ತುಮಕೂರು: ಜಿಲ್ಲೆಯ ಮಧುಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ವಿ. ವೀರಭದ್ರಯ್ಯ ಮತ್ತು ಜೆಡಿಎಸ್ ಪಕ್ಷದ ಹಲವು ಮುಖಂಡರುಗಳು ಮತದಾರರನ್ನು ತಮ್ಮತ್ತ ಸೆಳೆಯಲು ಧರ್ಮಸ್ಥಳ ಪ್ಯಾಕೇಜ್ ಪ್ರವಾಸಕ್ಕೆ ಕಳುಹಿಸಿಕೊಡುತ್ತಿದ್ದ ವಿಡಿಯೋ ಒಂದು ಕಳೆದ ಮೂರು ದಿನಗಳ ಹಿಂದೆ ಅಷ್ಟೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ನಿಂದ ಸ್ಪರ್ಧೆಗಿಳಿದಿರುವ ಎಂ.ವಿ. ವೀರಭದ್ರಯ್ಯ ಮತದಾರರಿಗೆ ತಮ್ಮ ಪರ ಮತ ಹಾಕಲು ಎರಡು ದಿನಗಳ ಧರ್ಮಸ್ಥಳ ಪ್ಯಾಕೇಜ್ ಪ್ರವಾಸ ಏರ್ಪಡಿಸಿದ್ದಾರೆ ಹಾಗೂ ರಾತ್ರಿ ವೇಳೆ ಬಸ್ ಕಳುಹಿಸುತ್ತಿದ್ದಾರೆ ಎಂದು ಚುನಾವಣಾ ಅಧಿಕಾರಿಗಳಿಗೆ ಘಟನೆಗೆ ಸಂಬಂಧಿಸಿದಂತೆ ದೂರು ನೀಡಲಾಗಿತ್ತು.
ಇಂದು ಬೆಳ್ಳಂ ಬೆಳಗ್ಗೆ ಪ್ರವಾಸಕ್ಕೆ ಹೊರಟಿದ್ದ ಮೂರು ಬಸ್ ಗಳನ್ನು ದೊಡ್ಡೇರಿ ಹೋಬಳಿಯ ಗಿಡದಾಗಲನಹಳ್ಳಿ ಹತ್ತಿರ ಮಧುಗಿರಿ ಉಪವಿಭಾಗಾಧಿಕಾರಿ ರಿಷಿ ಆನಂದ್ ನೇತೃತ್ವದ ಚುನಾವಣಾ ಅಧಿಕಾರಿಗಳ ತಂಡ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರವಾಸಕ್ಕೆ ತೆರಳುತ್ತಿದ್ದ ಅಮಾಯಕ ಜನರು ಐ.ಡಿ.ಹಳ್ಳಿ ಹೋಬಳಿಯ ಯರಮನಹಳ್ಳಿ ಮತ್ತು ಕಸಬಾ ಹೋಬಳಿಯ ಶೆಟ್ಟಿಹಳ್ಳಿ ಮತ್ತು ಮರಬಳ್ಳಿ ಗ್ರಾಮದ ಗ್ರಾಮಸ್ಥರು ಎಂದು ತಿಳಿದುಬಂದಿದೆ.
ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದ ಶಾಸಕ ಎಂ.ವಿ. ವೀರಭದ್ರಯ್ಯ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿವಿಧ ವಿರೋಧ ಪಕ್ಷಗಳು ಒತ್ತಾಯಿಸಿವೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy