ಮುಸ್ಲಿಂ ಸ್ಪೀಕರ್ ಕುರಿತಾದ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ, ಹಿಂದೂಗಳು ನಮಸ್ಕಾರ ಮಾಡ್ಬೇಕು ಅಂತ ನಾನು ಹೇಳಿದ್ದೀನಾ? ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಪ್ರಶ್ನೆ ಮಾಡಿದರು.
ಬೆಳಗಾವಿ ಸುವರ್ಣಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದನ 4ನೇ ತಾರೀಖು ಶುರುವಾಗಿದೆ. ಮೊದಲ ವಾರ ಏನೂ ಮಾತಾಡಿಲ್ಲ. 2ನೇ ವಾರ ಇದ್ದಕ್ಕಿದ್ದಂತೆ ಈ ವಿಷಯ ತೆಗೆದುಕೊಂಡಿದ್ದಾರೆ. ಇದರ ಅಗತ್ಯವಾದರೂ ಏನಿತ್ತು? ನಾನೇನು ತಪ್ಪು ಮಾತಾಡಿದ್ದೇನೆ? ಹೈದರಾಬಾದ್ ಸಭೆಯಲ್ಲಿ ಮಾತಾಡಿದ್ದೇನೆ. ಸಭೆಯಲ್ಲಿ ಯಾರೋ ಒಬ್ಬ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಸಮಾನ ಅವಕಾಶ ಕೊಡಲ್ಲ ಎಂದು ಕೇಳಿದ್ರು. ಆಗ ನಿನ್ನ ಭಾವನೆ ತಪ್ಪಿದೆ ಎಂದು ತಿಳಿವಳಿಕೆ ಹೇಳಿದೆ ಎಂದರು.
ಕರ್ನಾಟಕದಲ್ಲಿ 17 ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ, ಅದರಲ್ಲಿ 9 ಜನ ಗೆದಿದ್ದಾರೆ. 9 ರಲ್ಲಿ 5 ಜನರಿಗೆ ಅಧಿಕಾರಿ ಕೊಟ್ಟಿದ್ದಾರೆ. ನನ್ನ, ರಹೀಮ್ ಖಾನ್ನ ಮಂತ್ರಿ ಮಾಡಿದ್ದಾರೆ. ಸಲೀಂ ಅಹ್ಮದ್ ಅವರನ್ನ ಚಿಫ್ ವಿಪ್ ಮಾಡಿದ್ದಾರೆ. ನಜೀರ್ ಅಹ್ಮದ್ ಅವರನ್ನ ಸಿಎಂ ರಾಜಕೀಯ ಕಾರ್ಯದರ್ಶಿ ಮಾಡಿದ್ದಾರೆ. ಕರ್ನಾಟಕದಲ್ಲಿ ಯು.ಟಿ ಖಾದರ್ ಅವರನ್ನ ಸ್ಪೀಕರ್ ಮಾಡಿದ್ದಾರೆ. ಸ್ಪೀಕರ್ ಅವರಿಗೆ ನನ್ನನ್ನು ಸೇರಿದಂತೆ ಬಿಜೆಪಿ ಅವರು ನಮಸ್ಕಾರ ಮಾಡಬೇಕು ಎಂದು ಹೇಳಿದ್ದೇನೆ. ಇದು ಹೇಗೆ ಅಪಮಾನ ಆಗುತ್ತೆ ಎಂದು ಜಮೀರ್ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ.
ಸಾಂವಿಧಾನಿಕ ಪೀಠಕ್ಕೆ ಎಲ್ಲರೂ ನಮಸ್ಕಾರ ಮಾಡಲೇಬೇಕು ತಾನೇ. ಕಾಂಗ್ರೆಸ್ ಪಕ್ಷ ಸ್ಪೀಕರ್ ಸ್ಥಾನ ಕೊಟ್ಟಿದೆ. ಯಾರೇ ಇದ್ದರೂ ಪೀಠಕ್ಕೆ ನಮಸ್ಕಾರ ಮಾಡಲೇಬೇಕು. ಅಂತಹ ಸ್ಥಾನವನ್ನು ಅಲ್ಪ ಸಂಖ್ಯಾತರಿಗೆ ಕಾಂಗ್ರೆಸ್ ಕೊಟ್ಟಿದೆ ಎಂದು ಹೇಳಿದ್ದೇನೆ. ಹಿಂದೂಗಳು ನಮಸ್ಕಾರ ಮಾಡಬೇಕು ಎಂದು ನಾನು ಹೇಳಿದ್ದೀನಾ? ಎಂದು ಪ್ರಶ್ನೆ ಮಾಡಿದ್ದಾರೆ.


