ಕೊರಟಗೆರೆ: ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಜನೌಷಧಿ ಮಳಿಗೆಯು ಕೇವಲ ನೆಪಮಾತ್ರಕ್ಕೆ ಇದ್ದಂತಾಗಿದ್ದು, ಬಡ ಜನರಿಗೆ ಸಿಗಬೇಕಾದ ಔಷಧಿಗಳು ಸಿಗದೇ ಮೂರು ತಿಂಗಳಿಂದ ಬಂದ್ ಆಗಿದ್ದು, ಸಾರ್ವಜನಿಕರಿಗೆ ಸಂಕಷ್ಟವಾಗಿ ಪರಿಣಮಿಸಿದೆ.
ಜನೌಷಧಿ ಮಳಿಗೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಹು ದೊಡ್ಡ ಯೋಜನೆಯಾಗಿದ್ದು, ಜನರಿಗೆ ಸಹಾಯಕವಾಗಿತ್ತು. ಇದೀಗ ಜನೌಷಧಿ ಕೇಂದ್ರ 3 ತಿಂಗಳುಗಳಿಂದ ಮುಚ್ಚಿರುವುದರಿಂದ ಬಡ ಜನರು ದುಬಾರಿ ಹಣ ನೀಡಿ ಖಾಸಗಿ ಔಷಧಿ ಮಳಿಗೆಗಳಿಂದ ಔಷಧಿ ಖರೀದಿಸುವಂತಾಗಿದೆ.
ಈ ಕುರಿತಾಗಿ ಸಂಬಂಧ ಪಟ್ಟ ಎಂಎಸ್ ಐಎಲ್ ಅಧಿಕಾರಿಗಳನ್ನು ಕೇಳಿದರೆ, ಬಿ ಫಾರ್ಮ್, ಡಿ ಫಾರ್ಮ್ ಮಾಡಿರುವ ವಿದ್ಯಾರ್ಥಿಗಳು ನಮಗೆ ಸಿಗುತ್ತಿಲ್ಲ ಎಂದು ಉಡಾಫೆ ಉತ್ತರ ಹೇಳುತ್ತಿದ್ದಾರೆ. ತಮಗೂ ಅದಕ್ಕೂ ಸಂಬಂಧವೇ ಎನ್ನುವಂತಹ ಮನಸ್ಥಿತಿಯನ್ನು ಅಧಿಕಾರಿಗಳು ತೋರುತ್ತಿದ್ದಾರೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದು, ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಎಂಎಸ್ ಐಎಲ್ ಗುತ್ತಿಗೆದಾರ ಡಿ ಎಲ್ ಓ ಮಂಜುನಾಥ್ ಈ ಬಗ್ಗೆ ಪ್ರತಿಕ್ರಿಯಿಸಿ, ಸುಮಾರು ಮೂರು ತಿಂಗಳಿಂದ ಮಳಿಗೆಯನ್ನು ಮುಚ್ಚಿದ್ದೇವೆ. ಫಾರ್ಮಸಿ ಮಾಡಿರುವ ವ್ಯಕ್ತಿಗಳು ಸಿಗದೇ ಇರುವುದು ಇದಕ್ಕೆ ಕಾರಣ. ತುಮಕೂರು ಸಿದ್ದಗಂಗಾ ಕಾಲೇಜು ಸೇರಿದಂತೆ ಅನೇಕ ಕಡೆ ಜಾಹೀರಾತು ಪ್ರಕಟಿಸಿದ್ದೇವೆ. ಆದಷ್ಟು ಬೇಗ ಬಿ ಫಾರ್ಮಸಿ ಅಥವಾ ಡಿ ಫಾರ್ಮಸಿ ಆಗಿದ್ದರೆ ಕೂಡಲೇ ನೇಮಿಸಿಕೊಂಡು ಪ್ರಾರಂಭ ಮಾಡುತ್ತೇವೆ ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಪುಷ್ಪಲತಾ ಅವರು ಪ್ರತಿಕ್ರಿಯಿಸಿ, ಈಗಾಗಲೇ ನಾನು ಅಧಿಕಾರ ವಹಿಸಿಕೊಂಡು ಒಂದು ವರ್ಷ ಆಗಿದೆ. ಆವಾಗಿಂದಲೂ ಇಂದಿನವರೆಗೆ ಜನೌಷಧಿ ಮಳಿಗೆಯ ಬಗ್ಗೆ ಅನೇಕ ಸಮಸ್ಯೆಗಳು ಕೇಳಿ ಬರುತ್ತಿವೆ. ಎರಡು ತಿಂಗಳಿಂದ ಸಂಪೂರ್ಣವಾಗಿ ಮಳಿಗೆಯನ್ನು ಬಂದ್ ಮಾಡಿದ್ದಾರೆ. ಈ ವಿಚಾರವಾಗಿ ಎಂಎಸ್ ಐಎಲ್ ಸೂಪರ್ ವೈಸರ್ ಮಂಜುನಾಥ್ ರವರ ಜೊತೆ ಮಾತನಾಡಿ ಪ್ರಾರಂಭ ಮಾಡಲು ಹೇಳಿದ್ದೇನೆ. ಎಂಎಸ್ ಐಎಲ್ ನವರಿಗೆ ಸೆಪ್ಟಂಬರ್ ಮೊದಲ ವಾರದಲ್ಲೇ ಪ್ರಾರಂಭಿಸುವಂತೆ ಹೇಳಿದ್ದೆ. ಅವರು ಮೇಲಾಧಿಕಾರಿಗಳ ಜೊತೆ ಮಾತಾಡಿ ಒಂದು ವಾರದಲ್ಲೇ ಪ್ರಾರಂಭ ಮಾಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಯುವ ಬಿಜೆಪಿ ಮುಖಂಡ ಗುರುದತ್ ಈ ಬಗ್ಗೆ ಪ್ರತಿಕ್ರಿಯಿಸಿ, ಕಳೆದ ಮೂರು ತಿಂಗಳಿಂದ ಸ್ಥಗಿತಗೊಂಡಿರುವ ಜನೌಷಧಿ ಮಳಿಗೆಗೆ ಹೆಚ್ಚಿನ ಬೇಡಿಕೆ ಇದೆ. ಪ್ರತಿದಿನ ನೂರಾರು ಬಡ ರೋಗಿಗಳು ಆಸ್ಪತ್ರೆಗೆ ಬರುತ್ತಾರೆ. 30 ರಿಂದ 40 ರೂಪಾಯಿ ಒಳಗೆ ತಿಂಗಳಿಗಾಗುವಷ್ಟು ಬಿಪಿ ಮಾತ್ರೆಗಳು ಸೇರಿದಂತೆ ಅನೇಕ ಔಷಧಗಳು ಇಲ್ಲಿ ದೊರೆಯುತ್ತವೆ. ಇದೇ ಮಾತ್ರೆಗಳನ್ನು ಬೇರೆ ಕಡೆ ಖರೀದಿ ಮಾಡಿದಾಗ 140 ರಿಂದ 150 ರೂಪಾಯಿ ಕೊಡಬೇಕು. ದಯವಿಟ್ಟು ಎಂಎಸ್ಐಎಲ್ ನವರು ಶೀಘ್ರವಾಗಿ ಜನೌಷಧಿ ಮಳಿಗೆ ಪ್ರಾರಂಭಿಸಿ ಬಡವರ ಬಗ್ಗೆ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಲು ಸಾರ್ವಜನಿಕರ ಪರವಾಗಿ ಕೇಳಿಕೊಳ್ಳುತ್ತೇನೆ ಎಂದರು.
ಪಟ್ಟಣ ಪಂಚಾಯ್ತಿ ಸದಸ್ಯ ಕರವೇ ನಟರಾಜು ಮಾತನಾಡಿ, ಜನೌಷಧಿ ಮಳಿಗೆಯಿಂದ ಸುಮಾರು ಜನರು ಅನುಕೂಲ ಪಡೆದುಕೊಳ್ಳುತ್ತಿದ್ದರು. ಇವತ್ತಿನ ದಿನ ಔಷಧಿಗಳ ಬೆಲೆ ಮುಗಿಲು ಮುಟ್ಟಿದೆ. ಸರ್ಕಾರವು ಆದಷ್ಟು ಬೇಗ ಒಬ್ಬ ವ್ಯಕ್ತಿಯನ್ನು ಜನೌಷಧಿ ಮಳಿಗೆಗೆ ನಿಯೋಜಿಸಿ ಜನರ ಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಒಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಜನೌಷಧಿ ಮಳಿಗೆ ಇದ್ದೂ ಇಲ್ಲದಂತಾಗಿದೆ. ಬಡವರಿಗೆ ಸಹಾಯವಾಗಿದ್ದ, ಔಷಧಿ ಮಳಿಗೆಯನ್ನೇ ಬಂದ್ ಮಾಡಿದರೆ, ಸರ್ಕಾರಿ ಆಸ್ಪತ್ರೆ ಇದ್ದು ಏನು ಪ್ರಯೋಜನ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಗಮನ ಹರಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ. ಈ ಸಮಸ್ಯೆಯನ್ನು ಶೀಘ್ರವೇ ಪರಿಹರಿಸದಿದ್ದರೆ, ಜನರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ವರದಿ: ಮಂಜುಸ್ವಾಮಿ.ಎಂ.ಎನ್. ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy