ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಚೇಳೂರು , ಗುಬ್ಬಿ ತಾಲೂಕು , ತುಮಕೂರಿನಲ್ಲಿ ಚಿತ್ರಕಲಾ ಶಿಕ್ಷಕರರಾದ ಆನಂದ್ ಎಸ್.ವಿ.ರವರು ಮುಖ್ಯ ಶಿಕ್ಷಕರಾದ ಗಿರೀಶ್ ಜಿ.ಎಚ್. ರವರ ಸಹಕಾರದಿಂದ ತಮ್ಮ ಶಾಲೆಯಲ್ಲಿ ಗ್ರಾಮೀಣ ಭಾಗದಿಂದ ಬರುವ ಮಕ್ಕಳಿಗಾಗಿ ಚಿತ್ರಕಲೆಯ ವಿಷಯಗಳ ಬಗ್ಗೆ ಮತ್ತು ಅದರ ಪ್ರಕಾರಗಳ ಬಗ್ಗೆ ಪರಿಚಯಿಸುವ ಉದ್ದೇಶದಿಂದ ಚಿತ್ರಕಲಾ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದರು.
ಇಲ್ಲಿ ಚಿತ್ರಕಲೆಯ ವಿಷಯಗಳು ಅವುಗಳ ಅವಶ್ಯಕತೆ ಮತ್ತು ಮಹತ್ವದ ಬಗ್ಗೆ ತಿಳಿಸಲಾಯಿತು. ಅಂಕ ಗಳಿಕೆಯ ಹುಚ್ಚು ಪೈಪೋಟಿಯ ನಡುವೆ ಮಕ್ಕಳ ಮನಸ್ಸನ್ನು ಮುದಗೊಳಿಸಿ, ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಹದಗೊಳಿಸುವ ಈ ಕಾರ್ಯಾಗಾರವು ಕ್ರಿಯಾಶೀಲವಾಗಿ ನಡೆದಿರುವುದು ಶಾಲೆಯ ಮಕ್ಕಳು , ಶಿಕ್ಷಕರು ಮತ್ತು ಪೋಷಕರಿಗೆ ಅರ್ಥಪೂರ್ಣವೆನಿಸಿದೆ.
ಇಂದು ರಂಗೋಲಿ ಕಲೆಯು ಭಾರತೀಯ ಚಿತ್ರಕಲೆಯ ಒಂದು ಪ್ರಕಾರವಾಗಿ ಗುರುತಿಸಲ್ಪಟ್ಟಿದೆ. ರಂಗೋಲಿಗೆ ಭಾರತೀಯ ಜನಪದದ ಪುರಾತನ ಮಹತ್ವವಿದೆ. ಶುಭದ ಸಂಕೇತವಾಗಿ ನೆಲದ ಮೇಲೆ ಬಿಡಿಸಲಾಗುವ ಈ ರಂಗೋಲಿಯನ್ನು ಬಾಗಿಲ ಅಂಚು ಮತ್ತು ಗೋಡೆಗಳ ಅಂಚುಗಳನ್ನು ಅಲಂಕರಿಸಲು ಬಳಸಲಾಗುತ್ತದೆ. ಬದಲಾದ ಸನ್ನಿವೇಶದಲ್ಲಿ ಅಳಿವಿನಂಚಿನಲ್ಲಿ ಇರುವ ಈ ರಂಗೋಲಿ ( ಕೋಲಂ ) ಕಲೆಯ ಬಗ್ಗೆ ಪೂರ್ಣ ಮಾಹಿತಿ ನೀಡುವುದರ ಜೊತೆಗೆ ಮಕ್ಕಳಿಗೆ ಮರದ ಹಲಗೆಯ ಬ್ಲಾಕ್ ಗಳ ಮೇಲೆ, ವಿವಿಧ ರೀತಿಯ ವಿನ್ಯಾಸಗಳ ಮೂಲಕ ಕ್ರಿಯಾಶೀಲವಾಗಿ ಚಿತ್ರರಚನೆ ಮಾಡಿಸಿದರು.
ಕೋಲಮ್ ಆರ್ಟ್ ಕಾರ್ಯಾಗಾರವು ಎರಡು ದಿನಗಳು ನಡೆದಿದ್ದು, ಸುಮಾರು 150 ಕ್ಕೂ ಹೆಚ್ಚು ಕಲಾ ಕೃತಿಗಳು ರಚನೆಯಾದವು. ನಂತರದ ಮೂರು ದಿನಗಳ ಕಾಲ ಗ್ಲಾಸ್ ಪೇಂಟಿಂಗ್ ವಿಷಯದ ಬಗ್ಗೆ ಮಾಹಿತಿಯನ್ನು ನೀಡಿ, ಅದರ ಮಾಧ್ಯಮ, ಶೈಲಿಯ ಬಗ್ಗೆ ತಿಳಿಸಿ ವರ್ಣಗಳ ಮೂಲಕ ಗ್ಲಾಸ್ ಗಳ ಮೇಲೆ ಚಿತ್ರ ರಚನೆ ಅಭ್ಯಾಸವನ್ನು ಮಕ್ಕಳಿಗೆ ಹೇಳಿಕೊಡಲಾಯಿತು . ಗ್ಲಾಸ್ ಗಳ ಮೇಲೆ ಮಕ್ಕಳು ವಿವಿಧ ರೀತಿಯ ನಿಸರ್ಗ ಚಿತ್ರ, ಪ್ರಾಣಿ– ಪಕ್ಷಿಗಳ ಚಿತ್ರ , ಅಲಂಕಾರಿಕ ಚಿತ್ರಗಳನ್ನು ಮತ್ತು ಇನ್ನು ಮುಂತಾದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ವಿಭಿನ್ನವಾಗಿ ವರ್ಣಗಳ ಮೂಲಕ ಚಿತ್ರರಚನೆಯನ್ನು ಮಕ್ಕಳು ತುಂಬಾ ಪರಿಣಾಮಕಾರಿಯಾಗಿ ಮಾಡಿದರು. ಈ ಶಿಬಿರದಲ್ಲಿ ಆರು ಶಾಲೆಗಳ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯದಲ್ಲಿ 60ಕ್ಕು ಹೆಚ್ಚು ಕಲಾಕೃತಿಗಳು ರಚನೆಗೊಂಡು ಎಲ್ಲರ ಗಮನ ಸೆಳೆದವು. ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕೋಲಂ ಆರ್ಟ್- ಹೇಮಾ ಪಿ. ಚಿತ್ರಕಲಾ ಶಿಕ್ಷಕರು, ಜಿ.ಹೆಚ್.ಎಸ್. , ಗೋಡೆಕೆರೆ, ಚೀನಾಹಳ್ಳಿ, ಗ್ಲಾಸ್ ಪೇಂಟಿಂಗ್–ರೇಖಾ, ಚಿತ್ರಕಲಾ ಶಿಕ್ಷಕರು, ಜಿ.ಹೆಚ್.ಎಸ್ ಸಾಕ್ಷಿಹಳ್ಳಿ, ಶಿರಾ ತಾಲೂಕು, ಈ ಕಾರ್ಯಾಗಾರವನ್ನ ಉತ್ತಮವಾಗಿ ನಿರ್ವಹಿಸಿದರು.
ಶಿಬಿರದಲ್ಲಿ ಜಗದೀಶ ಡಿ, ಕಲಾವಿದರು ಹಾಗೂ ಚಿತ್ರಕಲಾ ಶಿಕ್ಷಕರು, ಕಮಲ ಬಿ., ಜಿಜಿಜೆಸಿ ಗುಬ್ಬಿ, ಉಷಾರಾಣಿ, ಕೆಪಿಎಸ್ ಕಡಬ, ಚಂದ್ರಮೌಳೇಶ್ವರ ಜೆಜೆಸಿ ಗುಬ್ಬಿ, ಸವಿತಾ ಎಸ್. ಖಾಂದರೆ, ಜಿ ಬಿ ಹೆಚ್ ಎಸ್ ಚೇಳೂರು. ಈ ಎಲ್ಲಾ ಕಲಾವಿದರು ಮಕ್ಕಳಿಗೆ ಐದು ದಿನಗಳ ಕಾಲ ಕಲಾಕೃತಿ ರಚನೆಯಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಮಕ್ಕಳಿಂದ ಉತ್ತಮ ಕಲಾಕೃತಿಗಳನ್ನು ರಚನೆ ಮಾಡಿಸಿದರು. ಕೊನೆಯ ದಿನ ಚಿತ್ರಕಲಾ ಪ್ರದರ್ಶನವನ್ನು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಾಗಾರವು ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ, ಕಲಾಕೃತಿಗಳನ್ನು ರಚಿಸಿದ ಮಕ್ಕಳಿಗೆ ಶಾಲೆಯ ಮುಖ್ಯ ಶಿಕ್ಷಕರಾದ ಗಿರೀಶ್ ಜಿ.ಎಚ್.ರವರು ಅಭಿನಂದಿದರು. ಜೊತೆಗೆ ಮಕ್ಕಳ ಪ್ರತಿಭೆಯ ಬಗ್ಗೆ ವರ್ಣನೆ ಮಾಡಿದರು.
ಪ್ರದರ್ಶನವನ್ನು ವೀಕ್ಷಿಸಲು ತುಮಕೂರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಚಿತ್ರಕಲಾ ಉಪನ್ಯಾಸಕರಾದ ಶ್ರೀನಿವಾಸಮೂರ್ತಿ ಆಗಮಿಸಿ ಪ್ರದರ್ಶನ ವೀಕ್ಷಿಸಿ ಇಂತಹ ಶಿಬಿರಗಳು ಎಲ್ಲ ಶಾಲೆಗಳಲ್ಲಿಯೂ ನಡೆಯಬೇಕು. ಇವು ಶಾಲಾ ವಾತಾವರಣವನ್ನು ಜೀವಂತಿಕೆಯಲ್ಲಿಡುತ್ತವೆ. ಮಕ್ಕಳಿಂದ ಉತ್ತಮ ಕಲಾಕೃತಿಗಳನ್ನು ಹೊರತಂದಿರುವುದು ಖುಷಿ ತಂದಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇಂತಹ ಉತ್ತಮವಾದಂತಹ ಕಾರ್ಯ ಮಾಡಿದ ಚಿತ್ರಕಲಾ ಶಿಕ್ಷಕರಗಳಿಗೆ ಅಭಿನಂದನೆ ತಿಳಿಸಿದರು.
ಲೇಖನ: ರಾಘವೇಂದ್ರ ನಾಯಕ ಎನ್.ಟಿ., ಚಿತ್ರಕಲಾ ಕಲಾವಿದರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q