ಎಚ್.ಡಿ.ಕೋಟೆ: ಪತ್ನಿಯ ಶೀಲ ಶಂಕಿಸಿದ ಪತಿಯೋರ್ವ 12 ವರ್ಷಗಳಿಂದ ಮನೆ ಬಾಗಿಲಿಗೆ ಮೂರು ಬೀಗ ಜಡಿದು ಪತ್ನಿಯನ್ನು ದಿಗ್ಬಂಧನಲ್ಲಿರಿಸಿದ ಅಮಾನವೀಯ ಕೃತ್ಯ ಎಚ್.ಡಿ.ಕೋಟೆ ತಾಲೂಕಿನ ಎಚ್.ಮಟಕೆರೆಯಲ್ಲಿ ನಡೆದಿದೆ.
ಎಚ್.ಡಿ.ಕೋಟೆ ತಾಲೂಕಿನ ಹೈರಿಗೆ ಗ್ರಾಮದ ಸುಮಾ ಮನೆಯಲ್ಲಿ ದಿಗ್ಬಂಧನದ ಜೀವನ ನಡೆಸುತ್ತಿರುವ ಮಹಿಳೆಯಾಗಿದ್ದಾರೆ. ಇವರ ಪತಿ ಸಣ್ಣಾಲಯ್ಯನ ವಿಪರೀತ ಅನುಮಾನದ ಪ್ರವೃತ್ತಿಯಿಂದಾಗಿ 12 ವರ್ಷಗಳ ಕಾಲ ಪತ್ನಿ ಅಜ್ಞಾತ ವಾಸ ಅನುಭವಿಸಿದ್ದಾಳೆ.
12 ವರ್ಷದ ಹಿಂದೆ ಸಣ್ಣಾಲಯ್ಯನನ್ನು ವಿವಾಹವಾಗಿದ್ದ 3ನೇ ಪತ್ನಿ ಸುಮಾಗೆ ಇಬ್ಬರು ಮಕ್ಕಳಿದ್ದಾರೆ. ಸಣ್ಣಾಲಯ್ಯ ಸುಮಾ ಅವರನ್ನು ವಿವಾಹವಾಗುವುದಕ್ಕೂ ಮೊದಲು ಎರಡು ವಿವಾಹವಾಗಿದ್ದ. ಈತನ ಕಾಟ ಸಹಿಸಲಾಗದೇ ಅವರು ದೂರವಾಗಿದ್ದರು.
ವಿವಾಹವಾದಂದಿನಿಂದ ಪತ್ನಿಯ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ ಸಣ್ಣಾಲಯ್ಯ ಮನೆಯ ಬಾಗಿಲಿಗೆ ಮೂರು ಬೀಗ ಜಡಿದು ಆಕೆಯನ್ನು ದಿಗ್ಬಂಧನದಲ್ಲಿ ಜೀವನ ಕಳೆಯುವಂತೆ ಮಾಡಿದ್ದ.
ಮನೆಯ ಕಿಟಕಿಗಳನ್ನೂ ಬಿಡದೇ ಮುಚ್ಚಿ, ಭದ್ರಪಡಿಸಿ ಪತ್ನಿ ಯಾರೊಂದಿಗೂ ಮಾತನಾಡದಂತೆ ಎಚ್ಚರವಹಿಸಿದ್ದ. ಮನೆಯೊಳಗೆ ಶೌಚಾಲಯ ಕೂಡ ಇಲ್ಲದೇ ಪತ್ನಿ ಇಡೀ ದಿನ ಮನೆಯೊಳಗೆ ಕೂರಬೇಕಿತ್ತು. ಬಕೆಟ್ ನಲ್ಲಿ ಮಲಮೂತ್ರ ಮಾಡಿಸಿ, ರಾತ್ರಿ ವೇಳೆ ಮನೆಯಿಂದ ಹೊರಗೆ ಮಲಮೂತ್ರವನ್ನು ಸಣ್ಣಾಲಯ್ಯ ಪತ್ನಿಯಿಂದಲೇ ಸುರಿಸುತ್ತಿದ್ದ.
ಇನ್ನೂ ತಾನು ನೀಡುತ್ತಿರುವ ಟಾರ್ಚರ್ ಬಗ್ಗೆ ಯಾರಿಗಾದರೂ ತಿಳಿಸಿದರೆ, ಕೊಲೆ ಮಾಡುವುದಾಗಿ ಸುಮಾ ಅವರನ್ನು ಬೆದರಿಸಿದ್ದ. ಸಣ್ಣಾಲಯ್ಯನ ವರ್ತನೆಯ ಬಗ್ಗೆ ಗ್ರಾಮಸ್ಥರು, ನೆರೆಹೊರೆಯವರು ತಿಳಿದಿದ್ದರೂ, ಆತನ ಬಗ್ಗೆ ಮಾತನಾಡಲು ಹೆದರಿ ಮಾಹಿತಿ ನೀಡಲು ಹಿಂಜರಿಯುತ್ತಿದ್ದರು.
ಸುಮಾ ಅವರು ಪತಿಯ ದಿಗ್ಬಂಧನದಲ್ಲಿರುವುದನ್ನು ತಿಳಿದ ಅವರ ಸಂಬಂಧಿಕರೊಬ್ಬರು ನೀಡಿದ ಮಾಹಿತಿಯ ಮೇರೆಗೆ ವಕೀಲ ಸಿದ್ದಪ್ಪಾಜಿ, ಸಾಂತ್ವನ ಕೇಂದ್ರದ ಜಶೀಲ ಎಎಸ್ ಐ ಸುಭಾನ್ ಇತರರ ತಂಡ ಸುಮಾ ಮನೆಗೆ ಭೇಟಿ ನೀಡಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಸುಮಾ ಮನೆಯ ಸುತ್ತ ಗ್ರಾಮಸ್ಥರು ಜಮಾಯಿಸಿದ್ದರು.
ಬುಧವಾರ ರಾತ್ರಿ ಘಟನೆ ಬೆಳಕಿಗೆ ಬಂದ ತಕ್ಷಣವೇ ರಾತ್ರೋರಾತ್ರಿ ಸುಮಾ ಮತ್ತು ಮಕ್ಕಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಸಣ್ಣಾಲಯ್ಯನ ಕೃತ್ಯದ ಬಗ್ಗೆ ಗ್ರಾಮದಲ್ಲಿ ಹಲವಾರು ಬಾರಿ ನ್ಯಾಯ ಪಂಚಾಯತಿ ನಡೆದರೂ ಆತ ತಪ್ಪು ತಿದ್ದಿಕೊಳ್ಳದೇ ಮತ್ತೆ ತನ್ನ ಚಾಳಿ ಮುಂದುವರಿಸುತ್ತಿದ್ದ ಎನ್ನಲಾಗಿದೆ.
ಸದ್ಯ ಮನೆಯ ಬೀಗ ಮುರಿದು ಸುಮಾ ಅವರನ್ನು ಪೊಲೀಸರು ರಕ್ಷಿಸಿದ್ದಾರೆ. ಮಹಿಳೆಯ ಒಪ್ಪಿಗೆಯ ಮೇರೆಗೆ ಸದ್ಯ ತವರು ಮನೆಯಲ್ಲಿ ಮಹಿಳೆಗೆ ಪೊಲೀಸರು ಆಶ್ರಯ ಕೊಡಿಸಿದ್ದಾರೆ. ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.
ವರದಿ: ಮಲಾರ ಮಹದೇವಸ್ವಾಮಿ


