ಕೊರಟಗೆರೆ : ಗುತ್ತಿಗೆ ನೌಕರನ ಸಂಬಳದಿಂದ ಲಂಚ ಪಡೆದು ಕರ್ತವ್ಯ ಲೋಪ ಎಸಗಿದ ಆರೋಪದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಉಮಾದೇವಿ ಜಿ.ಕೆ.ಅವರನ್ನು ಅಮಾತುಗೊಳಿಸಲಾಗಿದೆ.
ಕೊರಟಗೆರೆ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಕಂಪ್ಯೂಟರ್ ಆಪರೇಟರ್ ಆಗಿ ಹೊರ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಾಲಾಜಿ ಕೆ.ಎಸ್. ಎಂಬವರಿಗೆ 2–3 ತಿಂಗಳಿಗೊಮ್ಮೆ ಸಂಬಳ ಮಾಡುತ್ತಿದ್ದು, ಇವರಿಗೆ ಸಂಬಳವಾದಾಗ ಸಹಾಯಕ ನಿರ್ದೇಶಕರಾದ ಉಮಾದೇವಿ ಅವರಿಗೆ ಪ್ರತಿ ತಿಂಗಳಿಗೆ 1,500 ರೂಪಾಯಿ ನೀಡಬೇಕಿತ್ತು. ಈ ನಡುವೆ 01-07-2022ರಿಂದ 15-07-2022ರವರೆಗೆ ಬಾಲಾಜಿ ಕರ್ತವ್ಯಕ್ಕೆ ಗೈರು ಹಾಜರಾಗಿದ್ದರು. ಈ ಅವಧಿಯ ಪೂರ್ತಿ ಸಂಬಳ ಮಾಡಿದ ಉಮಾದೇವಿ ಅವರು, ಪ್ರತೀ ತಿಂಗಳು ಗೈರು ಹಾಜರಾಗಿದ್ದ 4,500 ರೂಪಾಯಿಗಳನ್ನು ಹಾಗೂ ಜುಲೈ ತಿಂಗಳಲ್ಲಿ ಗೈರು ಹಾಜರಾಗಿದ್ದ ಅವಧಿಯಲ್ಲಿನ 3000 ರೂಪಾಯಿಗಳನ್ನು ಸೇರಿಸಿ 7,500 ರೂಪಾಯಿ ಲಂಚ ನೀಡುವಂತೆ ಬಾಲಾಜಿಗೆ ಬೇಡಿಕೆ ಇಟ್ಟರು.
ಇದರಿಂದಾಗಿ ಉಮಾದೇವಿ ವಿರುದ್ಧ ಬಾಲಾಜಿ ಅವರು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ 30—12—2022ರಂದು ದೂರು ಸಲ್ಲಿಸಿದ್ದರು. ಈ ದೂರಿನನ್ವಯ ಪೊಲೀಸ್ ಉಪಾಧೀಕ್ಷಕರು ಲೋಕಾಯುಕ್ತ ಪೊಲೀಸ್ ಠಾಣೆ ತುಮಕೂರು ಇವರು, ಉಮಾದೇವಿ ಜಿ.ಕೆ. ವಿರುದ್ಧ ಕಲಂ 7(ಬಿ) ಪಿ.ಸಿ. ಆಕ್ಟ್ 1988 (ತಿದ್ದುಪಡಿ ಅಧಿನಿಯಮ 20218)ರ ಪ್ರಕಾರ ಲೋಕಾಯುಕ್ತ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ ದಾಖಲಿಸಿದ್ದಾರೆ.
ಆರೋಪಿತ ಉಮಾದೇವಿ ಅವರನ್ನು 16—02—2023ರಂದು ದಸ್ತಗಿರಿ ಮಾಡಲಾಗಿದ್ದು, ಬಳಿಕ ದಸ್ತಗಿರಿ ಕ್ರಮ ಅನುಸರಿಸಿ ಜಾಮೀನಿನ ಮೂಲಕ ಅದೇ ದಿನ ಸಂಜೆ ಬಿಡುಗಡೆಗೊಳಿಸಲಾಗಿತ್ತು. ಇನ್ನೂ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸದರಿ ಅಧಿಕಾರಿಯ ವಿರುದ್ಧ ತನಿಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA