ಕೊರಟಗೆರೆ: ಡಾ.ಜಿ.ಪರಮೇಶ್ವರ್ ರವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಬರಲಿದ್ದು, ರಾಜ್ಯದ ಹಲವರ ಆಶಯದಂತೆ ಹಾಗೂ ತುಮಕೂರು ಜಿಲ್ಲೆಯ ಹಲವು ದಶಕಗಳ ಕನಸಿನಂತೆ ಅವರು ಮುಖ್ಯಮಂತ್ರಿಯಾಗಲಿ ಎನ್ನುವುದು ನಮ್ಮೆಲ್ಲರ ಹಲವು ವರ್ಷಗಳ ಬೇಡಿಕೆಯಾಗಿದೆ ಎಂದು ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಹೊಳವನಹಳ್ಳಿ ಹೋಬಳಿಯ ಚಟ್ಟೆನಹಳ್ಳಿ ಗ್ರಾಮದಲ್ಲಿ ಶ್ರೀ ಗಂಗಮಾಳಮ್ಮ ಮತ್ತು ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯದ ಪ್ರಾಣ ಮತ್ತು ಕಳಸ ಪ್ರತಿಷ್ಠಾಪನೆ, ಹಾಗೂ ದೇವಾಲಯ ಜೀರ್ಣೋದ್ದಾರ ಧಾರ್ಮಿಕ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ನಾವು ಇತ್ತೀಚೆಗೆ ಪತ್ರಿಕೆಗಳಲ್ಲಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಮುಖ್ಯಮಂತ್ರಿಗಳ ಸ್ಥಾನದ ಬಗ್ಗೆ ಚರ್ಚೆಗಳನ್ನು ನೋಡುತ್ತಿದ್ದೇವೆ ನಮ್ಮಗಳ ಹಾಗೂ ತುಮಕೂರು ಜಿಲ್ಲೆಯ ಹಲವು ವರ್ಷಗಳ ಬೇಡಿಕೆಯಂತೆ ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿಯಾದಲ್ಲಿ ಅದು ಈಡೇರಲಿದೆ ಎಂದರು.
ಈ ರಾಜ್ಯ ಕಂಡಂತಹ ಸಜ್ಜನರು, ಸಂಸ್ಕಾರವಂತರು, ವಿದ್ಯಾವಂತರು ಹಾಗೂ ರಾಜಕೀಯ ಜೀವನದಲ್ಲಿ ಅಗಾಧವಾದ ಅನುಭವವನ್ನು ಹೊಂದಿರುವ ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿ ಯಾದರೆ ರಾಜ್ಯದಲ್ಲಿನ ಹಲವರ ದಶಕಗಳ ಕನಸು ನೆರವೇರಲಿದೆ, ಅದೇ ರೀತಿಯಾಗಿ ತುಮಕೂರು ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯಮಂತ್ರಿ ಸ್ಥಾನದ ಹತ್ತಿರದಲ್ಲಿ ಇರುವ ಏಕೈಕ ರಾಜಕಾರಣಿ ಡಾ.ಜಿ.ಪರಮೇಶ್ವರ್ ಆಗಿದ್ದಾರೆ, ಇದು ತಪ್ಪಿದರೆ ಮತ್ತೆ ತುಮಕೂರು ಜಿಲ್ಲೆಗೆ ಅವಕಾಶ ಸಿಗುವುದು ತುಂಬಾ ಕಷ್ಟಕರವಾಗುತ್ತದೆ, ಹಿಂದುಳಿದ ಗಡಿ ಭಾಗದ ತಾಲೂಕುಗಳನ್ನು ಹೊಂದಿರುವ ತುಮಕೂರು ಜಿಲ್ಲೆ ಅಭಿವೃದ್ದಿಗೊಳ್ಳದೆ ಹಿಂದುಳಿದ ಜಲ್ಲೆಯಾಗಿ ಉಳಿಯುತ್ತದೆ ಒಂದು ವೇಳೆ ಬದಲಾವಣೆಯಾದರೆ ಡಾ.ಜಿ. ಪರಮೇಶ್ವರ್ ರವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿ, ಡಾ.ಜಿ.ಪರಮೇಶ್ವರ ರವರ ತಾಯಿ ಗಂಗಮಾಳಮ್ಮ, ಇಲ್ಲಿನೆಲೆಸಿರುವುದು ಗಂಗಮಾಳಮ್ಮ ಮತ್ತು ತಾಯಿ ಹಾಗೂ ದೇವಿಯ ಆಶೀರ್ವಾದದಿಂದ ಮತ್ತು ಮೈಲಾರಲಿಂಗೇಶ್ವರ ಸ್ವಾಮಿ ಕೃಪೆಯಿಂದ ಅವರು ರಾಜ್ಯದ ಅತ್ಯುನ್ನತ ಸ್ಥಾನಕ್ಕೆ ಏರಲಿ ಎಂದರು.
ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ, ಮಾಜಿ ವಿಧಾನ ಪರಿಷತ್ ಸದಸ್ಯ ಹುಲಿನಾಯ್ಕರ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ತಹಶೀಲ್ದಾರ್ ಮಂಜುನಾಥ್, ಇಓ ಅಪೂರ್ವ, ಡಿಸಿಸಿ ನಿರ್ದೇಶಕ ಹನುಮಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಅರಕೆರೆ ಶಂಕರ್, ಮಹಿಳಾ ಅಧ್ಯಕ್ಷೆ ಜಯಮ್ಮ, ಮುಖಂಡರುಗಳಾದ ಮಹಾಲಿಂಗಪ್ಪ, ಎ.ಡಿ. ಬಲರಾಮಯ್ಯ, ಎಲ್,ರಾಜಣ್ಣ, ಕೆ.ಬಿ,ಲೋಕೇಶ್, ವಾಲೇ ಚಂದ್ರಯ್ಯ, ಶಿವಲಿಂಗಯ್ಯ, ದೇವರಾಜು, ನಾಗಭೂಷಣ್, ಲಕ್ಷ್ಮಿಪತಿ ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



