ತುಮಕೂರು: ಆರೋಗ್ಯವಿಲ್ಲದ ಐಶ್ವರ್ಯ ವ್ಯರ್ಥ. ಐಶ್ವರ್ಯವಿದ್ದರೆ ಸುಖವಾಗಿ ಇರುತ್ತೇವೆ ಎಂದು ಭಾವಿಸುತ್ತೇವೆ. ಆದರೆ ಆರೋಗ್ಯವಿಲ್ಲದೆ ಸುಖವಾಗಿ ಬಾಳಲು ಸಾಧ್ಯವಿಲ್ಲ. ಸಕಲ ಐಶ್ವರ್ಯಕ್ಕಿಂತ ಆರೋಗ್ಯ ಮುಖ್ಯವಾದದ್ದು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್.ಡಿ.ಸಿ., ಸ್ವರ್ವೇಕ್ಷಣ ಘಟಕ, ಜಿಲ್ಲಾ ಆಸ್ಪತ್ರೆ, ತಾಲೂಕು ಆರೋಗ್ಯ ಕಛೇರಿ ಸಹಯೋಗದಲ್ಲಿ ಶನಿವಾರ ನಡೆದ ವಿಶ್ವ ರಕ್ತದೊತ್ತಡ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಕಡಿಮೆ ಆದ್ಯತೆ ನೀಡುತ್ತಾರೆ. ಇದು ಬದಲಾಗಬೇಕು. ಅಸಾಂಪ್ರದಾಯಿಕ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದ ಮನುಷ್ಯನ ಜೀವಿತಾವಧಿ ಕುಸಿಯುತ್ತಿದೆ. ಮೊಬೈಲ್ನಿಂದ ದೂರವಿದ್ದಷ್ಟು ನೆಮ್ಮದಿ. ಯೋಗ ಮತ್ತು ಧ್ಯಾನಗಳೂ ಉತ್ತಮ ಆರೋಗ್ಯಕ್ಕೆ ಸಹಕಾರಿ ಎಂದರು.
ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಛೇರಿಯ ಸಂಯೋಜಕ ಡಾ. ನಾಗರಾಜ್ ಪಾಟೀಲ್ ಮಾತನಾಡಿ, ನಮ್ಮ ಹವ್ಯಾಸಗಳು ಅರೋಗ್ಯದ ಮೇಲೆ ಅಪಾರ ಪ್ರಭಾವವನ್ನು ಬೀರುತ್ತವೆ. ಹಸಿರು ತರಕಾರಿಗಳು ಹಾಗೂ ದವಸ ಧಾನ್ಯಗಳನ್ನು ನಿತ್ಯದ ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಮೂಲಕ ರಕ್ತದ ಒತ್ತಡವನ್ನು ನಿಯಂತ್ರಿಸಬಹುದು ಎಂದರು.
ವಿಶ್ವವಿದ್ಯಾನಿಲಯದ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗಾಗಿ ಮಧುಮೇಹ ಮತ್ತು ರಕ್ತದೊತ್ತಡ ಪರೀಕ್ಷೆಯನ್ನು ಉಚಿತವಾಗಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ತುಮಕೂರು ವಿವಿ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಅಧ್ಯಕ್ಷ ಪ್ರೊ. ಕೆ. ಜಿ. ಪರಶುರಾಮ, ಜಿಲ್ಲಾ ಸರ್ವೇಕ್ಷಣಾ ಮೇಲ್ವಿಚಾರಕರಾದ ಸೋಮಶೇಖರ್, ತಜ್ಞವೈದ್ಯ ಡಾ. ರಾಹುಲ್, ಬಿಎಚ್ ಇಒ ಅಧಿಕಾರಿ ಜಯಣ್ಣ, ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಸೋಮಶೇಖರ್ ಆರ್. ಹಾಗೂ ಇತರರು ಭಾಗವಹಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW