಮಾನ ಮಾಡಲು ಸಾಧ್ಯನಾ..? ಎಂದು ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಪ್ರಶ್ನಿಸಿದ್ದಾರೆ.
ತುಮಕೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಸಣ್ಣಪುಟ್ಟ ಬದಲಾವಣೆ ಮಾಡಲು ಸರ್ಕಾರ ಒಪ್ಪಿಕೊಂಡಿದೆ. ಪಠ್ಯಪುಸ್ತಕ ವಾಪಸ್ ಪಡೆದುಕೊಳ್ಳುವಂತೆ ದೇವೇಗೌಡರ ಪತ್ರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ಮಾತನಾಡೋದಕ್ಕೆ ಸಿಎಂ ಹಾಗೂ ಶಿಕ್ಷಣ ಸಚಿವರು ತಯಾರಿದ್ದಾರೆ. ಆದರೆ ದೇವೇಗೌಡರೇ ಮಾತನಾಡೋಕೆ ಬಾರದೇ ಮಾರ್ಗದಲ್ಲಿ ಕುಳಿತುಕೊಳ್ತೇನೆ ಅಂದರೆ ಹೇಗೆ ಎಂದು ಪ್ರಶ್ನಿಸಿದರು.
ಎಲ್ಲವೂ ರಾಜಕೀಯ ಪ್ರೇರಿತವಾಗಿರಬಾರದು. ಈಗಾಗಲೇ ಕೆಲವು ಬದಲಾವಣೆಗಳನ್ನ ಮಾಡಲಾಗಿದೆ. ನಾವು ಯಾವುದರಲ್ಲೂ ರಾಜಕಾರಣ ತುರುಕಿ, ಬೆಳೆಯುವಂತಾ ಮಕ್ಕಳ ಮನಸ್ಸನ್ನ ಹಾಳು ಮಾಡಲ್ಲಾ. ದೇಶದ ಸಂಸ್ಕೃತಿ, ಸಂಸ್ಕಾರ ಉಳಿಯಬೇಕು. ಪರದೇಶದ ಶಿಕ್ಷಣ ಪದ್ದತಿಯಿಂದ ನಾವು ಹೊರಬರಲೇಬೇಕು. ಮೆಕಾಲೆ ಆಧಾರಿತ ಶಿಕ್ಷಣ ಪದ್ದತಿಯನ್ನ ಭಾರತೀಯ ಶಿಕ್ಷಣ ಪದ್ದತಿಯಾಗಿ ಬದಲಾಯಿಸಬೇಕು. ಹಾಗಂತ ನಾನು ಗುರುಕುಲ ಶಿಕ್ಷಣ ಪದ್ದತಿ ಬೇಕು ಅಂತಾ ಹೇಳುತ್ತಿಲ್ಲ. ಭಾರತೀಯ ಸಂಸ್ಕೃತಿಯ ಮೂಲ ಬೇರಿನೊಂದಿಗೆ ನಮ್ಮ ಶಿಕ್ಷಣ ಪದ್ದತಿ ಸಾಗಬೇಕು ಎಂದು ಅವರು ಹೇಳಿದರು.
ಅಗ್ನಿಪಥ್ ವಿರುದ್ದ ಕಾಂಗ್ರೆಸ್ ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಗೆ ಹೋರಾಟ ಮಾಡಲು ಬೇರೆ ವಿಚಾರವಿಲ್ಲ. ಹಾಗಾಗಿ ಹೋರಾಟ ಮಾಡ್ತಿದ್ದಾರೆ. ಅಗ್ನಿಪಥ್ ನಲ್ಲಿ ಭಾಗಿಯಾದ ಯುವಕರಿಗೆ ಮಹೇಂದ್ರ, ಅಧಾನಿ ಸೇರಿ ಖಾಸಗಿ ಕಂಪನಿಗಳು ಉದ್ಯೋಗ ಮೀಸಲಿಡ್ತೇವೆ. ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡ ತಕ್ಷಣ ಮಿಲಿಟರಿ ವ್ಯವಸ್ಥೆ ಬದಲಾಗಲ್ಲಾ. ಮೂಲ ವ್ಯವಸ್ಥೆ ಹಾಗೆಯೇ ಇರುತ್ತದೆ ಎಂದರು.
ಇಡಿ ವಿಚಾರಣೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಇಡಿಯವರು ರಾಜಕೀಯ ಪಕ್ಷಕ್ಕೆ ಸೇರಿದವರಲ್ಲಾ. ಕಾಂಗ್ರೆಸ್ ನವರಿಗೆ ಸಂವಿಧಾನಿಕ ಸಂಸ್ಥೆ ಮೇಲೆ ನಂಬಿಕೆ ಇಲ್ಲಾ. ಹಾಗಾಗಿ ಅವರು ಇಡಿ ಮೇಲೆ ಆರೋಪ ಮಾಡ್ತಿದ್ದಾರೆ. ಮೋದಿ ಅವರು ಗುಜರಾತ್ ಸಿಎಂ ಆಗಿದ್ದಾಗ ಎಸ್ ಐಟಿ ಮುಂದೆ ಹಾಜರಾಗಿದ್ದರು. ಸುಪ್ರೀಂ ಕೋರ್ಟ್ ನಿಂದ ಇಂದು ಆರೋಪಮುಕ್ತರಾಗಿದ್ದಾರೆ ಎಂದರು.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


