ಗೋಕಾಕ್: ಉತ್ತರ ಕರ್ನಾಟಕ ಭಾಗದಲ್ಲಿ ಆಗಾಗ್ಗೆ ತಲೆದೋರುವ ಪ್ರಕೃತಿ ವೈಪರೀತ್ಯಗಳಿಗೆ ಸ್ಪಂದಿಸಿ ಸಹಸ್ರಾರು ಜನರಿಗೆ ಸಹಾಯಹಸ್ತವನ್ನು ನೀಡುತ್ತಿರುವ ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ರವರಿಗೆ ಗೋಕಾಕ್ ನಗರದ ಹಾಗೂ ಈ ಭಾಗದ ಪರವಾಗಿ ಧನ್ಯವಾದವನ್ನು ಸಮರ್ಪಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಗೋಕಾಕ್ ನಗರದ ಮಧ್ಯಭಾಗದಲ್ಲಿರುವ ವಾಲ್ಮೀಕಿ ಕ್ರೀಡಾಂಗಣದಲ್ಲಿ ಪ್ರವಾಹ ಪೀಡಿತರಿಗೆ ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾಮಿ ಜಪಾನಂದಜೀ ಅವರ ಬಗ್ಗೆ ಈಗಾಗಲೇ ಅನೇಕ ವಿಚಾರಗಳನ್ನು ಕೇಳ್ಪಟ್ಟಿದ್ದು, ಇಂದು ಅವರ ನೇರ ದರ್ಶನವನ್ನು ಪಡೆದು ಆಶೀರ್ವಾದ ಪಡೆದುದಕ್ಕೆ ಸಂತೋಷವಾಗಿದೆ ಎಂದರು. ಇದೇ ವೇಳೆ ಸ್ವಾಮೀಜಿಗೆ ಗೌರವ ಸಲ್ಲಿಸಿ, ಪುಷ್ಪಮಾಲೆಯನ್ನು ಸಲ್ಲಿಸಿದರು.
ಸ್ವಾಮಿ ಜಪಾನಂದಜೀ ಮಹಾರಾಜ್ ಮಾತನಾಡಿ, ನಮ್ಮ ಸೇವಾಶ್ರಮ ಹಾಗೂ ಇನ್ಫೋಸಿಸ್ ಫೌಂಡೇಷನ್ ರವರ ಸಹಕಾರದಿಂದ ಕಳೆದ 30 ವರ್ಷದಿಂದ ಏಕಪ್ರಕಾರವಾಗಿ ಆರು ರಾಜ್ಯಗಳಲ್ಲಿ ನಿರಂತರವಾದ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದೇವೆ. ಇದೀಗ ಎರಡು ದಿನಗಳ ಹಿಂದೆ ಕೇರಳದ ವಯನಾಡಿನಲ್ಲಿ ನಡೆದ ಭೂಕುಸಿತ ಹಾಗೂ ಪ್ರವಾಹದ ಸಂತ್ರಸ್ತರಿಗೂ ಪರಿಹಾರವನ್ನು ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದರು ತಿಳಿಸಿದಂತೆ ಜೀವನಲ್ಲಿ ಶಿವನ ಕಂಡು, ಮಾನವನಲ್ಲಿ ಮಾಧವನಲ್ಲಿ ಕಂಡು ಸೇವೆ ಸಲ್ಲಿಸುವ ಈ ಒಂದು ಮಹತ್ಕಾರ್ಯಕ್ಕೆ ಇನ್ಫೋಸಿಸ್ ಫೌಂಡೇಷನ್ ರವರು ಅತ್ಯಮೂಲ್ಯ ಸಹಕಾರ ನೀಡುತ್ತಾ ಇದೇ ಸಮಯದಲ್ಲಿ ಗೋಕಾಕ್ ಪ್ರಾಂತ್ಯದ ಆಡಳಿತ ವರ್ಗ, ಪೊಲೀಸ್ ಅಧಿಕಾರಿಗಳು, ರೆವಿನ್ಯೂ ಅಧಿಕಾರಿಗಳ ಅತ್ಯಮೂಲ್ಯ ಸಹಕಾರ ಮತ್ತು ಬೆಂಬಲವನ್ನು ಪೂಜ್ಯ ಸ್ವಾಮೀಜಿಯವರು ಮುಕ್ತ ಕಂಠದಿಂದ ಶ್ಲಾಘಿಸಿದರು.
ತದನಂತರ ಪರಿಹಾರ ಚೀಲಗಳನ್ನು ರಮೇಶ್ ಜಾರಕಿಹೊಳಿ ಹಾಗೂ ಸ್ವಾಮೀಜಿ ಸಂತ್ರಸ್ತರಿಗೆ ವಿತರಿಸಿದರು.
ಇದೇ ವೇಳೆ ಪ್ರವಾಹದಲ್ಲಿ ಮುಳುಗಡೆಯಾಗಿದ್ದ ಮೆಳವಂಕಿ ಗ್ರಾಮದಲ್ಲಿ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಲು ಏರ್ಪಾಡಾಗಿದ್ದ ಸಮಾರಂಭದಲ್ಲಿ ಸ್ವಾಮೀಜಿ ಭಾಗಿಯಾದರು. ಇದೇ ಸಂದರ್ಭದಲ್ಲಿ ಗ್ರಾಮದ ಮುಖಂಡರುಗಳು ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ಹೆಚ್ಚಿನ ರೀತಿಯಲ್ಲಿ ಭಾಗವಹಿಸಿದ್ದರು. ಇಲ್ಲಿಯೂ ಸಹ ಸರಿಸುಮಾರು 1000 ಸಂತ್ರಸ್ತರಿಗೆ ಪರಿಹಾರ ಚೀಲಗಳನ್ನು ವಿತರಿಸಲಾಯಿತು.
ವರದಿ: ನಂದೀಶ್ ನಾಯ್ಕ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q