ತಿಪಟೂರು: ಸಮಾಜದ ಕಟ್ಟಕಡೆಯ ನಿರ್ಗತಿಕರಿಗೂ ನೆರವಾಗುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹತ್ವದ ಹೆಜ್ಜೆ ಇರಿಸಿದೆ. ತಿಪಟೂರು ನಗರ ಹಾಗೂ ಗ್ರಾಮಾಂತರ ತಾಲೂಕಿನ ಒಟ್ಟು 201 ನಿರ್ಗತಿಕ ಫಲಾನುಭವಿಗಳಿಗೆ ಪ್ರತಿ ತಿಂಗಳು 1000 ರೂ.ಗಳಂತೆ ಜೀವನ ನಿರ್ವಹಣಾ ಮಾಶಾಸನ ನೀಡಲಾಗುತ್ತಿದೆ.
ಇದರೊಂದಿಗೆ, ಯೋಜನೆಯಡಿ ಈಗಾಗಲೇ ಈ ಎರಡು ತಾಲೂಕುಗಳಲ್ಲಿ 10 ‘ವಾತ್ಸಲ್ಯ ಮನೆ’ಗಳನ್ನು ನಿರ್ಮಿಸಲಾಗಿದ್ದು, 2 ಮನೆಗಳ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ಅಲ್ಲದೆ, ಮೂವರು ಫಲಾನುಭವಿಗಳಿಗೆ ಸೋಲಾರ್ ಸೌಲಭ್ಯ ಹಾಗೂ ಒಬ್ಬರಿಗೆ ಶೌಚಾಲಯ ನಿರ್ಮಾಣ ಮಾಡಿಕೊಡುವ ಮೂಲಕ ಮೂಲಸೌಕರ್ಯ ಒದಗಿಸಲಾಗಿದೆ.
ವಾತ್ಸಲ್ಯ ಕಿಟ್ ವಿತರಣೆ:
ಇಂದು ನಡೆದ ವಿಶೇಷ ಕಾರ್ಯಕ್ರಮದಲ್ಲಿ, ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ ಅವರು ಮಂಜೂರು ಮಾಡಿರುವ ‘ವಾತ್ಸಲ್ಯ ಕಿಟ್’ಗಳನ್ನು 40 ಮಂದಿ ಮಾಶಾಸನ ಫಲಾನುಭವಿಗಳಿಗೆ ವಿತರಿಸಲಾಯಿತು.
ಕಿಟ್ ನಲ್ಲಿರುವ ಸಾಮಗ್ರಿಗಳು: ದಿನಬಳಕೆಗೆ ಅಗತ್ಯವಾದ ಪಾತ್ರೆಗಳು, ಸೀರೆ, ಲಂಗ, ಹೊದಿಕೆ, ದಿಂಬು, ಚಾಪೆ, ಬರ್ಮಡಾ, ಟವಲ್, ನೈಟಿ, ಶರ್ಟ್, ಲುಂಗಿ, ಸೋಪು, ಬಾಚಣಿಕೆ ಹಾಗೂ ಪೌಷ್ಟಿಕಾಂಶಯುಕ್ತ ‘ವಾತ್ಸಲ್ಯ ಮಿಕ್ಸ್’ ಈ ಕಿಟ್ನಲ್ಲಿ ಒಳಗೊಂಡಿವೆ.
ಕಾರ್ಯಕ್ರಮದಲ್ಲಿ ತುಮಕೂರು–1 ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ, ತಾಲೂಕು ಯೋಜನಾಧಿಕಾರಿಗಳಾದ ಉದಯ್ ಕೆ. ಮತ್ತು ಸುರೇಶ್ ಕೆ., ನಿಕಟಪೂರ್ವ ನಗರಸಭೆ ಅಧ್ಯಕ್ಷರಾದ ಮೇಘಶ್ರೀ ಸುಜಿತ್ ಭೂಷಣ್, ಜಿಲ್ಲಾ ವಿಚಕ್ಷಣಾಧಿಕಾರಿ ರಾಜೇಶ್, ವಿಮಾ ಸಮನ್ವಯಾಧಿಕಾರಿ ಸಂತೋಷ್, ಜ್ಞಾನವಿಕಾಸ ಸಮನ್ವಯಾಧಿಕಾರಿಗಳಾದ ಪದ್ಮಾವತಿ ಎಂ.ಡಿ. ಮತ್ತು ಭಾಗ್ಯಲಕ್ಷ್ಮಿ ವಿ. ಉಪಸ್ಥಿತರಿದ್ದರು.
ಅಲ್ಲದೆ, ವಿವಿಧ ವಲಯಗಳ ಮೇಲ್ವಿಚಾರಕರು, ಊರಿನ ಗಣ್ಯರು, ಮಹಾನಗರ ಪಾಲಿಕೆ ಸದಸ್ಯರು, ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಯೋಜನೆಯ ಸೇವಾಪ್ರತಿನಿಧಿಗಳು ಭಾಗವಹಿಸಿ ಫಲಾನುಭವಿಗಳಿಗೆ ಕಿಟ್ ವಿತರಿಸಿದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


