ತುಮಕೂರು: ಬಾಬೂಜಿ ಎಂದೇ ಖ್ಯಾತರಾದ ಬಾಬು ಜಗಜೀವನ್ ರಾಮ್ ಸ್ವಾತಂತ್ರ್ಯ ಹೋರಾಟಗಾರರಷ್ಟೇ ಅಲ್ಲದೇ ಸಮಾಜ ಸುಧಾರಕರು ಆಗಿದ್ದರು. ಬಿಹಾರದ ಚಮ್ಮಾರ್ ಕುಟುಂಬದಲ್ಲಿ ಜನಿಸಿದ ಇವರು, ನೆಹರು ಮಂತ್ರಿಮಂಡಲದಲ್ಲಿ ಕೃಷಿ ಸಚಿವರಾಗಿ ಆಹಾರ ಸ್ವಾವಲಂಬನೆಗೆ ಕಾರಣೀಕರ್ತರಾಗಿ ಹಸಿರು ಕ್ರಾಂತಿಯ ಹರಿಕಾರರಾಗಿದ್ದಾರೆ ಎಂದು ಸ್ಲಂ ಜನಾಂದೋಲನ ಕರ್ನಾಟಕದ ಸಂಚಾಲಕ ಎ.ನರಸಿಂಹಮೂರ್ತಿ ಹೇಳಿದರು.
ಇಂದು ನಗರವಂಚಿತ ಯುವಜನ ಸಂಪನ್ಮೂಲ ಕೇಂದ್ರದಲ್ಲಿ ಡಾ.ಬಾಬು ಜಗಜೀವನ್ ರಾಮ್ ಅವರ 115ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಬು ಜಗಜೀವನ್ ರಾಮ್ ಅವರು, ಮುರಾರ್ಜಿ ದೇಸಾಯಿ ಕಾಲದಲ್ಲಿ ಭಾರತದ ಉಪಪ್ರಧಾನಿಯಾಗಿ ರಕ್ಷಣಾ ಖಾತೆ ಜವಾಬ್ದಾರಿ ವಹಿಸಿಕೊಂಡು ದೇಶ ರಕ್ಷಣೆಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಅಸ್ಟೃಷ್ಯತಾ ನಿವಾರಣೆಯ ನಾಯಕತ್ವವನ್ನು ವಹಿಸಿದ್ದರು ಮತ್ತು ಕಾರ್ಮಿಕ ಮಂತ್ರಿಯಾಗಿ ಕಾರ್ಮಿಕ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಸ್ವಾತಂತ್ರ್ಯ ಭಾರತದ ಕಾರ್ಮಿಕ ಕಾಯ್ದೆಗಳ ಶಿಲ್ಪಿಯಾಗಿದ್ದರು ಎಂದರು.
ಕಾರ್ಮಿಕ ಕಲ್ಯಾಣಕ್ಕಾಗಿ ದುಡಿದ ಉಜ್ವಲ ಯೋಧ, ನವಭಾರತದ ನಿರ್ಮಾತೃ ಬಾಬು ಜಗಜೀವನ್ ರಾಮ್ ಸ್ಮರಣೆಯನ್ನು ಇಂದು ಕಾರ್ಮಿಕ ಮಾಡಿಕೊಳ್ಳಬೇಕಿದೆ. ಕಾರ್ಮಿಕ ಸಚಿವರಾಗಿ ಅವರು ತಂದ ಹಲವಾರು ಕಾನೂನುಗಳು, ಕಾರ್ಮಿಕರ ಹಿತಾಸಕ್ತಿಯನ್ನು ರಕ್ಷಿಸಿದೆ. ಬಡ್ತಿ ಮೀಸಲಾತಿ ಜನಕರಾದ ಬಾಬೂಜಿ ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆ, ಕೈಗಾರಿಕಾ ವಿವಾದ ಕಾಯ್ದೆ, ಇಎಸ್ ಐ ಕಾಯ್ದೆ, ಕಾರ್ಖಾನೆ ಕಾಯ್ದೆ, ಗಣಿಕಾಯ್ದೆ ಮತ್ತು ಗುತ್ತಿಗೆ ದುಡಿಮೆ ಕಾಯ್ದೆ, ಜಾರಿಗೊಳಿಸಿ ಕಾರ್ಮಿಕ ಕಾಯ್ದೆ ಶಿಲ್ಪಿಯಂತೆ ದೇಶದ ಜನರಿಂದ ಗೌರವಕ್ಕೆ ಬಾಜನರಾಗಿದ್ದಾರೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ನಿರ್ವಹಣೆಯನ್ನು ತಿರುಮಲಯ್ಯ ,ಸ್ವಾಗತವನ್ನು ಮೋಹನ್ ಟಿ.ಆರ್. ವಂದನಾರ್ಪಣೆಯನ್ನು ಮಂಗಳಮ್ಮ, ನೆರವೇರಿಸಿದರು. ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ಜಾಬೀರ್ಖಾನ್, ಮುದ್ದಯ್ಯ, ಕಣ್ಣನ್,ಚಕ್ರಪಾಣಿ, ರಂಗನಾಥ, ಶಾರದಮ್ಮ, ಗಂಗಮ್ಮ, ಸುಧಾ, ತಿರುಮಲ, ಶಾಬುದ್ಧಿನ್, ಹನುಮಕ್ಕ, ರಮೇಶ್, ಕೃಷ್ಣ, ಧನಂಜಯ್ ಮುಂತಾದವರು ಪಾಲ್ಗೊಂಡಿದ್ದರು.
ವರದಿ: ಎ.ಎನ್. ಪೀರ್, ತುಮಕೂರು