ಕೊರಟಗೆರೆ: ತಾಲೂಕಿನ ಇರಕಸಂದ್ರ ಕಾಲೋನಿ ಬಳಿ ಚಿರತೆ ದಾಳಿಯಿಂದ ಗಾಯಗೊಂಡವರು ದಾಖಲಾಗಿರುವ ಆಸ್ಪತ್ರೆಗೆ, ಮಾಜಿ ಡಿಸಿಎಂ, ಶಾಸಕ ಡಾ.ಜಿ.ಪರಮೇಶ್ವರ್ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಇರಕಸಂದ್ರಕಾಲೋನಿಯ ಗ್ರಾಮದಲ್ಲಿ ಕಳೆದ ಶನಿವಾರ ಬೆಳಿಗ್ಗೆ ಚಿರತೆಯೊಂದು ಬಸ್ ನಿಲ್ದಾಣದ ಸಮೀಪ ಶ್ರೀನಿವಾಸ(60), ರಾಜು(46) ಎನ್ನುವರ ಮೇಲೆ ದಾಳಿ ನಡೆಸಿ, ನಂತರ ಕೆಂಪರಾಜು ಎಂಬುವರ ದನದ ಕೊಟ್ಟಿಗೆಗೆ ನುಗ್ಗಿ ಅಲ್ಲಿ ಹಾಲು ಕರೆಯುತ್ತಿದ್ದ ಚೇತನ್ (15) ಹಾಗೂ ಧನುಷ್ (13) ಎಂಬ ಬಾಲಕರ ಮೇಲೆ ದಾಳಿ ಮಾಡಿತ್ತು.
ಈ ಘಟನೆ ನಡೆದ ಸಂದರ್ಭದಲ್ಲಿ ಶಾಸಕ ಡಾ.ಜಿ.ಪರಮೇಶ್ವರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವರ ಅಭಿನಂದನಾ ಕಾರ್ಯಕ್ರಮಕ್ಕೆ ಕಲಬುರ್ಗಿಗೆ ಹೋಗಿದ್ದರು, ಭಾನುವಾರ ಬೆಳಿಗ್ಗೆ ಬೆಂಗಳೂರಿಗೆ ಬಂದ ಶಾಸಕರು ಹಿಂದೆಯೇ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯ ಗೊಂಡ ಇಬ್ಬರು ಬಾಲಕರ ಮತ್ತು ವೃದ್ದರ ಆರೋಗ್ಯ ವಿಚಾರಿಸಿದರು
ಇದೇ ವೇಳೆ ತಮ್ಮ ವೈಯಕ್ತಿಕ ಹಣದಿಂದ ಬಾಲಕರ ತಂದೆಗೂ ಹಾಗೂ ವೃದ್ದರಿಗೆ ಚಿಕಿತ್ಸೆಗಾಗಿ ಪರಿಹಾರ ಹಣ ನೀಡಿದರು, ನಂತರ ಬಾಲಕರ ತಂದೆಯಿಂದ ಸಂಪೂರ್ಣ ವಿವರ ಪಡೆದ ಶಾಸಕರು ದಾಳಿಯಾದ ಸಂದರ್ಭದಲ್ಲಿ ಸುಮಾರು ಗಂಟೆಗಳ ಕಾಲ ಆಂಬುಲೆನ್ಸ್ ಬರದೆ ಇದ್ದ ವಿಚಾರ ತಿಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ವೈದ್ಯರ ಬಳಿ ವಿಚಾರಿಸಿ, ಕೊರಟಗೆರೆ ವೈದ್ಯಾಧಿಕಾರಿಗೆ ಕರೆ ಮಾಡಿ, ತರಾಟೆಗೆತ್ತಿಕೊಂಡು, ಸಮಸ್ಯೆಯನ್ನು ಸರಿಪಡಿಸುವಂತೆ ಸೂಚನೆ ನೀಡಿದರು.
ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕರು, ಘಟನೆಯ ಸಂಪೂರ್ಣ ವಿವರ ಪಡೆದಿದ್ದೇನೆ. ಗಾಯಾಳುಗಳಿಗೆ ಧೈರ್ಯ ತುಂಬಿದ್ದೇನೆ. ಚಿರತೆಯನ್ನು ಹಿಡಿಯುವಂತೆ ಅರಣ್ಯ ಇಲಾಖೆಯವರಿಗೆ ಆದೇಶ ಮಾಡಲಾಗಿದೆ. ಬಹಳ ಬೇಸರದ ಸಂಗತಿ ಏನೆಂದರೆ ಘಟನೆಯಾದ ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು 108 ತುರ್ತು ವಾಹನಕ್ಕೆ ಕರೆ ಮಾಡಿದ್ದಾರೆ. ಆದರೆ ಕರೆ ಸ್ವೀಕರಿಸಿದವರು ತುರ್ತು ವಾಹನಗಳು ಖಾಲಿ ಇಲ್ಲ ಎಂದು ಉತ್ತರ ನೀಡಿದ್ದಾರೆ. ತುರ್ತುವಾಹನದ ಕರೆಯನ್ನು ಪಡೆದ ವ್ಯಕ್ತಿ ಘಟನೆಯ ಗಂಭೀರತೆಯನ್ನು ಅರಿತು ತಕ್ಷಣ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಕೆರೆಯನ್ನು ವರ್ಗಾವಣೆ ಮಾಡಿ ಈ ಆಸ್ಪತ್ರೆಯಲ್ಲಿ ಇದ್ದ ವಾಹನವನ್ನು ಕಳುಹಿಸಬಹುದಿತ್ತು. ಆದರೆ ಇದು ಹಾಗೆ ಹಾಗಿಲ್ಲ ಇದೊಂದು ಗಂಭೀರ ಲೋಪವಾಗಿದೆ, ಈ ಘಟನೆ ಈ ಆಸ್ಪತ್ರೆಯಲ್ಲಿ ನಡೆದಿದೆಯೋ ಅಧವಾ ಇಡೀ ಇಲಾಖೆಯಲ್ಲಿನ ವ್ಯವಸ್ಥೆಯೇ ಹೀಗೆ ಇದೆಯೋ ತಿಳಿದಿಲ್ಲ, ಇದನ್ನು ಜಿಲ್ಲಾ ವೈದ್ಯಾಧಿಕಾರಿ ಮತ್ತು ಆಯುಕ್ತರ ಬಳಿ ಮಾತನಾಡುವೆ, ಇಲ್ಲಿನ ಸ್ಥಳೀಯ ಆರೋಪದಂತೆ ಸರ್ಕಾರಿ ಆಸ್ಪತ್ರೆಯ ತುರ್ತುವಾಹನಗಳು ಖಾಸಗಿ ತುರ್ತು ವಾಹನಗಳ ಜೋತೆ ಕೈಜೋಡಿಸಿ ಉದ್ದೇಶ ಪೂರ್ವಕವಾಗಿ ಜನರಿಗೆ ತುರ್ತುವಾಹನ ಕಳುಹಿಸದೇ ಇರುವುದು ಕಂಡುಬಂದರೆ ಅವರ ವಿರುದ್ದ ನಿರ್ದಾಕ್ಷಣ ಕ್ರಮಕ್ಕೆ ಕೈಗೊಳ್ಳುವಂತೆ ಇಲಾಖಾ ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಲಾಗುವುದು ಎಂದರು.
ಈ ಸಂರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡ್ಲಹಳ್ಳಿ ಅಶ್ವತ್ಥನಾರಾಯಣ, ಅರಕೆರೆ ಶಂಕರ್, ಪ.ಪಂ.ಸದಸ್ಯ ಎ.ಡಿ.ಬಲರಾಮ ಯ್ಯ ಕೆ.ಆರ್.ಓಬಳರಾಜು, ತಾ.ಪಂ.ಉಪಾಧ್ಯಕ್ಷೆ ನರಸಮ್ಮ ನರಸಿಂಹಮೂರ್ತಿ, ಮುಖಂಡರುಗಳಾದ ಚಿಕ್ಕರಂಗಯ್ಯ, ಕಣಿವೆ ಹನುಮಂತರಾಯಪ್ಪ, ರವಿಕುಮಾರ್, ಅರವಿಂದ, ಮಂಜುನಾಥ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ : ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz