ಹುಳಿಯಾರು: ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಪ್ರೀತಿ ರಾಘವೇಂದ್ರ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಅಧ್ಯಕ್ಷರಾಗಿದ್ದ ರತ್ನಮ್ಮ ರೇವಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪ್ರೀತಿ ರಾಘವೇಂದ್ರ ಆಯ್ಕೆಯಾದರು.
ಚುನಾವಣೆ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ತೆರಳಿದ್ದ ಸದಸ್ಯರು, ಶಾಸಕ ಸಿ.ಬಿ. ಸುರೇಶ್ ಬಾಬು ಅವರೊಂದಿಗೆ ಸುಮಾರು 11.40ರ ಸುಮಾರಿಗೆ ಪಟ್ಟಣ ಪಂಚಾಯಿತಿಗೆ ಆಗಮಿಸಿ ಪ್ರೀತಿ ರಾಘವೇಂದ್ರ ಮಾತ್ರ ನಾಮಪತ್ರ ಸಲ್ಲಿಸಿದರು. ಪ್ರೀತಿ ರಾಘವೇಂದ್ರ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಕೆ. ಪುರಂದರ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಅಧ್ಯಕ್ಷ ಸ್ಥಾನ ಯಾರಿಗೆ ಸಿಗಲಿದೆ ಎಂಬ ಪಟ್ಟಣದ ಜನರ ಕುತೂಹಲಕ್ಕೆ ತೆರೆ ಬಿದ್ದು, ಈ ಬಾರಿ ಕೂಡ ಮೈತ್ರಿಕೂಟ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಪಕ್ಷದ ಮೂವರು ಸದಸ್ಯರು, ಕಾಂಗ್ರೆಸ್ ಪಕ್ಷದ ನಾಲ್ವರು ಸದಸ್ಯರು ಹಾಗೂ ಜೆಡಿಎಸ್ ಪಕ್ಷದ ಇಬ್ಬರು ಸದಸ್ಯರು ಸೇರಿ ಒಟ್ಟು 9 ಸದಸ್ಯರು ಪ್ರೀತಿ ರಾಘವೇಂದ್ರ ಅವರ ಆಯ್ಕೆಗೆ ಬೆಂಬಲ ಸೂಚಿಸಿದರು.
ಮಾಜಿ ಅಧ್ಯಕ್ಷೆ ರತ್ನಮ್ಮ, ಹೇಮಂತ್ ಕುಮಾರ್, ಬಿ.ಬಿ. ಫಾತಿಮಾ, ಉಪಾಧ್ಯಕ್ಷೆ ಕಾವ್ಯಾರಾಣಿ, ಮಂಜಾ ನಾಯ್ಕ, ಅಬೂಬುಕರ್ ಸಿದ್ದಿಕ್, ಮಹಮ್ಮದ್ ಜುಬೇರ್, ಎಸ್.ಆರ್.ಎಸ್. ದಯಾನಂದ್, ಬಡಿಗಿರಾಜು ಸೇರಿ ಸದಸ್ಯರು ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಅಧ್ಯಕ್ಷೆ ಪ್ರೀತಿ ರಾಘವೇಂದ್ರ ಮಾತನಾಡಿ, ಆಯ್ಕೆಯಾಗಲು ಶಾಸಕ ಸಿ.ಬಿ. ಸುರೇಶ್ ಬಾಬು ಹಾಗೂ ಬೆಂಬಲಿಸಿದ ಸದಸ್ಯರ ಸಹಕಾರವೇ ಕಾರಣದೆ. ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಸಾಲಾಪುರ ಪ್ರತಾಪ್, ಆರ್.ಐ.ಶ್ರೀನಿವಾಸ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ವಿ. ಮಂಜುನಾಥ್, ಕಂದಾಯ ಅಧಿಕಾರಿ ಶ್ರುತಿ ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


