ಪಾರಂಪರಿಕ ನಗರಿ ಮೈಸೂರಲ್ಲಿ ಸೂಕ್ತ ನಿರ್ವಹಣೆ ಕೊರತೆ ಕಾರಣ ಪಾರಂಪರಿಕ ಕಟ್ಟಡಗಳು ಶಿಥಿಲಗೊಂಡು ನೆಲಕ್ಕುರುಳುತ್ತಿದೆ. ಈ ನಡುವೆ ಸೆಸ್ಕಾಂ ಇಲಾಖೆ ಸಿಬ್ಬಂದಿಗಳ ಬೇಜವಾಬ್ದಾರಿಗೆ ನೂರಾರು ಮರಗಳು ರೆಂಬೆ, ಕೊಂಬೆ ಕಳೆದುಕೊಂಡು ಬೋಳಾಗಿವೆ.
ಒಂದೆಡೆ ಪರಿಸರ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಸಸಿಗಳನ್ನು ಬೆಳೆಸಲು ಶ್ರಮಿಸುತ್ತಿದ್ದರೆ, ಮತ್ತೊಂಡೆದೆ ವಿದ್ಯುತ್ ಕಂಬದ ತಂತಿಗೆ ಮರದ ಎಲೆಗಳು ತಾಗುತ್ತವೆ ಎಂದು ಮರಗಳ ರೆಂಬೆ, ಕೊಂಬೆಯನ್ನೇ ಕಡಿದು ಹಾಕಿ ಚೆಸ್ಕಾಂ ಸಿಬ್ಬಂದಿ ಬೇಜಾವಬ್ದಾರಿ ಮೆರೆದಿದ್ದಾರೆ.
ಮೈಸೂರಿನ ಆರ್.ಟಿ. ನಗರ ಬಡಾವಣೆಯ ಟ್ರಾಕ್ವಿಲ್ ಲೇಔಟ್ ನಲ್ಲಿ ಕಳೆದ ಕೆಲ ವರ್ಷಗಳಿಂದ ಬೆಳೆಸಲಾಗಿದ್ದ ಮರದ ರೆಂಬೆ, ಕೊಂಬೆಗಳು ಇದೀಗ ಸೆಸ್ಕಾಂ ಸಿಬ್ಬಂದಿಯಿಂದ ನೆಲಕ್ಕುರುಳಿ ಬೋಳಾಗಿವೆ.ಪರಿಸರದ ಬಗ್ಗೆ ಕನಿಷ್ಠ ಜ್ಞಾನವಿಲ್ಲದ ಸೆಸ್ಕಾಂ ಸಿಬ್ಬಂದಿಗಳ ಈ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ರ್ಯಾಕ್ವಿಲ್ ಬಡಾವಣೆಯಲ್ಲಿ ಕಳೆದ ೮ ವರ್ಷಗಳ ಹಿಂದೆ ಸಸಿ ಹಾಕಿ ಅದಕ್ಕೆ ನೀರುಣಿಸಿ ಮರವನ್ನಾಗಿ ಬೆಳೆಸಲಾಗಿತ್ತು. ಆದರೆ ಸೆಸ್ಕಾಂ ಸಿಬ್ಬಂದಿ ಏಕಾಏಕಿ ಈಗ ಬಡಾವಣೆಯ ನೂರಾರು ಮರಗಳ ರೆಂಬೆ, ಕೊಂಬೆಗಳನ್ನೇ ಕಡೆದು ಹಾಕಿದ್ದಾರೆ. ಇದು ನಿಜಕ್ಕೂ ಅತ್ಯಂತ ಬೇಸರದ ಸಂಗತಿ. ಈ ಸಂಬಂಧ ಅರಣ್ಯ ಇಲಾಖೆಗೆ ಪತ್ರ ಬರೆದು ಸೆಸ್ಕಾಂ ಸಿಬ್ಬಂದಿಗಳ ಕರ್ತವ್ಯ ಲೋಪದ ಬಗ್ಗೆ ಗಮನ ಸೆಳೆಯುವುದಾಗಿ ಟ್ರ್ಯಾಕ್ವಿಲ್ ಬಡಾವಣೆಯ ರವೀಂದ್ರನಾಥ ರೆಡ್ಡಿ ಅವರು ತಿಳಿಸಿದರು.
ಪರಿಸರ, ಪ್ರಕೃತಿ ಬಗ್ಗೆ ಅರಿವಿಲ್ಲದ ಸಿಬ್ಬಂದಿಗಳ ನಿಯೋಜನೆಯೇ ಘಟನೆಗೆ ಕಾರಣ. ಆದ್ದರಿಂದ ಇಂಥ ಸಂದರ್ಭಗಳಲ್ಲಿ ಗಿಡಮರಗಳ ಮಹತ್ವದ ಬಗ್ಗೆ ಕೊಂಚ ಅರಿವಿರುವ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಬೇಕು. ತಪ್ಪಿದಲ್ಲಿ ‘ ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ’ ಎಂಬಂತಾಗುತ್ತದೆ ಎಂಬುದು ಹಿರಿಯ ವಕೀಲ, ಪರಿಸರ ಪ್ರೇಮಿ ಪಿ.ಜೆ.ರಾಘವೇಂದ್ರ ಅವರ ಅಭಿಮತ.
11 ಕೆವಿ ವಿದ್ಯುತ ಮಾರ್ಗ ಇದ್ದರೆ, ೨೦ ಅಡಿವರೆಗೂ ಯಾವುದೇ ಮರ ಇರದಂತೆ ನೋಡಿಕೊಳ್ಳಲಾಗುತ್ತದೆ. ಇಲ್ಲಿ ಏನಾಗಿದೆ ಎನ್ನುವುದನ್ನು ಪರಿಶೀಲಿಸುತ್ತೇನೆ.
-ಜಯವಿಭವಸ್ವಾಮಿ, ಎಂಡಿ ಸೆಸ್ಕ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


