ಪಾವಗಡ: ಮೃತ ದಲಿತ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ಸವರ್ಣಿಯರು ಅಡ್ಡಿಪಡಿಸಿ, ತಡೆದ ಘಟನೆ ಪಾವಗಡ ತಾಲೂಕಿನ ಕ್ಯಾತಗನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಅಂತ್ಯಸಂಸ್ಕಾರಕ್ಕೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ದಲಿತರು ಬೇರೆ ದಾರಿ ಕಾಣದೇ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ರಸ್ತೆಯಲ್ಲೇ ನಡೆಸಿದ್ದಾರೆ.
ಗ್ರಾಮದ 65 ವರ್ಷ ವಯಸ್ಸಿನ ಈರಣ್ಣ ಎಂಬವರು ಮೃತಪಟ್ಟಿದ್ದರು. ಹೀಗಾಗಿ ಪಾವಗಡ ತಾಲೂಕು ನಿಡಗಲ್ ಹೋಬಳಿ ವ್ಯಾಪ್ತಿಯಲ್ಲಿ ಬರುವ ಕ್ಯಾತಗಾನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಜಮೀನು ಜಾಗದಲ್ಲಿ ಈರಣ್ಣ ಅವರ ಅಂತ್ಯ ಸಂಸ್ಕಾರ ನಡೆಸಲು ದಲಿತ ಸಮುದಾಯದವರು ಮುಂದಾಗಿದ್ದರು.
ಆದ್ರೆ, ಈ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡಲು ಇಲ್ಲಿನ ಕೆಲವು ಸವರ್ಣಿಯರು ಅಡ್ಡಿಪಡಿಸಿದ್ದು, ಈ ಹಿನ್ನೆಲೆಯಲ್ಲಿ ದಲಿತ ಸಮುದಾಯದವರು ರಸ್ತೆಯಲ್ಲೇ ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸಿದ್ದಾರೆ.
ಈ ವಿಚಾರ ತಿಳಿದ ಊರಿನ ದಲಿತ ಸಮುದಾಯದವರು ಹಾಗೂ ದಲಿತ ಸಂಘಟನೆಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದರು. ಬಳಿಕ ತಾಲೂಕು ದಂಡಾಧಿಕಾರಿಗಳಾದ ವರದರಾಜ್ ಅವರಿಗೆ ವಿಷಯ ತಿಳಿಸಲಾಗಿದೆ.
ಸ್ಥಳಕ್ಕೆ ಆಗಮಿಸಿದ ವರದರಾಜು ಅವರು ಮಾತನಾಡಿ, ಈ ಸರ್ಕಾರಿ ಜಮೀನು ಒತ್ತುವರಿ ಮಾಡಿರುವ ವ್ಯಕ್ತಿಗಳಿಗೆ ನೋಟಿಸ್ ಜಾರಿ ಮಾಡಿ ಆದಷ್ಟು ಬೇಗನೆ ತೆರವುಗೊಳಿಸುತ್ತೇನೆ ಮತ್ತು ದಲಿತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ರುದ್ರ ಭೂಮಿಯನ್ನು (ಸ್ಮಶಾನದ) ಜಾಗವನ್ನು ವ್ಯವಸ್ಥೆ ಮಾಡಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಪಿಎಸ್ ಜಿಲ್ಲಾ ಸಂಯೋಜಕರಾದ ಕೆಂಚ ರಾಯಪ್ಪ ಮಾತನಾಡಿ, ಇಡೀ ಪಾವಗಡ ತಾಲೂಕಿನಲ್ಲಿ ದಲಿತರಿಗೆ ಬದುಕುವುದಕ್ಕೆ ಭೂಮಿ ಇಲ್ಲ, ಸತ್ತರೂ ಅಂತ್ಯಸಂಸ್ಕಾರ ಮಾಡಲು ಭೂಮಿ ಇಲ್ಲ. ಸರ್ಕಾರಿ ಜಮೀನು ಯಾರು ಒತ್ತುವರಿ ಮಾಡಿದ್ದಾರೆ, ಅಂತವರಿಗೆ ನೋಟಿಸ್ ಕೊಟ್ಟು ತಾತ್ಕಾಲಿಕವಾಗಿ ಪರಿಹಾರ ಮಾಡಿಕೊಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಡಿಎಸ್ ಎಸ್ ನಾರಾಯಣಪ್ಪ. ಡಾ.ಸುಬ್ಬರಾಯಪ್ಪ ಲಿಂಗದಹಳ್ಳಿ, ನಿವೃತ್ತಿ ಎಎಸ್ ಐ ದುರ್ಗೇಶಪ್ಪ, ಲೋಕೇಶ್, ಸಿ.ಕೆ. ತಿಪ್ಪೇಸ್ವಾಮಿ, ಹನುಮಂತರಾಯಪ್ಪ ಹರಿಹರಪುರ, ಕೆಂಚಪ್ಪ, ರಮೇಶ ಟಿ.ಎನ್. ಪೇಟೆ, ತಿಮ್ಮರಾಜು, ತಿಪ್ಪೇಸ್ವಾಮಿ ಹಾಗೂ ಊರಿನ ಗ್ರಾಮಸ್ಥರು ಇದ್ದರು.
ವರದಿ: ರಾಮಪ್ಪ ಸಿ.ಕೆ.ಪುರ ಪಾವಗಡ