ಬೆಂಗಳೂರು: ಬೆಂಗಳೂರು ಹಾಗೂ ತುಮಕೂರು ನಡುವೆ ನಮ್ಮ ಮೆಟ್ರೋ ಯೋಜನೆ ಬಗ್ಗೆ ಹೊಸ ಮಾಹಿತಿ ಲಭ್ಯವಾಗಿದ್ದು, ಕಾರ್ಯ ಸಾಧ್ಯತಾ ಪರೀಕ್ಷಾ ವರದಿಯನ್ನು ಈಗಾಗಲೇ ಖಾಸಗಿ ಕಂಪನಿ ಬಿಎಂಆರ್ ಸಿಎಲ್ ಗೆ ಸಲ್ಲಿಸಿದೆ. ಆ ವರದಿಯನ್ನು ಬಿಎಂಆರ್ ಸಿಎಲ್ ಸರ್ಕಾರಕ್ಕೆ ಸಲ್ಲಿಸಿದೆ.
56.6 ಕಿ.ಮೀ. ಮೆಟ್ರೋ ಮಾರ್ಗದಲ್ಲಿ, 25 ಎತ್ತರಿಸಿದ ನಿಲ್ದಾಣಗಳ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಗ್ರೀನ್ ಲೈನ್ ನಲ್ಲಿ ಬರುವ ಮಾದಾವರ ನಿಲ್ದಾಣದಿಂದ ಪ್ರಾರಂಭವಾಗುವ ಮೆಟ್ರೋ ಮಾರ್ಗವು ಶಿರಾ ಗೇಟ್ ವರೆಗೆ ಮೆಟ್ರೋ ಮಾರ್ಗ ಹಾದು ಹೋಗಲಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.
ಕಾರ್ಯಸಾಧ್ಯತಾ ಪರೀಕ್ಷಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುವ ಬಗ್ಗೆ ಬಿಎಂಆರ್ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚೌವ್ಹಾಣ್ ಮಾಹಿತಿ ನೀಡಿದ್ದಾರೆ.
ತುಮಕೂರಿಗೆ ನಮ್ಮ ಮೆಟ್ರೋ ವಿಸ್ತರಣೆಯಾಗಿದ್ದೇ ಆದಲ್ಲಿ, ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ಮತ್ತೊಂದು ಜಿಲ್ಲೆಗೆ ಮೆಟ್ರೋ ಸಂಚಾರ ಮಾಡುವಂತಾಗಲಿದೆ. ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ಸಂಚಾರ ಆರಂಭವಾದರೆ ತುಮಕೂರಿನಲ್ಲಿ ಇತಿಹಾಸ ನಿರ್ಮಾಣವಾಗಲಿದೆ. ಅಲ್ಲದೇ ತುಮಕೂರಿನ ಜನತೆಗೆ ಬೆಂಗಳೂರು ಇನ್ನಷ್ಟು ಹತ್ತಿರವಾಗಲಿದೆ. ಜೊತೆಗೆ ರಾಜ್ಯದ ಬೇರೆ ಬೇರೆ ಜಿಲ್ಲೆಯ ಜನತೆ ತುಮಕೂರಿನಿಂದ ಮೆಟ್ರೋದ ಮೂಲಕ ಬೆಂಗಳೂರಿಗೆ ಸಂಚರಿಸಲು ಅವಕಾಶ ತೆರೆದಂತಾಗುತ್ತದೆ.
ವರದಿಯನ್ನು ಬಿಎಂಆರ್ ಸಿಎಲ್ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು, ಸದ್ಯದಲ್ಲೇ ರಾಜ್ಯ ಸರ್ಕಾರವು ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆಯಿದೆ. ಬಳಿಕ ಕೇಂದ್ರದ ಅನುಮೋದನೆ ದೊರೆಯಬೇಕಾಗುತ್ತದೆ. ತುಮಕೂರಿನ ಸಂಸದರಾಗಿರುವ ವಿ. ಸೋಮಣ್ಣ ಕೇಂದ್ರ ರೈಲ್ವೇ ಸಚಿವರಾಗಿದ್ದಾರೆ. ಹೀಗಾಗಿ ಅನುಮೋದನೆ ಪಡೆಯುವುದು ಕಷ್ಟಕರ ಕೆಲಸವಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
————————————