ಕೊರಟಗೆರೆ: ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಬಾಳೆ ಹೊನ್ನೂರು ಖಾಸಾ ಶಾಖಾ ಮಠದ 19 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ತಾಲ್ಲೂಕು ಪಂಚಾಯಿತಿಯ ಗ್ರಂಥಾಲಯ ಮೇಲ್ವಿಚಾರಕರ ಸಂಘದ ಸಹಯೋಗದೊಂದಿಗೆ ಸಿದ್ದರಬೆಟ್ಟದ ಮಠದಲ್ಲಿ ಪುಸ್ತಕ ದಾಸೋಹ ಸಮಾರಂಭ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗುವುದರ ಮೂಲಕ ತಗ್ಗಿಹಳ್ಳಿ ರಾಮಕೃಷ್ಣಾಶ್ರಮದ ಶ್ರೀ ರಮಾನಂದ ಸ್ವಾಮೀಜಿಗಳು ಉದ್ಘಾಟಿಸಿದರು. ಕಾರ್ಯಕ್ರಮದ ಗಣ ಅಧ್ಯಕ್ಷತೆಯನ್ನು ಕರ್ನಾಟಕ ಸರ್ಕಾರದ ಗೃಹ ಸಚಿವರ ವಿಶೇಷ ಕರ್ತವ್ಯಧಿಕಾರಿಯಾದ ಡಾ ಕೆ ನಾಗಣ್ಣ ವಹಿಸಿಕೊಂಡಿದ್ದರು.
ಸಿದ್ದರಬೆಟ್ಟ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿಗಳು ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಶ್ರೀಮಠದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪುಸ್ತಕ ದಾಸೋಹ ಎಂಬ ವಿನೂತನ ಕಾರ್ಯಕ್ರಮವನ್ನು ಪ್ರತಿ ವರ್ಷವೂ ಆಯೋಜಿಸಲಾಗುತ್ತಿದೆ, ಇದರ ಮುಖ್ಯ ಉದ್ದೇಶ ಜ್ಞಾನವನ್ನು ನಿರಂತರವಾಗಿ ಪ್ರಸಾರ ಮಾಡುವುದು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂಬರುವ ದಿನಗಳಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆಸಲಾಗಿದೆ. ಪುಸ್ತಕ ಪ್ರೇಮಿಗಳು ಮತ್ತು ವಿದ್ಯಾರ್ಥಿಗಳು ಪುಸ್ತಕ ದಾಸೋಹದಲ್ಲಿ ಪಾಲ್ಗೊಂಡು ತಾವು ತಂದಂತಹ ಒಂದು ಪುಸ್ತಕ ನೀಡಿ ಪುಸ್ತಕ ದಾಸೋಹದಲ್ಲಿ ಸಂಗ್ರಹಿಸಿರುವ ಹತ್ತು ಸಾವಿರ ಪುಸ್ತಕಗಳಲ್ಲಿ ಎರಡು ಪುಸ್ತಕಗಳನ್ನು ಮಾತ್ರ ಕೊಂಡೊಯ್ಯಲು ಸೂಚಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಗೃಹ ಸಚಿವರ ಜಿಲ್ಲಾ ವಿಶೇಷ ಕರ್ತವ್ಯವಾಧಿಕಾರಿಯಾದ ಡಾ.ಕೆ.ನಾಗಣ್ಣ ಮಾತನಾಡಿ, ಪರಿವರ್ತನೆ ಜಗದ ನಿಯಮ ಎಂಬಂತೆ ಶ್ರೀಗಳು ಕೈಗೆತ್ತಿಕೊಂಡಿರುವ ಈ ವಿನೂತನ ಜ್ಞಾನದ ದಾಸೋಹವನ್ನು ಗ್ರಾಮೀಣ ಭಾಗದಲ್ಲಿ ಹಂಚಲು ಮುಂದಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ 10% ಸಾಕ್ಷರತೆ ಇತ್ತು. ಸ್ವಾತಂತ್ರ್ಯದ ನಂತರ ಸುಮಾರು 86% ಸಾಕ್ಷರತೆಗೆ ಬಂದು ನಾವೆಲ್ಲರೂ ನಿಂತಿದ್ದೇವೆ ಇದಕ್ಕೆಲ್ಲಾ ಕಾರಣ ದೇಶದಲ್ಲಿ ಮತ್ತು ನಮ್ಮ ರಾಜ್ಯದಲ್ಲಿ ಇರುವಂತ ಮಠ–ಮಾನ್ಯಗಳು ಶಾಲೆಗಳನ್ನು ತೆರೆದು ಜ್ಞಾನದ ಬೆಳಕು ಚೆಲ್ಲುತ್ತಿರುವ ಮಠಗಳಿಂದ ಮಾತ್ರ. ಶಿಕ್ಷಣದಿಂದ ಯಾರು ಕೂಡ ವಂಚಿತರಾಗಬಾರದು ಶಿಕ್ಷಣದಿಂದಲೇ ಜ್ಞಾನ ವೃದ್ಧಿಯಾಗುತ್ತದೆ ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಮಠ-ಮಾನ್ಯಗಳು ಶಿಕ್ಷಣಕ್ಕೆ ಹೆಚ್ಚು ಒತ್ತನ್ನು ನೀಡುತ್ತಿದೆ ಎಂದರು. ನಂತರ ಡಾ.ಕೆ.ನಾಗಣ್ಣಗೆ ಸನ್ಮಾನಿಸಿ ಆಶೀರ್ವಾದ ನೀಡಲಾಯಿತು.
ಈ ಸಂದರ್ಭದಲ್ಲಿ ಚಿಕ್ಕ ತೊಟ್ಲುಕೆರೆ ಅಟವಿ ಮಠದ ಶ್ರೀ ಅಟವಿ ಸಿದ್ದಲಿಂಗ ಸ್ವಾಮೀಜಿಗಳು, ತಮ್ಮಡಿಹಳ್ಳಿ ಮಠದ ಶ್ರೀ ಸಿದ್ದಲಿಂಗ ದೇಶಿ ಕೇಂದ್ರ ಸ್ವಾಮೀಜಿಗಳು, ಚಿ ಚಿಮ್ಮಲಗಿ ಮಠದ ಶ್ರೀ ಸಿದ್ದಾರೇಣುಕಾ ಶಿವಾಚಾರ್ಯ ಸ್ವಾಮೀಜಿಗಳು, ತೆವಡೆಹಳ್ಳಿ ಮಠದ ಶ್ರೀ ಗೋಕುಲ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಬೂದಗವಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಖಂಡರಾಧ್ಯ, ಬಿಪಿಎಸ್ ಕುಮಾರ್, ಹಿರಿಯ ಪತ್ರಕರ್ತರಾದ ಪದ್ಮರಾಜ್, ಕಾಂಗ್ರೆಸ್ ಮುಖಂಡರಾದ ಕೋಡಿತಿಮ್ಮನಹಳ್ಳಿ ಪುಟ್ಟರಾಜು, ಟಿ.ಆರ್.ಅರವಿಂದ್, ಗ್ರಂಥಾಲಯ ಮೇಲ್ವಿಚಾರಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ಶಿವಮೂರ್ತಿ, ದಯಾನಂದ್, ತಿಮ್ಮರಾಜಮ್ಮ ಬಿ.ಟಿ., ಅಶ್ವತಪ್ಪ, ಸಿದ್ದಗಂಗಯ್ಯ, ಭಾಗ್ಯಮ್ಮ, ಸುನಂದಾ ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW