ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದಲ್ಲಿ ಸಿಬಿಐನಿಂದ ಭಾರೀ ದಾಳಿ. ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ನಿವೃತ್ತ ಸಿಬ್ಬಂದಿಯ ಮನೆ ಮತ್ತು ಸಂಸ್ಥೆಗಳಲ್ಲಿ ಶೋಧ ನಡೆಸಲಾಗಿದೆ. ಕೋಲ್ಕತ್ತಾ ಸೇರಿದಂತೆ 13 ಸ್ಥಳಗಳಲ್ಲಿ ಕೇಂದ್ರ ತನಿಖಾ ತಂಡ ತಪಾಸಣೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಇಬ್ಬರು ಮಾಜಿ ಸಿಐಎಸ್ ಎಫ್ ಸಿಬ್ಬಂದಿಯ ಮನೆ ಮತ್ತು ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿದೆ. ಇಬ್ಬರೂ ಸಿಬಿಐ ರಾಡಾರ್ ನಲ್ಲಿದ್ದರು. ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಲಾಲಾ ಅಲಿಯಾಸ್ ಅನೂಪ್ ಮಾಝಿ ಜತೆ ಇವರಿಗೆ ನಿಕಟ ಸಂಬಂಧವಿರುವುದು ಪತ್ತೆಯಾಗಿದೆ. ದಕ್ಷಿಣ ಕೋಲ್ಕತ್ತಾದ ಭವಾನಿಪುರ, ಪಶ್ಚಿಮ ಬುರ್ದ್ವಾನ್ ಜಿಲ್ಲೆಯ ದುರ್ಗಾಪುರ, ಕುಲ್ತಿ ಮತ್ತು ಮಾಲ್ಡಾ ಮುಂತಾದ ಸ್ಥಳಗಳಲ್ಲಿ ಏಕಕಾಲದಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯೊಂದಿಗೆ ದಾಳಿ ನಡೆದಿದೆ. ಕಲ್ಲಿದ್ದಲು ಕಳ್ಳಸಾಗಣೆ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈ ವರ್ಷದ ಆರಂಭದಲ್ಲಿ ಇಸಿಎಲ್ ನ ಮಾಜಿ ನಿರ್ದೇಶಕ ಮತ್ತು ಕೇಂದ್ರ ಸಿಐಎಸ್ ಎಫ್ ನ ಮಾಜಿ ಇನ್ಸ್ ಪೆಕ್ಟರ್ ಆನಂದ್ ಕುಮಾರ್ ಸಿಂಗ್ ಅವರನ್ನು ಬಂಧಿಸಿತ್ತು. ಅವರು ಭ್ರಷ್ಟಾಚಾರದ ಪಾಲು ಪಡೆದಿದ್ದಾರೆ ಮತ್ತು ಲಾಲಾ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ ಎಂದು ಸಿಬಿಐ ಹೇಳಿದೆ.


