ಚಿಕ್ಕನಾಯಕನಹಳ್ಳಿ: ಹೊಯ್ಸಳಕಟ್ಟೆ ಸಮೀಪ ಬೋರನಕಣಿವೆ ಶ್ರೀ ಸಾಯಿಧಾಮದ ಆವರಣದಲ್ಲಿ ಭಾನುವಾರ ಮಹಾ ಶಿವರಾತ್ರಿ ಅಂಗವಾಗಿ ನರ್ಮದೋದ್ಭವ ಕಣಿವೆ ಶಂಕರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಮುಂಜಾನೆ 4 ಗಂಟೆಯಿಂದ 5 ಗಂಟೆಯ ಬ್ರಾಹ್ಮಿ ಲಗ್ನದಲ್ಲಿ ಶ್ರೀ ನರ್ಮದೇಶ್ವರ ಲಿಂಗ ಪ್ರತಿಷ್ಠಾಪನೆ, ನೇತ್ರೋನ್ಮೀಲನ, ಪ್ರಾಣಪ್ರತಿಷ್ಠೆ, ನಿರೀಕ್ಷನ, ಕಲಾಕರ್ಷಣೆ ಸಹಿತ ಕಲಾವ್ಯಾಸ ಹೋಮ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಸೇವಾಕಾರ್ಯಗಳು ನಡೆದವು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದಂಪತಿ ಭೇಟಿ ನೀಡಿ, ಡಾ.ರಾಜ್ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ದಂಪತಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿದರು. ನಂತರ 108 ಪುಣ್ಯನದಿಗಳ ತೀರ್ಥಗಳಿಂದ ಕಣಿವೆ ಶಂಕರನಿಗೆ ಅಭಿಷೇಕ ಪೂಜೆ ನೆರವೇರಿಸಿದರು. ಸಿದ್ದಗಂಗಾ ಮಠದ ಕಿರಿಯ ಶ್ರೀಗಳು ಶ್ರೀ ಶಿವ ಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕಣಿವೆ ಶಂಕರನ ಪುಣ್ಯಾಭಿಷೇಕ ಮಂಗಳ ಕಾರ್ಯ ನಡೆಯಿತು.
ಮಹಾಶಿವರಾತ್ರಿ ಆಚರಣೆ ಹಾಗೂ ಕಣಿವೆ ಶಂಕರನ ಅಭಿಷೇಕ ಕಾರ್ಯಕ್ರಮಗಳಿಗೆ ಶಿರಾ ಕ್ಷೇತ್ರದ ಶಾಸಕ ಟಿ.ಬಿ.ಜಯಚಂದ್ರ ದಂಪತಿ ಚಾಲನೆ ನೀಡಿದರು. ಉಪಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ದಂಪತಿ ಶತನದೀಗಳ ಆವರಣ ಪೂಜೆ ನೆರವೇರಿಸಿದರು. ಮಾಜಿ ಶಾಸಕ ಕೆ.ಎಸ್. ಕಿರಣ್ ಕುಮಾರ್ ದಂಪತಿ ಅವರಿಂದ ಬಿಲ್ವಾಭಿಷೇಕ ಸೇವಾಕಾರ್ಯ ನಡೆಯಿತು.
ಜನಪದ ಕಲಾವಿದ ರಾಘವೇಂದ್ರ ದಬ್ಬಗುಂಟೆ ಮತ್ತು ತಂಡದಿಂದ ನಡೆದ ಗೊರವರ ಕುಣಿತ ಆಕರ್ಷಣೀಯವಾಗಿತ್ತು. ಸಾಯಿ ಮಂದಿರದ ವಿಠಲ್, ತುಕಾರಾಮ್ ವಿಠಲ್, ಹೊಯ್ಸಳಕಟ್ಟೆ ಗೋವಿಂದರಾಜು, ದಬ್ಬಗುಂಟೆ ರವಿಕುಮಾರ್, ಉಪನ್ಯಾಸಕ ದೇವೇಂದ್ರಪ್ಪ ಇತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


