ಬೆಂಗಳೂರು: ರಾಜ್ಯದಲ್ಲಿ 2500 ಪ್ರೌಢಶಾಲಾ ಶಿಕ್ಷಕರ ನೇಮಕಕ್ಕೆ ನಿರ್ಧಾರ ಕೈಗೊಳ್ಳಲಾಗಿದ್ದು, ಫೆಬ್ರುವರಿಯಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಈ ವಿಚಾರ ತಿಳಿಸಿದ ಸಚಿವರು, ಹೊಸ ಕಾಯ್ದೆ ಅನ್ವಯ ಪರಿಶಿಷ್ಟ ಜಾತಿ–ಪಂಗಡಕ್ಕೆ ನಿಗದಿಪಡಿಸಿರುವ ಮೀಸಲು ಆಧರಿಸಿ ಶಿಕ್ಷಕರ ನೇಮಕಾತಿ ನಡೆಯಲಿದೆ. ಇದರಲ್ಲಿ 250 ಮಂದಿ ದೈಹಿಕ ಶಿಕ್ಷಕರ ನೇಮಕ ನಡೆಯಲಿದೆ ಎಂದರು.
ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ (ಎನ್ಇಪಿ) ಇನ್ನೂ ಜಾರಿಯಾಗಿಲ್ಲ. ರಾಜ್ಯದ 300ರಿಂದ 400 ಆಯ್ದ ಶಾಲೆಗಳಲ್ಲಿ ಜನವರಿ 26ರಿಂದ ಜಾರಿಗೊಳಿಸಲು ಯೋಜಿಸಿದ್ದೇವೆ. ಅದಕ್ಕೆ ಅಗತ್ಯವಿರುವ ಪಠ್ಯಕ್ರಮ ಕೂಡ ರೂಪುಗೊಂಡಿದೆ. ಎನ್ಇಪಿ ಪಠ್ಯ ಆಧಾರಿತ ಅಲ್ಲ. ಚಟುವಟಿಕೆ ಆಧಾರಿತ ಶಿಕ್ಷಣ. ಅಲ್ಲಿ ಬಹಳ ಪುಸ್ತಕಗಳು ಇರುತ್ತವೆ ಎಂದೇನೂ ನನಗೆ ಅನ್ನಿಸಿಲ್ಲ. ಪಠ್ಯಕ್ರಮಕ್ಕೆ ತಕ್ಕಂತೆ ಶಿಕ್ಷಕರಿಗೆ ತರಬೇತಿ ನೀಡಿ ಅವರನ್ನು ಸಜ್ಜುಗೊಳಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.
15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ವಿಚಾರ ಹೈಕೋರ್ಟ್ನಲ್ಲಿದೆ. ಜನವರಿ 18ಕ್ಕೆ ಈ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ಅಲ್ಲಿನ ಪ್ರಕ್ರಿಯೆ ನೋಡಿಕೊಂಡು ಮುಂದಿನ ತೀರ್ಮಾನ ಮಾಡಲಾಗುವುದು ಎಂದು ಇದೇ ವೇಳೆ ನಾಗೇಶ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


