ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಬುಕ್ಕಪಟ್ಟಣ ಗ್ರಾಮ ಪಂಚಾಯತಿಗೆ ವ್ಯಾಪ್ತಿಯ ಗಾಂಧಿನಗರ ಗ್ರಾಮದ ಸಿದ್ಧರಾಜು ಎಂಬುವರ ಗುಡಿಸಿಲಿನ ಮನೆಗೆ ಬೆಂಕಿ ತಗುಲಿ ಗುಡಿಸಲು ಸುಟ್ಟ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸಿದ್ದರಾಜುರವರ ಗುಡಿಸಲಿನ ಮನೆಗೆ ಭೂಮಿ ಮತ್ತು ವಸತಿ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕರಾದ ಹಂದ್ರಾಳ್ ನಾಗಭೂಷಣ್ ಭೇಟಿ ನೀಡಿ ಪರಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು, ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಮಾಧ್ಯಮಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಗಾಂಧಿನಗರ ಗ್ರಾಮದ ದುಸ್ಥಿತಿಯನ್ನು ನೋಡಿದ ನಾನು ಮತ್ತು ನನ್ನ ಸೇಹಿತರ ತಂಡ ಈ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದೇವೆ. ತಹಶೀಲ್ದಾರ್ ರವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಸ್ಥಳೀಯ ಗ್ರಾಮ ಪಂಚಾಯತ್ ವತಿಯಿಂದ ಶಾಸಕರ ವಿಶೇಷ ಅನುದಾನದ ಅಡಿ ಹೆಚ್ಚುವರಿ ಮನೆಗಳನ್ನು ನಿರಾಶ್ರಿತರಿಗೆ ಮಂಜೂರು ಮಾಡಿ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿದ್ದೇನೆ. ತಹಶೀಲ್ದಾರ್ ನಹೀದ ಜಂ ಜಂ ರವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಮತ್ತು ಈಗಾಗಲೇ ಈ ಗ್ರಾಮಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಸರ್ಕಾರದಿಂದ ನೀಡಬಹುದಾದ ಸೌಕರ್ಯಗಳನ್ನು ಶೀಘ್ರವೇ ಒದಗಿಸುವ ಕೆಲಸವನ್ನು ಮಾಡುತ್ತೇವೆ ಎಂದು ನಮಗೆ ತಿಳಿಸಿದ್ದಾರೆಂದು ಹಂದ್ರಾಳು ನಾಗಭೂಷಣ್ ತಿಳಿಸಿದರು.
ಬುಕ್ಕಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಮಯ್ಯ ಮಾತನಾಡಿ, ಮೂರ್ನಾಲ್ಕು ದಿನಗಳ ಹಿಂದೆ ಗುಡಿಸಲು ಸುಟ್ಟು ನಾಶವಾದ ಸಂತ್ರಸ್ತ ಸಿದ್ದರಾಜು ಮನವಿ ಸ್ಪಂದಿಸಿ ನಾನು ವೈಯಕ್ತಿಕ ಧನಸಹಾಯ ಮಾಡುವುದರ ಜೊತೆಗೆ, ಹೊಸದಾಗಿ ಅಂಬೇಡ್ಕರ್ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಿಕೊಡಲು ತಾ.ಪಂ ಇಒ ದೊಡ್ಡಸಿದ್ದಯ್ಯನವರಿಗೆ ದೂರವಾಣಿ ಮೂಲಕ ಕರೆಮಾಡಿ ಸಮಸ್ಯೆ ತಿಳಿಸಿದ ವೇಳೆ ಇಒ ಈ ಆರ್ಥಿಕ ವರ್ಷದಲ್ಲಿ ಮನೆ ಮಂಜೂರು ಮಾಡುತ್ತೇವೆ ಎಂದು ತಿಳಿಸಿದ್ದಾರೆ ಎಂದು ತಿಳಿಸಿದರು.
ಗ್ರಾಮದ ಗುಡಿಸಲು ಮನೆಯ ನಿವಾಸಿ ಸಿದ್ದರಾಜು ಮತನಾಡಿ, ನಾವು ಗುಡಿಸಲಿನಲ್ಲಿ ಸೀಮೆಎಣ್ಣೆ ದೀಪದ ಬೆಳಕಿನಿಂದ ರಾತ್ರಿ ಇಡಿ ಜೀವನ ಸಾಗಿಸುತ್ತಿದ್ದೆವು ಗುಡಿಸಲಿನಲ್ಲಿ ಯಾರೂ ಇಲ್ಲದ ವೇಳೆ ಅನಾಹುತವಾಗಿದೆ. ನಾವು ಕೂಲಿ ಕೆಲಸಕ್ಕೆ ಹೋಗಿದ್ದೆವು. ಕೆಲಸ ಮಾಡುತ್ತಿದ್ದಾಗ ನಮ್ಮೂರಿನ ಯುವಕ ನನಗೆ ಫೋನ್ ಮಾಡಿ ಗುಡಿಸಲು ಹತ್ತಿ ಉರಿಯುತ್ತಿರುವ ಬಗ್ಗೆ ತಿಳಿಸಿದರು. ತಕ್ಷಣವೇ ನಾನು ಬಂದು ನೋಡಿದಾಗ ಗುಡಿಸಲು ಸುಟ್ಟು ಹೋಗಿತ್ತು. ಗುಡಿಸಲಿನಲ್ಲಿದ್ದ ಎರಡು ಚೀಲ ರಾಗಿ ಮತ್ತು ಬಟ್ಟೆ ಸುಟ್ಟು ಹೋಗಿದ್ದವು. ಎರಡು-ಮೂರು ವರ್ಷದ ಹಿಂದೆಯೇ ಅಶ್ರಯ ಯೋಜನೆಯಲ್ಲಿ ಮನೆ ಮಂಜೂರು ಮಾಡಿ ಕೊಡಲು ಗ್ರಾಮ ಪಂಚಾಯತ್ ಗೆ ಅರ್ಜಿ ಕೊಟ್ಟಿದ್ದೇನೆ. ಅದರೆ ಈವರೆಗೂ ನಮಗೆ ಮನೆ ಮಂಜೂರು ಮಾಡಿಕೊಟ್ಟಿಲ್ಲ ಎಂದು ಅಳಲು ತೋಡಿಕೊಂಡರು.
ನಂತರ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ವೀರಭದ್ರರಾದ್ಯ ಮಾತನಾಡಿ, ನಾನು ಗ್ರಾಮ ಪಂಚಾಯತ್ ಪಿಡಿಒ ಆಗಿ ಬಂದು 20 ದಿನಗಳಾಗಿದೆ. ಈಗಾಗಲೇ ತಹಶೀಲ್ದಾರ್ ಮತ್ತು ತಾಪಂ ಇಒ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. 8 ವರ್ಷಗಳ ಹಿಂದೆಯೇ ಮನೆ ಪಟ್ಟಿ ಮಾಡಿ ತಾ.ಪಂ.ಗೆ ಕೊಟ್ಟಿದ್ದಾರೆ ಎಂದು ನನಗೆ ಮಾಹಿತಿ ತಿಳಿದುಬಂದಿದೆ. ನಾನು ಈ ಪಂಚಾಯತಿಯಲ್ಲಿ ಅಧಿಕಾರ ವಹಿಸಕೊಂಡ ಮೇಲೂ ಹೊಸದಾಗಿ ಗುಡಿಸಲು ಮನೆಗಳ ಪಟ್ಟಿಯನ್ನು ತಾಪಂ ಇಒ ದೊಡ್ಡಸಿದ್ದಯ್ಯನವರಿಗೆ ಕಳುಹಿಸಿ ಕೊಟ್ಟಿದ್ದೇನೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಮನೆ ಮಂಜೂರು ಮಾಡಿಕೊಡಲು ಮೇಲಾಧಿಕಾರಿಗಳಿಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಭೂಮಿ ಮತ್ತು ವಸತಿ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕರಾದ ಹಂದ್ರಾಳು ನಾಗಭೂಷಣ್, ನಟರಾಜು, ಮಂಜುನಾಥ ಮತ್ತು ಪದಾಧಿಕಾರಿಗಳು, ಹಾಗೂ ಕರ್ನಾಟಕ ರಣಧೀರರ ವೇದಿಕೆಯ ತಾಲೂಕು ಅಧ್ಯಕ್ಷ ಮಂಜುಸ್ವಾಮಿ ಎಂ.ಎನ್., ಬುಕ್ಕಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿವರಾಮಯ್ಯ, ಪಿಡಿಒ ವೀರಭದ್ರರಾಧ್ಯ, ಗ್ರಾಮದ ಹಿರಿಯ ಮುಖಂಡರು, ಸ್ಥಳೀಯ ನಿವಾಸಿಗಳು ಹಾಜರಿದ್ದರು.
ವರದಿ: ಮಂಜುಸ್ವಾಮಿ, ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz