ಎನ್ ಸಿಸಿ ಕೆಡೆಟ್ ಗಳು ರಾಷ್ಟ್ರ ಮತ್ತು ಸಾರ್ವಜನಿಕ ಸೇವೆಗಾಗಿ ನಿರಂತರವಾಗಿ ತೊಡಗಿಸಿಕೊಳ್ಳಲಿ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲಟ್ ಅವರು ಕರೆ ನೀಡಿದ್ದಾರೆ. ಇಂಟರ್ ಡೈರೆಕ್ಟರೇಟ್ ಸ್ಪೋರ್ಟ್ ಶೂಟಿಂಗ್ ಚಾಂಪಿಯನ್ ಶಿಪ್ 2023 ರಲ್ಲಿ ಭಾಗವಹಿಸಿದ ಕರ್ನಾಟಕ ಮತ್ತು ಗೋವಾದ ಎನ್ಸಿಸಿ ಕೆಡೆಟ್ ಗಳಿಗೆ ರಾಜಭವನದ ಬಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂಟರ್ ಡೈರೆಕ್ಟರೇಟ್ ಸ್ಪೋರ್ಟ್ ಶೂಟಿಂಗ್ ಚಾಂಪಿಯನ್ ಶಿಪ್ 2023 ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ, ಪ್ರಶಸ್ತಿ ಗಳಿಸಿದ ಕರ್ನಾಟಕ ಮತ್ತು ಗೋವಾ ಎನ್ ಸಿ ಸಿ ನಿರ್ದೇಶನಾಲಯದ ಎನ್ ಸಿ ಸಿ ಕೆಡೆಟ್ ಶೂಟಿಂಗ್ ತಂಡಕ್ಕೆ ಅಭಿನಂದಿಸಿದ ರಾಜ್ಯಪಾಲರು, ಯುವ ಕೆಡೆಟ್ ಗಳು ಚಾಂಪಿಯನ್ ಶಿಪ್ ನಲ್ಲಿ ಶ್ಲಾಘನೀಯ ಪ್ರದರ್ಶನ ನೀಡುವ ಮೂಲಕ ಇಡೀ ಕರ್ನಾಟಕ ರಾಜ್ಯವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಎನ್ಸಿಸಿಯ ಗುರಿ ಮತ್ತು ಉದ್ದೇಶವು ಯುವಕರಲ್ಲಿ ಚಾರಿತ್ರ್ಯ ನಿರ್ಮಾಣ, ಶಿಸ್ತು, ಸಾಹಸ ಮನೋಭಾವ ಮತ್ತು ಸ್ವ-ಸೇವೆಯ ಆದರ್ಶಗಳೊಂದಿಗೆ ಸಂಘಟಿತ, ತರಬೇತಿ ಪಡೆದ ಮತ್ತು ಪ್ರೇರಿತ ಯುವಕರ ಸಮೂಹವನ್ನು ರಚಿಸುವುದಾಗಿದೆ. ಯುವಜನತೆ ರಾಷ್ಟ್ರದ ಭವಿಷ್ಯ. ಅವರು ಯಾವುದೇ ವೃತ್ತಿಯನ್ನು ಆರಿಸಿಕೊಂಡರೂ ಸೇವೆ ಸಲ್ಲಿಸುವುದರಲ್ಲಿ ಮುಂದಾಗಿರುತ್ತಾರೆ ಎಂದರು.
ಎನ್ ಸಿಸಿ ಒಂದು ಸ್ಪಂದಿಸುವ, ನಿರಂತರ ಕಲಿಕೆ ಮತ್ತು ವಿಕಸನಗೊಳ್ಳುತ್ತಿರುವ ಸಂಸ್ಥೆಯಾಗಿದೆ. ಅದರ ಧೈಯವಾಕ್ಯ “ಏಕತೆ ಮತ್ತು ಶಿಸ್ತು”. ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ನಮ್ಮ ದೇಶದ ಅತಿದೊಡ್ಡ ಶಿಸ್ತಿನ ಯುವ ಸಂಘಟನೆಯಾಗಿದೆ. ಇದು ಪ್ರಾರಂಭದಿಂದಲೂ ಭದ್ರತೆ ಮತ್ತು ಸೇವೆಗಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಸಶಸ್ತ್ರ ಪಡೆಗಳಿಗೆ ಸೇರಲು ಯುವ ಭಾರತೀಯರನ್ನು ಪ್ರೇರೇಪಿಸಲು ಅನುಕೂಲಕರ ವಾತಾವರಣವನ್ನು ಒದಗಿಸುತ್ತದೆ. ನ್ಯಾಷನಲ್ ಕೆಡೆಟ್ ಕಾರ್ಪ್ಸ್ ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ದೇಶ ಮತ್ತು ವಿಶ್ವದಲ್ಲಿ ಕಾರ್ಪ್ಸ್ ಹೆಮ್ಮೆಪಡುವಂತೆ ಮಾಡಿದೆ. ಜೊತೆಗೆ ಅನೇಕ ಗೌರವ ಮತ್ತು ಪ್ರಶಸ್ತಿಗಳನ್ನು ಪಡೆದಿದೆ ಎಂದು ಪ್ರಶಂಸಿದರು.
ಸಮಾರಂಭದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ ಬೆಂಗಳೂರು ಕಾರ್ಯನಿರ್ವಾಹಕ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ರಿತು ಎ. ಪಾರಿಕ್, ಡೆಪ್ಯುಟಿ ಡೈರೆಕ್ಟರ್ ಜನರಲ್, ನ್ಯಾಷನಲ್ ಕೆಡೆಟ್ ಕಾರ್ಪ್ಸ್, ಕರ್ನಾಟಕ ಮತ್ತು ಗೋವಾ ಏರ್ ಕಮೋಡೋರ್ ಬಿ. ಎಸ್. ಕನ್ವರ್, ವಿಎಸ್ ಎಂ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


