ಮಧುಗಿರಿ: ತಾಲೂಕಿನ ಜಿಡಿಪಾಳ್ಯ ಮಜರೆ ಆರ್.ಗೊಲ್ಲಹಳ್ಳಿಯಲ್ಲಿ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ನಡೆಸುತ್ತಿರುವ ಬಾರ್ ಅಂಡ್ ರೆಸ್ಟೋರೆಂಟ್ ಅನ್ನು ಜಪ್ತಿ ಮಾಡಬೇಕು ಎಂದು ಒತ್ತಾಯಿಸಿ, ಕಾಳಜಿ ಫೌಂಡೇಶನ್ ವತಿಯಿಂದ ತಹಶೀಲ್ದಾರ್ ಸಿಬ್ಗತ್ ಉಲ್ಲಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ತಾಲೂಕಿನ ಮಿಡಿಗೇಶಿ ಹೋಬಳಿಯ ಜಿಡಿಪಾಳ್ಯ ಮಜರೆ ಆರ್.ಗೊಲ್ಲಹಳ್ಳಿಯ ಖಾತ ನಂಬರ್ – 11 ಸರ್ವೇ ನಂಬರ್ 29/19 ರಲ್ಲಿ 30 ಗುಂಟೆ ಜಮೀನಿದ್ದು, ಸದರಿ ಜಮೀನು ವ್ಯವಸಾಯಕ್ಕೆ ಯೋಗ್ಯವಾಗಿದ್ದು, ಯಾವುದೇ ಭೂ ಪರಿವರ್ತನೆ ಆಗಿಲ್ಲದಿದ್ದರೂ ಸಹ ಅಧಿಕಾರಿಗಳು ವಾಣಿಜ್ಯ ಭೂ ಪ್ರದೇಶ ಎಂದು ವರದಿ ನೀಡಿ ತರಾತುರಿಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಅನುಕೂಲ ಮಾಡಿಕೊಟ್ಟಿರುತ್ತಾರೆ ಹಾಗೂ ಗಡಿ ಭಾಗವಾಗಿರುವುದರಿಂದ ಆಂಧ್ರ ಜನರು ಮದ್ಯ ಸೇವನೆಗಾಗಿ ಈ ಸ್ಥಳಕ್ಕೆ ಬಂದು ಅನೇಕ ಗಲಭೆಗಳನ್ನು ನಡೆಸುವ ಸಂಭವವಿದ್ದು, ಇದಕ್ಕೆ ಕಾರಣರಾದ ಸಂಬಂಧಿಸಿದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ ಭೂ ಪರಿವರ್ತನೆ ಆಗದೆ ವ್ಯವಸಾಯಕ್ಕೆ ಯೋಗ್ಯವಿರುವ ಜಮೀನನ್ನು ವಾಣಿಜ್ಯಕ್ಕೆ ನೀಡಿರುವ ಜಮೀನು ಮಾಲೀಕರ ಹಾಗೂ ಇದಕ್ಕೆ ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು, ಬಾರ್ ಅಂಡ್ ರೆಸ್ಟೋರೆಂಟ್ ಅನ್ನು ಜಪ್ತಿ ಮಾಡಬೇಕೆಂದು ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾಳಜಿ ಫೌಂಡೇಶನ್ ನ ಪದಾಧಿಕಾರಿಗಳು ಹಾಜರಿದ್ದರು.
ವ್ಯವಸಾಯದ ಜಮೀನಿನಲ್ಲಿ ವಾಣಿಜ್ಯ ಉಪಯೋಗಕ್ಕೆ ಅನುಮತಿ ನೀಡಿರುವ ಬಗ್ಗೆ ಆರೋಪ ಕೇಳಿ ಬಂದಿದ್ದು, ಕೂಡಲೇ ವರದಿ ತರಿಸಿಕೊಂಡು ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಲಾಗುವುದು.
– ಸಿಬ್ಗತ್ ಉಲ್ಲಾ, ತಹಶೀಲ್ದಾರ್. ಮಧುಗಿರಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296