ಪಾವಗಡ: ದಲಿತ ನೌಕರೆ ತಂದ ತಿಂಡಿ, ಚಾ ಕಾಫಿ ಇವರ ಗಂಟಲಲ್ಲಿ ಇಳಿಯಲ್ವಂತೆ? ನೀನು ಚಾ ತಿಂಡಿ ತಂದ್ರೆ, ನಾನು ತಿನ್ನಲ್ಲ ಎಂದು ಜಾತಿಯ ಹೆಸರೆತ್ತಿ ದಲಿತ ನೌಕರರೊಬ್ಬರನ್ನು ಗ್ರಾಮ ಪಂಚಾಯತ್ನ ಸದಸ್ಯೆ ನಿಂದಿಸಿರುವ ಘಟನೆ ತಾಲೂಕು ನಿಡಗಲ್ ಹೋಬಳಿ ಸಿ.ಕೆ.ಪುರ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ಹರಿಹರಪುರ ಸದಸ್ಯೆ ಅರುಂಧತಿ ನಾಗಲಿಂಗಪ್ಪ ಅವರ ವಿರುದ್ಧ ಈ ಗಂಭೀರ ಆರೋಪ ಕೇಳಿ ಬಂದಿದ್ದು, ಗ್ರಾಮ ಪಂಚಾಯತ್ ಸಭೆಗಳು ನಡೆದಾಗ ನೌಕರೆ ದಲಿತ ಹೆಣ್ಣು ಮಗಳಾದ ಧಾಮಸ ಅವರು, ಹೊಟೇಲ್ ನಿಂದ ತಿಂಡಿ ತಂದು ಕೊಟ್ಟಾಗ ನೀನು ತಂದ ಊಟ ತಿಂಡಿಯನ್ನು ನಾವು ತಿನ್ನುವುದಿಲ್ಲ, ಎಂದು ಜಾತಿಯ ಹೆಸರೆತ್ತಿ ಅವಮಾನಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದೇ ಅಲ್ಲದೇ ಅವರ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂಬ ಆಕ್ರೋಶ ಕೇಳಿ ಬಂದಿದೆ.
ಘಟನೆಯ ಹಿನ್ನೆಲೆ:
ತಾಲೂಕು ನಿಡಗಲ್ ಹೋಬಳಿ ಸಿ.ಕೆ.ಪುರ ಗ್ರಾಮ ಪಂಚಾಯಿತಿಯಲ್ಲಿ ಮಾರಣ್ಣ ಎಂಬುವವರು 15 ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ದೀಪಗಳನ್ನು ಅಳವಡಿಸಲು ನೇಮಕ ಮಾಡಿಕೊಂಡಿದ್ದರು. ಮಾರಣ್ಣ ಎಂಬವರು ಕಂಬ ಹತ್ತಿ ಲೈಟ್ ಹಾಕುವ ಈಸಂದರ್ಭದಲ್ಲಿ ವಿದ್ಯುತ್ ಶಾಕ್ ಹೊಡೆದು ದಾರುಣವಾಗಿ ಮೃತಪಟ್ಟಿದ್ದರು. ಹೀಗಾಗಿ ಅವರ ಬಡ ಕುಟುಂಬಕ್ಕೆ ಅನುಕಂಪದ ಆಧಾರದಲ್ಲಿ ಕೆಲಸ ನೀಡಲಾಯಿತು. ಮಾರಪ್ಪನವರ ಪತ್ನಿ ಜಯಮ್ಮನವರು ಮಾರಪ್ಪನವರ ಕೆಲಸವನ್ನು ನಿರ್ವಹಿಸಲು ಆರಂಭಿಸಿದ್ದರು. ಎರಡು ವರ್ಷಗಳ ಹಿಂದೆ ಜಯಮ್ಮನವರಿಗೆ ಅನಾರೋಗ್ಯವಾಗಿದ್ದರಿಂದಾಗಿ ಅವರ ಮಗಳಾದ ದಾಮಸ ಅವರು ಪಂಚಾಯತ್ ಅಧ್ಯಕ್ಷರು, ಗ್ರಾಮಸ್ಥರ ಒಪ್ಪಿಗೆಯಿಂದಲೇ ಜಯಮ್ಮನವರ ಕೆಲಸವನ್ನು ಮಾಡುತ್ತಿದ್ದಾರೆ.
ಗ್ರಾಮ ಪಂಚಾಯತ್ ಸಭೆ ನಡೆದಾಗ ದಾಮಸ ಅವರು ಸದಸ್ಯರಿಗೆ ಹೊಟೇಲ್ ನಿಂದ ತಿಂಡಿ ಮತ್ತು ಕಾಫಿ, ಊಟ ತರುತ್ತಿದ್ದರು. ಆದರೆ ಅರುಂಧತಿ ನಾಗಲಿಂಗಪ್ಪ ಅವರು ಧಾಮಸ ಅವರಿಗೆ ಜಾತಿ ನಿಂದನೆ ಮಾಡಿ, ಮನಸ್ಸಿಗೆ ಆಘಾತವನ್ನುಂಟು ಮಾಡಿದ್ದಾರೆ. ಜಾತಿಯ ಬೇಧವನ್ನು ತಲೆಯಲ್ಲಿ ತುಂಬಿಕೊಂಡವರು, ಅಸ್ಪೃಶ್ಯತೆಯನ್ನು ಪ್ರತಿಪಾದಿಸುವವರು ಸದಸ್ಯರಾಗಿದ್ದು, ಸಂವಿಧಾನದ ವಿರುದ್ಧ ಮನಸ್ಥಿತಿಯವರು ಸದಸ್ಯರಾಗಲು ಅನರ್ಹರು ಅವರ ಸದಸ್ಯತ್ವ ರದ್ದುಪಡಿಸಬೇಕು ಎಂಬ ಆಕ್ರೋಶ ಕೇಳಿ ಬಂದಿದೆ.
ಘಟನೆ ಸಂಬಂಧ ಡಿ. ಎಸ್. ಎಸ್. ಸಂಚಾಲಕರಾದ ಹನುಮಂತರಾಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದು, ಜಾತಿ ನಿಂದನೆ ಮಾಡಿದವರ ಮೇಲೆಕಾನೂನು ಕ್ರಮ ಕೈಗೊಳ್ಳಬೇಕು. ಅಂಥವರ ಸದಸ್ಯತ್ವವನ್ನು ರದ್ದು ಮಾಡಬೇಕು. ಸಂಬಂಧಪಟ್ಟ ಮೇಲಾಧಿಕಾರಿಗಳು ಇದನ್ನು ಸೂಕ್ಷ್ಮ ವಾಗಿ ಪರಿಶೀಲನೆ ಮಾಡಿ ಸೂಕ್ತ ಕಾನೂನು ರೀತಿಯ ಕ್ರಮ ಜರುಗಿಸಿ ನ್ಯಾಯ ದೊರಕಿಸಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ.
ವರದಿ: ರಾಮಪ್ಪ ಸಿ.ಕೆ.ಪುರ ಪಾವಗಡ ತಾಲೂಕು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy