ಕೊರಟಗೆರೆ: ತಾಲೂಕಿನ ದೇವರಹಳ್ಳಿ ಬಳಿ ಇರುವ ಮುಕುಂದರಾಯನ ಬೆಟ್ಟದಲ್ಲಿ ಕನ್ನಿಕಾ ವಿದ್ಯಾಪೀಠ ಶಾಲೆಯ ವಿದ್ಯಾರ್ಥಿಗಳು ಪರಿಸರ ದಿನಾಚರಣೆ ಅಂಗವಾಗಿ ಬೀಜದ ಉಂಡೆಗಳನ್ನು ಎಸೆದು ವಿಶಿಷ್ಟ ರೀತಿಯಲ್ಲಿ ಪರಿಸರ ಸಂರಕ್ಷಣೆಯ ಸಂದೇಶವನ್ನು ಹರಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷ ಎಂ.ಜಿ.ಸುಧೀರ್ ಮಾತನಾಡಿ, ಪರಿಸರ ಸಂರಕ್ಷಣೆಯ, ನಾವು ಪರಿಸರವನ್ನು ಪ್ರೀತಿಸುವಂತಹ ಪರಿಸರದೊಂದಿಗೆ ಬದುಕುವಂತಹ ಕಲೆಯನ್ನು ಕಲಿತುಕೊಳ್ಳಬೇಕು ಎಂದು ಮಕ್ಕಳಿಗೆ ತಿಳಿಸಿದರು.
ಶಾಲೆಯ ಜೊತೆ ಪರಿಸರ ದಿನಾಚರಣೆ ಆಚರಣೆಯಲ್ಲಿ ಮಕ್ಕಳಿಗೆ ಸೀಟ್ ಬಾಲ್ ತಯಾರಿಸಿ ಪರಿಸರದ ಅರಿವಿನ ಬಗ್ಗೆ ಕೈಜೋಡಿಸಿದ್ದ ಸಮಾಜ ಸೇವಕಿ ವಾಣಿ ಎಂ.ಪಿ. ಅವರ ಬಗ್ಗೆ ಮಾತನಾಡಿ ಮಹಿಳೆಯರಿಗೆ ಆತ್ಮವಿಶ್ವಾಸ ತುಂಬಿದ ಸ್ವಾವಲಂಬಿ ಮಹಿಳೆಯಾಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ, ಕನ್ನಡ ಜನಪದ ಪರಿಷತ್ತಿನಲ್ಲಿ ಸಂಯುಕ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಜನಪದ ಪರಂಪರೆಯ ಸಂರಕ್ಷಣೆಗೆ ಸಹಕಾರ ನೀಡುತ್ತಿದ್ದಾರೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಕೆಎಸ್ವಿ ರಘು ಮಾತನಾಡಿ, ಸಮಾಜಮುಖಿ ಕಾರ್ಯ ಮಾಡಲು ವಾಣಿ ಮತ್ತು ದರ್ಶನ್ ಸತಿಪತಿಗಳು ಪರಸ್ಪರ ಪ್ರೇರಣೆಯಾಗಿ, ಸಾಂಸ್ಕೃತಿಕ ಮೌಲ್ಯಗಳ ರಕ್ಷಣೆ, ಪರಿಸರ ಪೋಷಣೆ ಮತ್ತು ಸಮಾಜದ ಸುಧಾರಣೆಗೆ ತಮ್ಮದೇ ಆದ ಮಾರ್ಗದಲ್ಲಿ ನಿಷ್ಠೆ ಮತ್ತು ಬದ್ಧತೆಯೊಂದಿಗೆ ಮುಂದುವರಿದಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಖಜಾಂಚಿ ಕೆ.ಎಸ್.ರಾಧಾಕೃಷ್ಣ ಶೆಟ್ಟಿ, ನಿರ್ದೇಶಕ ಕೆ.ಎಸ್.ಪ್ರಶಾಂತ್, ಮುಖ್ಯ ಶಿಕ್ಷಕ ರಾಘವೇಂದ್ರ ಡಿ.ಎಂ., ಸೇರಿದಂತೆ ಇತರೆ ಶಿಕ್ಷಕರು ಮತ್ತು ಮಕ್ಕಳು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW