ಕೊರಟಗೆರೆ : ಗ್ಯಾರಂಟಿ ಯೋಜನೆಗೆ ಮಾತ್ರ ದುಡ್ಡು ಕೊಡ್ತಾರೇ, ಅಭಿವೃದ್ದಿ ಕಾಮಗಾರಿಗಳಿಗೆ ಅನುದಾನ ನೀಡುತ್ತಿಲ್ಲ ಎಂಬುದು ವಿರೋಧ ಪಕ್ಷದ ಆರೋಪ. ಟೀಕೆ ಟಿಪ್ಪಣಿಗಳು ಬರುವುದು ಸರ್ವೇ ಸಾಮಾನ್ಯ ಅದಕ್ಕೆ ನನ್ನ ಅಭಿವೃದ್ದಿ ಕಾಮಗಾರಿಗಳೇ ಉತ್ತರ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಟಾಂಗ್ ನೀಡಿದರು.
ಕೊರಟಗೆರೆ ಪಟ್ಟಣ ಮತ್ತು ತಾಲ್ಲೂಕಿನಲ್ಲಿ ಯುವ ಸಬಲೀಕರಣ ಕ್ರೀಡಾ ಇಲಾಖೆಯಿಂದ ಭಾನುವಾರ ಏರ್ಪಡಿಸಲಾಗಿದ್ದ 14 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ನೇರವೇರಿಸಿ ಮಾತನಾಡಿದರು.
ಕೇಂದ್ರ ಸರಕಾರ 53 ಲಕ್ಷ ಕೋಟಿ ಬಜೆಟ್ ಮಂಡಿಸಿದೆ ಅದರಲ್ಲಿ 14 ಲಕ್ಷ ಕೋಟಿ ಸಾಲ ಮಾಡಿದೆ. ನಮ್ಮ ರಾಜ್ಯ ಸರಕಾರ 4 ಲಕ್ಷ 48 ಸಾವಿರ ಬಜೆಟ್ ಮಂಡಿಸಿದೆ. ಬಜೆಟ್ ಗಾತ್ರದಲ್ಲಿ ಶೇ.25ರಷ್ಟು ಒಳಗೆ ಸಾಲ ಮಾಡಲು ನಮ್ಮ ಸರಕಾರಕ್ಕೂ ಅವಕಾಶವಿದೆ. ನಮ್ಮ ದೇಶ ಸೇರಿ ಎಲ್ಲಾ ರಾಜ್ಯಗಳು ಇದನ್ನೇ ಮಾಡುತ್ತವೆ ಇದರ ಮಾಹಿತಿ ವಿರೋಧ ಪಕ್ಷಗಳಿಗೆ ಸರಿಯಾಗಿ ಇಲ್ಲ ಎಂದು ಹೇಳಿದರು.
ನಮ್ಮ ರಾಜ್ಯದ ಸಿಎಂ ನನ್ನ ಕ್ಷೇತ್ರದ ಅಭಿವೃದ್ದಿಗೆ 50 ಕೋಟಿ ಅನುದಾನ ನೀಡಿದ್ದಾರೆ. ಗ್ರಾಮೀಣ ರಸ್ತೆ ಮತ್ತು ಮೂಲ ಸೌಲಭ್ಯ ಅಭಿವೃದ್ದಿಗೆ ವಿಶೇಷ ಆಧ್ಯತೆ ನೀಡಲಾಗಿದೆ. ಗ್ಯಾರಂಟಿ ಯೋಜನೆಯ ಜೊತೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳು ಆಗುತ್ತಿವೆ. ಶಂಕುಸ್ಥಾಪನೆ ಆದ ಕಾಮಗಾರಿಗಳನ್ನು ಗುತ್ತಿಗೆದಾರರು ತ್ವರಿತವಾಗಿ ಮುಗಿಸಿ ಅಭಿವೃದ್ದಿಗೆ ಸಹಕಾರ ನೀಡಬೇಕಿದೆ ಎಂದರು.
ಕ್ರೀಡಾ ಇಲಾಖೆ ಆಯುಕ್ತರಾದ ಚೇತನ್ ಮಾತನಾಡಿ, ಯುವ ಸಬಲೀಕರಣ ಕ್ರೀಡಾ ಇಲಾಖೆಯಿಂದ ಗೃಹ ಸಚಿವ ಡಾ.ಜಿ.ಪರಮೇಶ್ವರ ಕನಸಿನ ಕೂಸು ಒಳಾಂಗಣ ಮತ್ತು ಹೊರಂಗಣ ಕ್ರೀಡಾಂಗಣಕ್ಕೆ 7 ಕೋಟಿ ಕೊರಟಗೆರೆಗೆ ಬಂದಿದೆ. ಗ್ರಾಮೀಣ ಭಾಗದ ಕ್ರೀಡಾಪಟುಗಳು ಕ್ರಿಡಾಂಗಣದ ಅನುಕೂಲ ಪಡೆದು ರಾಜ್ಯ,ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಓ ಅಶ್ವಿಜಾ, ಎಸ್ಪಿ ಅಶೋಕ್, ಮಧುಗಿರಿ ಎಸಿ ಶಿವಪ್ಪ, ತಹಶೀಲ್ದಾರ್ ಮಂಜುನಾಥ, ತಾಪಂ ಇಓ ಅಪೂರ್ವ, ಎಇಇ ಕೆಆರ್ ಐಡಿಎಲ್ ನಾಗಯ್ಯ, ಎಇಇ ಸಿಂಧು, ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ ಕೆ ನಾಗಣ್ಣ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಶ್ವತ್ಥ ನಾರಾಯಣ್, ಅರಕೆರೆ ಶಂಕರ್, ಮಹಿಳಾಧ್ಯಕ್ಷೆ ಜಯಮ್ಮ, ಯುವಧ್ಯಕ್ಷ ಬೈರೇಶ್, ಅಟ್ಟಿಕ ನಾಗರಾಜ್, ವಿನಯ್ ಕುಮಾರ್, ಅರವಿಂದ್ ಸೇರಿದಂತೆ ಇತರರು ಇದ್ದರು.
14 ಕೋಟಿ ಕಾಮಗಾರಿಗೆ ಚಾಲನೆ:
4 ಕೋಟಿ 23 ಲಕ್ಷದ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣ ಮತ್ತು 21 ಲಕ್ಷದ ವನಧನ ವಿಕಾಸ ಕೇಂದ್ರ ಉದ್ಘಾಟನೆ, 3 ಕೋಟಿಯ ಹೊರಂಗಣ ಗ್ಯಾಲರಿ, 1 ಕೋಟಿ 50 ಲಕ್ಷದ ತಾಲ್ಲೂಕು ಆಡಳಿತ ಕಚೇರಿ ರಸ್ತೆ, 2 ಕೋಟಿಯ ತಾ.ಪಂ. ನೂತನ ಕಟ್ಟಡ, 60 ಲಕ್ಷ ಬಯಲು ಆಂಜನೇಯ ರಸ್ತೆ, 1 ಕೋಟಿಯ ಸೋಂಪುರ ರಸ್ತೆಗೆ ಶಂಕುಸ್ಥಾಪನೆ ಸೇರಿ ವಿವಿಧ ಕಾಮಗಾರಿಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ನೇರವೇರಿಸಿದರು.
ಏಪ್ರಿಲ್ ನಲ್ಲಿ ಕಬ್ಬಡಿ ಮತ್ತು ಕ್ರಿಕೆಟ್:
ಕೊರಟಗೆರೆ ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಯುವ ಸ್ನೇಹಿತರಿಂದ ಜಿಲ್ಲಾಮಟ್ಟದ ಕಬ್ಬಡಿ ಮತ್ತು ಕ್ರಿಕೇಟ್ ಪಂದ್ಯಾವಳಿಗೆ ಅನುಮತಿ ನೀಡಿದ್ದೇನೆ. ಏಪ್ರಿಲ್ ಮಾಹೆಯೇ ಕ್ರೀಡಾಪಟುಗಳಿಗೆ ಕ್ರೀಡಾಸ್ಪೂರ್ತಿ ತುಂಬಿ ಯುವಕರಿಗೆ ಉತ್ತೇಜನ ನೀಡಲಿ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಶುಭ ಹಾರೈಸಿದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


