ತುಮಕೂರು: ಸಿದ್ದಗಂಗಾ ಮಠದಲ್ಲಿ ಪದ್ಮಭೂಷಣ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ 119ನೇ ಜಯಂತೋತ್ಸವ ಮತ್ತು ಗುರುವಂದನಾ ಕಾರ್ಯಕ್ರಮ ಇಂದು ನೆರವೇರಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ದ್ರೌಪದಿ ಮುರ್ಮು , ಕನ್ನಡದಲ್ಲೇ ಭಾಷಣ ಆರಂಭಿಸಿ “ಸಹೋದರ ಸಹೋದರಿಯರೇ, ತಮಗೆಲ್ಲರಿಗೂ ನನ್ನ ಸ್ವಪ್ರೇಮ ನಮಸ್ಕಾರಗಳು. ಓಂ ನಮಃ ಶಿವಾಯ! ಶ್ರೀ ಶಿವಕುಮಾರ್ ಸ್ವಾಮೀಜಿಯವರ ಜಯಂತಿಯಂದು ಇಲ್ಲಿರುವುದು ನನಗೆ ಬಹಳ ಸಂತೋಷ ತಂದಿದೆ. ಅವರು ನಮ್ಮ ಸಮಾಜ ಮತ್ತು ರಾಷ್ಟ್ರಕ್ಕೆ ಆತ್ಮದ ಸ್ವರೂಪವನ್ನು ನೀಡಿದವರು. ಸಿದ್ದಗಂಗಾ ಮಠದಲ್ಲಿ ಅನ್ನಗಂಗೆ, ಕರುಣಾಗಂಗೆ ಮತ್ತು ಶಿಕ್ಷಣಗಂಗೆ ನಿರಂತರವಾಗಿ ಹರಿಯುತ್ತಿದೆ. ವಂಚಿತರಿಗೆ ಶಿಕ್ಷಣ ನೀಡುವುದು ದೇಶದ ಭವಿಷ್ಯವನ್ನು ನಿರ್ಮಿಸುವುದಕ್ಕೆ ಸಮಾನ. ಬಸವಣ್ಣನವರ ‘ಕಾಯಕವೇ ಕೈಲಾಸ’ ತತ್ವ ಮತ್ತು ಭಗವದ್ಗೀತೆಯ ನಿಷ್ಕಾಮ ಕರ್ಮಯೋಗದಂತೆ ಸ್ವಾಮೀಜಿಯವರು ಬದುಕಿದ್ದಾರೆ. ಕರ್ನಾಟಕದ ಜನರು ರಾಷ್ಟ್ರ ನಿರ್ಮಾಣದಲ್ಲಿ ಯಾವಾಗಲೂ ಮುಂಚೂಣಿಯಲ್ಲಿದ್ದಾರೆ” ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಪರವಾಗಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, “ಗೌರವಾನ್ವಿತ ರಾಷ್ಟ್ರಪತಿಗಳೇ, ಈ ತುಮಕೂರು ಜಿಲ್ಲೆ ಸಂಸ್ಕೃತಿ ಮತ್ತು ಆಧ್ಯಾತ್ಮದ ಸಂಗಮವಾಗಿದೆ. ಸಿದ್ದಗಂಗಾ ಮಠವು ಪೂಜ್ಯ ಶಿವಕುಮಾರ ಸ್ವಾಮೀಜಿಯವರ ಆದರ್ಶಗಳಿಂದ ಪ್ರೇರಿತವಾಗಿದೆ. 1930ರಲ್ಲಿ ಮಠದ ಜವಾಬ್ದಾರಿ ವಹಿಸಿಕೊಂಡ ಅವರು, ಅಕ್ಷರ ಮತ್ತು ಅನ್ನದಾಸೋಹದ ಮೂಲಕ ಲಕ್ಷಾಂತರ ಮಕ್ಕಳ ಬದುಕನ್ನು ರೂಪಿಸಿದ್ದಾರೆ. ಇದು ಕೇವಲ ಧಾರ್ಮಿಕ ಸಂಸ್ಥೆಯಲ್ಲ, ಬದಲಾಗಿ ಮಾನವೀಯತೆಯ ಜೀವಂತ ಉದಾಹರಣೆಯಾಗಿದೆ. ಬಸವಣ್ಣನವರ 12ನೇ ಶತಮಾನದ ಸಮಾನತೆಯ ತತ್ವಗಳನ್ನು ಸ್ವಾಮೀಜಿಯವರು ಈ ಕಾಲದಲ್ಲಿ ಆಚರಣೆಗೆ ತಂದಿದ್ದಾರೆ” ಎಂದರು.
ರಾಜ್ಯಪಾಲರಾದ ಡಾ.ಥಾವರ್ ಚಂದ್ ಗೆಹಲೋಟ್ ಮಾತನಾಡಿ, “ಪರಮಪೂಜ್ಯ ತ್ರಿವಿಧ ದಾಸೋಹಿ ಶಿವಕುಮಾರ ಮಹಾಯೋಗಿಗಳ ಜನ್ಮೋತ್ಸವದಲ್ಲಿ ಭಾಗವಹಿಸಿರುವುದು ನನ್ನ ಸೌಭಾಗ್ಯ. ಅವರಿಗೆ ಸೇವೆಯು ಕೇವಲ ಕರ್ತವ್ಯವಲ್ಲ, ಅದೊಂದು ಸಾಧನೆಯಾಗಿತ್ತು. ‘ಸಬ್ಕಾ ಸಾತ್, ಸಬ್ಕಾ ವಿಕಾಸ್’ ಎಂಬ ತತ್ವದಂತೆ ಮಠವು ಸಮಾಜದ ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಗೆ ಶ್ರಮಿಸುತ್ತಿದೆ. ಪ್ರಸ್ತುತ ಸಿದ್ದಲಿಂಗ ಮಹಾಸ್ವಾಮಿಗಳು ಈ ಮಹಾನ್ ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ ಎಂದರು.



“ನಮ್ಮ ಪರಮಪೂಜ್ಯ ಗುರುದೇವರು 111 ವರ್ಷಗಳ ಕಾಲ ಬದುಕಿ, ಅದರಲ್ಲಿ 89 ವರ್ಷಗಳನ್ನು ಸಮಾಜ ಸೇವೆಗಾಗಿ ಒಂದೇ ಸ್ಥಾನದಲ್ಲಿ ನಿರಂತರವಾಗಿ ಮೀಸಲಿಟ್ಟಿದ್ದು ಒಂದು ಪವಾಡ. ಗ್ರಾಮಾಂತರ ಮಕ್ಕಳ ಶಿಕ್ಷಣ, ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅವರು ನೀಡಿದ ಒತ್ತು ಅಪಾರ. ಮಠಗಳು ‘ಭಾವಿಸದೆಯೇ ಕೊಡುವ ಕಲ್ಪವೃಕ್ಷಗಳಂತೆ’ ಸಮಾಜಕ್ಕೆ ಸೇವೆ ಸಲ್ಲಿಸುತ್ತಿವೆ. ರಾಷ್ಟ್ರಪತಿಗಳು ಒಬ್ಬ ಸಾಮಾನ್ಯ ಗ್ರಾಮೀಣ ಬುಡಕಟ್ಟು ಸಮುದಾಯದಿಂದ ಬಂದು ಇಷ್ಟು ಎತ್ತರಕ್ಕೆ ಬೆಳೆದಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ.”
-ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ
ಕೇಂದ್ರ ಸಚಿವ ವಿ. ಸೋಮಣ್ಣ ಮಾತನಾಡಿ, “ಸಿದ್ದಗಂಗಾ ಮಠದ ಪರಮಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳ ಪಾದಗಳಿಗೆ ಪ್ರಣಾಮಗಳು. ಈ ದೇಶದ ಅತ್ಯುನ್ನತ ಸಂವಿಧಾನಾತ್ಮಕ ಹುದ್ದೆಯನ್ನು ಅಲಂಕರಿಸಿದ ಘನವೆತ್ತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಇಂದು ನಮ್ಮೊಂದಿಗೆ ಇರುವುದು ಅತ್ಯಂತ ಸಂತೋಷದ ಸಂಗತಿ. ಅವರು ತಮ್ಮ ಸೇವಾ ಭಾವನೆ ಮತ್ತು ಮಾನವೀಯ ಮೌಲ್ಯಗಳ ಮೂಲಕ ದೇಶಕ್ಕೆ ವಿಶೇಷ ಸಂದೇಶ ನೀಡಿದ್ದಾರೆ. ನಡೆದಾಡುವ ದೇವರು ಪೂಜ್ಯ ಶಿವಕುಮಾರ ಸ್ವಾಮೀಜಿಯವರು ‘ಕಾಯಕವೇ ಕೈಲಾಸ’ ಎಂಬ ಬಸವಣ್ಣನವರ ತತ್ವವನ್ನು ಪಾಲಿಸಿ, ಜಾತ್ಯತೀತವಾಗಿ ತ್ರಿವಿಧ ದಾಸೋಹ ನಡೆಸಿದ್ದಾರೆ. ಅವರ ಭೌತಿಕ ಶರೀರ ಅಳಿದಿರಬಹುದು, ಆದರೆ ಅವರ ಸೇವಾ ಕಾರ್ಯಗಳು ಜನಮಾನಸದಲ್ಲಿ ಶಾಶ್ವತವಾಗಿವೆ” ಎಂದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, “ಸಿದ್ದಗಂಗಾ ಮಠವು ಆಧುನಿಕ ಸಂಸ್ಕಾರ ಕೇಂದ್ರವಾಗಿದೆ. ಇಲ್ಲಿನ ಅನ್ನದಾಸೋಹವು ಕೇವಲ ಹಸಿವು ನೀಗಿಸುವುದಲ್ಲ, ಅದು ಮಕ್ಕಳಿಗೆ ಸಂಸ್ಕಾರ ಮತ್ತು ಜ್ಞಾನ ನೀಡುವ ಪುಣ್ಯದ ಅನ್ನವಾಗಿದೆ. ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದಂತೆ, ‘ಉತ್ತರದಲ್ಲಿ ಗಂಗೆ ಇದ್ದರೆ, ದಕ್ಷಿಣದಲ್ಲಿ ಸಿದ್ದಗಂಗೆ ಇದೆ’. ಗಂಗೆ ಪಾಪಗಳನ್ನು ತೊಳೆದರೆ, ಸಿದ್ದಗಂಗೆ ಲಕ್ಷಾಂತರ ಬಡವರ ಬದುಕಿನ ಕತ್ತಲನ್ನು ದೂರ ಮಾಡುತ್ತದೆ. ಯಾರು ಹಸಿವಿನಿಂದ ಇರಬಾರದು ಮತ್ತು ಹಣವಿಲ್ಲದ ಕಾರಣಕ್ಕೆ ಜ್ಞಾನದಿಂದ ವಂಚಿತರಾಗಬಾರದು ಎಂಬುದು ಸ್ವಾಮೀಜಿಯವರ ಕಾಯಕ ಸಿದ್ಧಾಂತವಾಗಿತ್ತು” ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


