ಧಾರವಾಡ: ಕೇಂದ್ರ ಪುರಸ್ಕೃತ ಜನಪರ ಕಲ್ಯಾಣ ಯೋಜನೆಗಳು ರೈತರಿಗೆ ಜನ ಸಾಮಾನ್ಯರಿಗೆ ಅಧಿಕಾರಿಗಳು ಸರಿಯಾದ ಸಮಯಕ್ಕೆ ತಲುಪಿಸಲಿ ಎಂದು ಕೇಂದ್ರ ಗ್ರಾಹಕರ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀಕರಿಸಬಹುದಾದ ಇಂಧನ ಸಚಿವರು ಹಾಗೂ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಚಿವರಾದ ಪ್ರಲ್ಹಾದ ಜೋಶಿ ತಿಳಿಸಿದರು.
ಧಾರವಾಡ ಜಿಲ್ಲಾ ಪಂಚಾಯತನಲ್ಲಿ ಇಂದು ಜರುಗಿದ ದಿಶಾ ಸಮಿತಿಯ ಮೊದಲನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಬೆಳೆ ಪರಿಹಾರ ನರೇಗಾ ವಸತಿ, ಸ್ವಚ್ಛ ಭಾರತ, ಶಿಕ್ಷಣ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ವಿವರವಾಗಿ ಚರ್ಚಿಸಿದರು. ಕೇಂದ್ರ ಪುರಸ್ಕೃತ ಯೋಜನೆಗಳು ಫಲಾನುಭವಿಗಳಿಗೆ ತಲುಪಿಸುವಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕೆಂದರು.
2023-24 ನೇ ಸಾಲಿನ ಹಿಂಗಾರು ಬೆಳೆ ಪರಿಹಾರ ದೊರೆಯದ ಕಾರಣ ಅನೇಕ ರೈತರು ಅಹವಾಲುಗಳನ್ನು ಸಲ್ಲಿಸುತ್ತಿದ್ದು ಈ ಬಗ್ಗೆ ತಹಶೀಲ್ದಾರರು, ಉಪವಿಭಾಗಾಧಿಕಾರಿಗಳು ರೈತರಿಗೆ ಸರಿಯಾಗಿ ಸ್ಪಂದಿಸುವಂತೆ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳಾದ ದಿವ್ಯ ಪ್ರಭು ಅವರು ಈ ಕುರಿತು ಮಾತನಾಡಿ 2023-24 ರಲ್ಲಿ ಬರಗಾಲ ಘೋಷಿಸಲಾಗಿದ್ದು ಜಿಲ್ಲೆಯಲ್ಲಿ 2.11 ಲಕ್ಷ ಹೆಕ್ಟರ್ ಹಾನಿ ಅಂದಾಜಿಸಲಾಗಿದೆ. ಅಧಿಕಾರಿಗಳು ವೈಯಕ್ತಿಕವಾಗಿಯೂ ಸಮೀಕ್ಷೆ ಮಾಡಿದ್ದಾರೆ. ಈ ವರ್ಷ ಕೇಂದ್ರಿಕೃತ ಫ್ರುಟ್ಸ್ ತಂತ್ರಾಂಶದಲ್ಲಿ ರೈತರು ಕಡ್ಡಾಯವಾಗಿ ಐಡಿ ಹೊಂದಿರಬೇಕೆಂದರು. ಒಟ್ಟು 2.45 ಲಕ್ಷ ರೈತರು ಫ್ರುಟ್ಸ್ ಹೊಂದಿದ್ದಾರೆ. ಈ ತಂತ್ರಾಂಶದಲ್ಲಿ ಬೆಳೆ ಸಮೀಕ್ಷೆ ವಿವರ, ಭೂಮಿ ವಿವರ ದಾಖಲಾಗುತ್ತದೆ. 1.27 ಲಕ್ಷ ಹೆಕ್ಟೇರ್ಗೆ 1.11 ಲಕ್ಷ ರೈತರಿಗೆ 117 ಕೋಟಿ ರೂ.ಗಳನ್ನು ಹಂತದ ಪರಿಹಾರ ನೀಡಲಾಗಿದ್ದು ಈಗ 12 ನೇ ಹಂತದ ಬರಬೇಕಿದೆ ಎಂದರು. ಕೃಷಿ ಇಲಾಖೆ ಜಂಟಿ ನಿರ್ದೇಶಕರು ಹಾಗೂ ಉಪವಿಭಾಗಾಧಿಕಾರಿಗಳು, ಕಾಲ ಕಾಲಕ್ಕೆ ಉಸ್ತುವಾರಿ ಮಾಡುತ್ತಿದ್ದಾರೆ ಬೆಳೆ ಪರಿಹಾರ ಗೊಂದಲ ಪರಿಹರಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದ್ದು ಈವೆರೆಗೆ 2 ಸಾವಿರಕ್ಕೂ ಹೆಚ್ಚು ಕರೆಗಳನ್ನು ಆಲಿಸಲಾಗಿದೆಯೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯು ಬಹು ಬೇಡಿಕೆಯಲ್ಲಿದ್ದು ಕ್ರಿಯಾ ಯೋಜನೆಗಳು ಪೂರ್ಣಗೊಳಿಸಿ ಮತ್ತೆ ಉದ್ಯೋಗದ ಹಾಗೂ ಕಾಮಗಾರಿ ಬೇಡಿಕೆ ಇದ್ದಲ್ಲಿ ಪೂರೈಸುವಂತೆ ಜಿಲ್ಲಾ ಪಂಚಾಯತ ಅಧಿಕಾರಿಗಳಿಗೆ ಸಚಿವರು ತಿಳಿಸಿದರು. ಉದ್ಯೋಗ ಖಾತರಿಗೆ ಅನುದಾನದ ಕೊರತೆಯಿಲ್ಲ. 60/40 ಕಾಮಗಾರಿ/ವಸ್ತು ಅನುಪಾತಕ್ಕನುಗುಣವಾಗಿ ಹೆಚ್ಚುವರಿ ಕ್ರಿಯಾಯೋಜನೆಗಳಿಗೆ ಮಂಜುರಾತಿ ನೀಡುವಂತೆ ಅವರು ತಿಳಿಸಿದರು. ಈವರೆಗೆ ಜಿಲ್ಲೆಯಲ್ಲಿ 1.70 ಲಕ್ಷ ಜಾಬ್ಕಾರ್ಡಗಳಿದ್ದು 3.76 ಲಕ್ಷ ಜನರಿಗೆ ಉದ್ಯೋಗ ನೀಡಲಾಗಿದೆ 25 ಲಕ್ಷ ಮಾನವ ದಿನಗಳ ಗುರಿ ಹಾಕಲಾಗಿದ್ದು ಈವರೆಗೆ 11.69 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆಯೆಂದರು ಉಪಕಾರ್ಯದರ್ಶಿ ಮೂಗನೂರಮಠ ತಿಳಿಸಿದರು.
ಪ್ರಧಾನಮಂತ್ರಿ ಆವಾಸ ಯೋಜನೆಯಡಿ ಜಿಲ್ಲೆಗೆ 6446 ಗುರಿ ಹೊಂದಲಾಗಿದೆ. ನರೇಗಾ ಅಡಿ ಹೆಚ್ಚು ಉದ್ಯೋಗಕ್ಕೆ ಹಾಜರಾದ ಫಲಾನುಭವಿಗಳಿಗೆ ತಂತ್ರಾಂಶದಲ್ಲಿ ಆದ್ಯತೆ ನೀಡಿದೆ ಎಂದು ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ ಸಭೆಗೆ ತಿಳಿಸಿದರು. ವಸತಿ ಯೋಜನೆಯಡಿ ಕೇಂದ್ರ ಸರಕಾರವು ಪ್ರತಿ ಮನೆಗೆ 1.30 ಲಕ್ಷ ರೂ ನೀಡುತ್ತಿದ್ದು ಅನುದಾನವನ್ನು ಹೆಚ್ಚಿಸುವಂತೆ ಶಾಸಕ ಎನ್.ಎಚ್.ಕೋನರೆಡ್ಡಿ ಸಚಿವರಲ್ಲಿ ಮನವಿ ಮಾಡಿದರು. ಕುಂದಗೋಳದ ಮುಳ್ಳೊಳ್ಳಿ ಗ್ರಾಮ ಸ್ಥಳಾಂತರ ಮೂಲಭೂತ ಸೌಕರ್ಯ ಹಕ್ಕು ಪತ್ರ ವಿತರಣೆ ಕುರಿತು ಗಮನ ಹರಿಸುವಂತೆ ಸಚಿವರು ತಹಶೀಲ್ದಾರರಿಗೆ ಸೂಚಿಸಿದರು.
ಸ್ವಚ್ಛ ಭಾರತ ಯೋಜನೆಯಡಿ ಅನುದಾನದ ಕೊರತೆ ಇಲ್ಲ. ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಅಧಿಕಾರಿಗಳು ಒತ್ತು ನೀಡಲಿ ಎಂದು ಸಚಿವರು ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ 3003 ವೈಯಕ್ತಿ ಶೌಚಾಲಯಗಳನ್ನು ಕಟ್ಟಲಾಗಿದೆ. ಬೂದು ನೀರು ಕಾರ್ಯಕ್ರಮದಡಿ 268 ಕಾಮಗಾರಿ ಪೂರ್ಣಗೊಳಿಸಿದೆ. 115 ಘನ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸ್ಥಾಪಿಸಲಾಗಿದೆಯೆಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಘನತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಕುರಿತು ಪತ್ರಿಕೆಯೊಂದರ ವರದಿಯನ್ನು ಅಧಿಕಾರಿಗಳ ಗಮನಕ್ಕೆ ಓದಿದ ಸಚಿವರು ಈ ಘಟಕಗಳನ್ನು ಸರಿಯಾಗಿ ನಿರ್ವಹಿಸುವಂತೆ ಸೂಚಿಸಿದರು.
ಕೇಂದ್ರವು ಮೂಲಭೂತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಶಾಲಾ ಕಟ್ಟಡ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡುತ್ತಿದೆ. ಕಂಪನಿ ಸಾಮಾಜಿಕ ಜವಾಬ್ದಾರಿ ಸಿಎಸ್ಆರ್ ಅನುದಾನದಡಿ ಜಿಲ್ಲೆಗೆ 2022-23 ಸಾಲಿನಲ್ಲಿ 515 ಕೊಠಡಿಗಳನ್ನು ಮಂಜೂರು ಮಾಡಿದ್ದು ಸಂಬಂಧಿಸಿದ ಏಜೆನ್ಸಿಗಳು ವೇಗವಾಗಿ ಪಾರದರ್ಶಕವಾಗಿ ಪೂರ್ಣಗೊಳಿಸುವಂತೆ ಸಚಿವರು ಸೂಚಿಸಿದರು. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ಶಾಲೆ ಸಮಗ್ರ ಅಭಿವೃದ್ಧಿ 5 ಕಟ್ಟಡಗಳನ್ನು ಮಂಜೂರು ಮಾಡಿದ್ದು, ಡಿಡಿಪಿಐ ಹಾಗೂ ಗ್ರಾಮೀಣ ಅಭಿವೃದ್ಧಿ ಇಂಜಿನೀಯರ್ ಶೀಘ್ರವೇ ಪೂರ್ಣಗೊಳಿಸಲು ಸೂಚಿಸಿದರು.
ಸಭೆಯಲ್ಲಿ ಶಾಸಕರಾದ ಎಂ.ಆರ್.ಪಾಟೀಲ, ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಮಹಾಪೌರರಾದ ರಾಮಪ್ಪ ಬಡಿಗೇರ, ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q