- ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ಕೊರಟಗೆರೆ: ಇಡೀ ರಾಜ್ಯದಲ್ಲೇ ರೈತರ ನಿದ್ದೆಗೆಡಿಸಿದ್ದ ಜಾನುವಾರುಗಳಲ್ಲಿ ಕಂಡುಬಂದಿದ್ದ ಚರ್ಮಗಂಟು ರೋಗದ ಭಯದಿಂದ ರೈತರ ಬದುಕು ಬೀದಿಗೆ ಬಿದ್ದಂತಾಗಿತ್ತು. ಅಕ್ಕ ಪಕ್ಕದ ರಾಜ್ಯಗಳಿಂದ ತಗುಲಿದ್ದ ಚರ್ಮಗಂಟು ರೋಗ ರಾಜ್ಯಾದ್ಯಂತ ಹರಡಿ ಸಾವಿರಾರು ಜಾನುವಾರುಗಳು ಮರಣ ಹೊಂದಿದ್ದವು.
ಚರ್ಮಗಂಟು ರೋಗ ಉಲ್ಬಣ ವಾಗುತ್ತಿದ್ದoತೆಯೇ ಎಚ್ಛೆತ್ತುಕೊಂಡ ಸರ್ಕಾರ ಸಂಬಂಧ ಪಟ್ಟ ಪಶು ಸಂಗೋಪನಾ ಇಲಾಖೆಯ ಮೂಲಕ ರಾಜ್ಯದಲ್ಲಿರುವ ಎಲ್ಲಾ ಪಶು ವೈದ್ಯಾಧಿಕಾರಿಗಳಿಗೆ ಆದೇಶ ಹೊರಡಿಸಿ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಲಸಿಕೆ ನೀಡಲು ಸೂಚಿಸಿದ್ದರಿಂದ ಚರ್ಮಗಂಟು ರೋಗ ನಿಯಂತ್ರಣದಲ್ಲಿದೆ.
ಈ ರೋಗವು ಅತೀ ವೇಗವಾಗಿ ಹರಡಿದ ಹಿನ್ನೆಲೆ ರಾಜ್ಯಾಧ್ಯoತ ನಡೆಯುವ ಜಾನುವಾರು, ಕುರಿ ಮತ್ತು ಮೇಕೆಗಳ ಸಂತೆಗಳನ್ನು ನಡೆಸದಂತೆ ಸರ್ಕಾರ ಎಲ್ಲಾ ತಾಲ್ಲೂಕ್ ಆಡಳಿತಕ್ಕೆ ಆದೇಶ ಹೊರಡಿಸುತ್ತಿದ್ದಂತೆಯೇ ಸಂಬಂಧ ಪಟ್ಟ ಅಧಿಕಾರಿಗಳು ಖಡಕ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇದರಿಂದ ಈ ಚರ್ಮಗಂಟು ರೋಗದಲ್ಲಿ ಇಳಿಮುಖ ಕಂಡಿದೆ ಇಲ್ಲದಿದ್ದರೆ ರೈತಾಪಿ ವರ್ಗಕ್ಕೆ ಬರಸಿಡಿಲು ಬಡಿದಂತಾಗುತ್ತಿತ್ತು. ನಮ್ಮ ರಾಜ್ಯದಲ್ಲಿ ಮುಂದುವರಿದಿದ್ದ ಗೋಹತ್ಯೆ ಯನ್ನು ನಿಷೇಧಿಸಿ ಗೋವುಗಳನ್ನು ಉಳಿಸಲು, ಅವುಗಳನ್ನು ಬೆಳೆಸಲು ಸರ್ಕಾರ ಈಗಾಗಲೇ ನೂರಕ್ಕೂ ಹೆಚ್ಚು ಗೋಆಶ್ರಮಗಳನ್ನು ಪ್ರಾರಂಭ ಮಾಡಿದೆ.
ಈ ರೋಗದಿಂದ ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಸರಿ ಸುಮಾರು 932 ರಾಸುಗಳು ಮೃತಪಟ್ಟಿದ್ದು, ಚಿಕ್ಕನಾಯಕನಹಳ್ಳಿ 39, ತುರುವೇಕೆರೆ 18, ತಿಪಟೂರು 29, ಮಧುಗಿರಿ 79 , ಶಿರಾ 230, ಕುಣಿಗಲ್ 111, ಕೊರಟಗೆರೆ 87, ಪಾವಗಡ 192, ಗುಬ್ಬಿ 88, ತುಮಕೂರು ತಾಲ್ಲೂಕಿನಲ್ಲಿ 49 ರಾಸುಗಳು ಚಮಗಂಟು ರೋಗದಿಂದ ಮರಣ ಹೊಂದಿವೆ.
ಕೊರಟಗೆರೆ ತಾಲ್ಲೂಕಿನದ್ಯoತ ಒಟ್ಟು 37588 ರಾಸುಗಳಿದ್ದು, ಇದರಲ್ಲಿ ಸುಮಾರು 36996 ರಾಸುಗಳಿಗೆ ಲಸಿಕೆಯನ್ನು ನೀಡಲಾಗಿದೆ ಉಳಿದ 592 ರಾಸುಗಳು 3 ತಿಂಗಳ ಒಳಗಿರುವ ಕರುಗಳಾಗಿರುವುದರಿಂದ ಲಸಿಕೆಯನ್ನು ನೀಡಿಲ್ಲ.
ಚರ್ಮಗಂಟು ರೋಗಕ್ಕೆ ನಮ್ಮ ತಾಲ್ಲೂಕಿನಲ್ಲಿ ಒಟ್ಟಾರೆ 87 ಜಾನುವಾರುಗಳು ಬಲಿಯಾಗಿದ್ದು ಈಗಾಗಲೇ ಸಂಬಂಧ ಪಟ್ಟ ಪಶು ಇಲಾಖೆಯ ಅಧಿಕಾರಿಗಳು 14 ಲಕ್ಷದ 10 ಸಾವಿರ ರೂಗಳನ್ನು ಸರ್ಕಾರಕ್ಕೆ ಪ್ರಸ್ತಾವನೆಗೆ ಸಲ್ಲಿಸಲಾಗಿದೆ. ಮೊದಲನೇ ಹಂತದಲ್ಲಿ 4 ರಾಸುಗಳಿಗೆ 1 ಲಕ್ಷ ರೂಪಾಯಿಗಳು ನೇರವಾಗಿ ರೈತರ ಖಾತೆಗೆ ಜಮಾ ಆಗಿದೆ, 2ನೇ ಹಂತದಲ್ಲಿ 4 ರಾಸುಗಳಿಗೆ 75. ಸಾವಿರ ಬಿಡುಗಡೆಯಾಗಿ ರೈತರ ಖಾತೆಗೆ ಜಮಾ ಆಗಬೇಕಾಗಿದೆ ಇದರ ಜೊತೆಗೆ 3 ನೇ ಹಂತದಲ್ಲಿ 42 ರಾಸುಗಳಿಗೆ 7 ಲಕ್ಷದ 10 ಸಾವಿರ ರೂಪಾಯಿ ಬಿಡುಗಡೆಯಾಗಿದೆ ಕೆಲ ದಿನಗಳಲ್ಲೇ ರೈತರ ಖಾತೆಗೆ ಸಂದಾಯವಾಗಲಿದೆ. ಇನ್ನು 5 ಲಕ್ಷದ 25 ಸಾವಿರ ರೂಪಾಯಿ ಬಿಡುಗಡೆಯಗಬೇಕಾಗಿದೆ.
ಚರ್ಮಗಂಟು ರೋಗಕ್ಕೆ ಬಲಿಯಾದ ರಾಸುಗಳಿಗೆ ಸರ್ಕಾರದಿಂದ 1 ವರ್ಷದೊಳಗಿರುವ ಕರುಗಳಿಗೆ 5 ಸಾವಿರ, 1 ವರ್ಷ ಮೇಲ್ಪಟ್ಟ ಪಡ್ಡೆ ಅಥವಾ ಹಸುಗೆ 20 ಸಾವಿರ, 1 ವರ್ಷದ ಮೇಲ್ಪಟ್ಟ ಎತ್ತು ಅಥವಾ ಹೋರಿ ಮೃತಪಟ್ಟರೆ ರೈತರಿಗೆ 30 ಸಾವಿರ ಪರಿಹಾರ ಸಿಗಲಿದೆ. ಇದರ ಜೊತೆಗೆ ರೈತರು ತಮ್ಮ ರಾಸುಗಳಿಗೆ ವಿಮೆ ಮಾಡಿಸಿದ್ದಲ್ಲಿ ಅಂತಹವರಿಗೆ ವಿಮೆಯ ಹಣ ಬರುತ್ತದೆಯೇ ವಿನಃ ಅವರಿಗೆ ಸರ್ಕಾರದಿಂದ ಪರಿಹಾರದ ಹಣ ಸಿಗುವುದಿಲ್ಲ.
ಚರ್ಮಗಂಟು ರೋಗಕ್ಕೆ ಸಂಬಂಧಿಸಿದಂತೆ ಇಡೀ ತಾಲ್ಲೂಕಿನಾದ್ಯoತ ಪ್ರತಿ ಹಳ್ಳಿ ಹಳ್ಳಿಗೂ ನಮ್ಮ ಇಲಾಖೆಯ ವೈದ್ಯರು ಭೇಟಿ ನೀಡಿ ಶೇಕಡಾ 100 ರಷ್ಟು ಲಸಿಕೆಯನ್ನು ನೀಡಿದ್ದೇವೆ. ಗ್ರಾಮೀಣ ಭಾಗದಲ್ಲಿ ಕೊಟ್ಟಿಗೆಯ ಅಕ್ಕಪಕ್ಕದಲ್ಲೇ ತಿಪ್ಪೆಗಳು ಇರುವುದರಿಂದ ನೊಣ, ಸೊಳ್ಳೆಗಳ ಹಾವಳಿಯಿಂದ ಈ ಖಾಯಿಲೆ ಹೆಚ್ಚಾಗಿದೆ. ಇದನ್ನು ತಡೆಗಟ್ಟಲು ರೈತರು ಕೊಟ್ಟಿಗೆಯನ್ನು ಸ್ವಚ್ಛವಾಗಿ ಇರಿಸುವುದು, ಜಾನುವಾರುಗಳಿಗೆ ಸಮತೋಲನದ ಆಹಾರವನ್ನು ಕೊಡಬೇಕಾಗಿದೆ ಈ ರೋಗವೂ ಕೊರಟಗೆರೆ ತಾಲ್ಲೂಕಿನಲ್ಲಿ ಶೇ. 98 ರಷ್ಟು ಇಳಿಮುಖ ಕಂಡಿದೆ. ತಾಲ್ಲೂಕಿನಲ್ಲಿ ಯಾವುದೇ ರೈತರ ರಾಸುಗಳಿಗೆ ಈ ರೋಗ ಕಂಡುಬದoರೆ ತಕ್ಷಣ ನಮ್ಮ ಪಶು ಆಸ್ಪತ್ರೆಯಲ್ಲಿ ಲಸಿಕೆ ಪಡೆಯಬಹುದು. ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ರೈತರು ಡೈರಿಗಳ ಅಥವಾ ನಮ್ಮ ಪಶು ಇಲಾಖೆಗಳ ಮುಖಾoತರ ರಾಸುಗಳ ವಿಮೆಯನ್ನು ಮಾಡಿಸಿಕೊಳ್ಳಬೇಕಾಗಿದೆ.
-ಡಾ.ಸಿದ್ದನಗೌಡ. ಆಡಳಿತ ಮುಖ್ಯ ಪಶು ವೈದ್ಯಾಧಿಕಾರಿ. ಕೊರಟಗೆರೆ.
ಚರ್ಮಘಂಟು ರೋಗದಿಂದ ನಮ್ಮ ಜಿಲ್ಲೆ ಸೇರಿದಂತೆ ತಾಲೂಕಿನಲ್ಲಿ ನೂರಾರು ರೈತರುಗಳು ತಮ್ಮ ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ, ಗ್ರಾಮೀಣ ಭಾಗದಲ್ಲಿ ರೈತರು ತಮ್ಮ ರಾಸುಗಳನ್ನು ಕಟ್ಟುವ ಕೊಟ್ಟಿಗೆಯ ಅಕ್ಕ ಪಕ್ಕದಲ್ಲಿ ನೊಣ ಹಾಗೂ ಸೊಳ್ಳೆಗಳು ಬಾರದಂತೆ ಸ್ವಚ್ಛತೆ ಕಾಪಾಡಬೇಕಾಗಿದೆ, ತಾಲೂಕಿನಾದ್ಯಂತ ಪಶು ಇಲಾಖೆ ಅಧಿಕಾರಿಗಳು ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ರಾಶಿಗಳಿಗೆ ಲಸಿಕೆಯನ್ನು ನೀಡುತ್ತಿದ್ದಾರೆ, ರೈತರು ಅತಿ ಮುಖ್ಯವಾಗಿ ತಮ್ಮ ರಾಸುಗಳಿಗೆ ವಿಮೆಯನ್ನು ಮಾಡಿಸಿಕೊಳ್ಳಬೇಕಾಗಿದೆ ಚರ್ಮಗುಂಟು ರೋಗದಿಂದ ತುತ್ತಾದ ಜಾನುವಾರುಗಳ ಕುಟುಂಬದ ರೈತರಿಗೆ ಸಿಗುತ್ತಿರುವ ಪರಿಹಾರ ಹಣವನ್ನು ಸರ್ಕಾರ ಇನ್ನು ಹೆಚ್ಚು ಮಾಡಬೇಕಾಗಿದೆ.
-ಶ್ರೀನಿವಾಸ್. ರೈತ ಹೊಳವನಹಳ್ಳಿ.
ಚರ್ಮ ಗಂಟು ಎಂಬ ಈ ಮಹಾಮಾರಿ ರೋಗದಿಂದ ಸಾವಿರಾರು ಮೂಕ ಪ್ರಾಣಿಗಳು ಬಲಿಯಾಗಿವೆ. ಕರ್ನಾಟಕದಲ್ಲಿ 2020 ರಲ್ಲಿ ಕಾಣಿಸಿಕೊಂಡ ಈ ರೋಗವು ರೈತರಲ್ಲಿ ಆತಂಕ ಸೃಷ್ಟಿಸಿತ್ತು, ಹೈನುಗಾರಿಕೆಯನ್ನೇ ನಂಬಿ ಜೀವನ ಮಾಡುತ್ತಿದ್ದ ನಮ್ಮ ರೈತರಿಗೆ ಈ ರೋಗದಿಂದ ಬರಸಿಡಿಲು ಬಡಿದಂತಾಗಿತ್ತು. ಯಾವ ರೈತರ ಕುಟುಂಬಗಳು ಈ ಚರ್ಮಗಂಟು ರೋಗದಿಂದ ರಾಸುಗಳನ್ನು ಕಳೆದುಕೊಂಡಿದ್ದರೋ ಅಂತಹ ರೈತರಿಗೆ ಹೆಚ್ಚು ದಿನಗಳ ಕಾಲ ಕಾಯಿಸದೆ ಸರ್ಕಾರ ಅತಿ ಜರೂರಾಗಿ ಪರಿಹಾರದ ಹಣವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಬೇಕು. ತಾಲ್ಲೂಕಿನ ಕೆಲ ಪಶು ವೈದ್ಯರು ಸರ್ಕಾರದಿಂದ ಉಚಿತವಾಗಿ ಕೊಡುವ ಪಶು ಔಷದಿಗಳನ್ನು ರೈತರ ಜಾನುವಾರುಗಳಿಗೆ ಚುಚ್ಚುಮದ್ದು ನೀಡುವ ಸಂದರ್ಭದಲ್ಲಿ ಹಣ ಪಡೆಯುತ್ತಿದ್ದಾರೆ ಇದನ್ನು ಸಂಬಂಧ ಪಟ್ಟ ಮೇಲಾಧಿಕಾರಿಗಳು ಕೂಡಲೇ ಗಮನಿಸಿ ಕ್ರಮ ಕೈಗೊಳ್ಳಬೇಕು.
-ರುದ್ರೇಶ್ ಗೌಡ, ತುಮಕೂರು ಜಿಲ್ಲಾ ಕಾರ್ಯದರ್ಶಿ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ. ಸದಸ್ಯರು. ಹಾಲು ಉತ್ಪಾದಕ ಸಹಕಾರ ಸಂಘ.ಲಂಕೇನಹಳ್ಳಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1